ಮಡಿಕೇರಿ ಹೋಂ ಸ್ಟೇ ದಂಧೆಗೆ ಬೀಳಲಿದೆ ಮೂಗುದಾರ!
ಮಡಿಕೇರಿ, ಜುಲೈ 20: ಕೊಡಗಿನಲ್ಲಿ ಹೆಚ್ಚುತ್ತಿರುವ ಹೋಂಸ್ಟೇ ಏಜೆಂಟರ ದಬ್ಬಾಳಿಕೆ ಮತ್ತು ಅಕ್ರಮ ಚಟುವಟಿಕೆಗಳ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಡಿಕೇರಿ ಎಸ್ಪಿ ರಾಜೇಂದ್ರ ಪ್ರಸಾದ್ ಮುಂದಾಗಿದ್ದಾರೆ.
ಮಡಿಕೇರಿಗೆ ಗೆ ಆಗಮಿಸುವ ಪ್ರವಾಸಿಗರ ವಾಹನಗಳನ್ನು ಅಡ್ಡಗಟ್ಟಿ ಕೆಲವು ಹೋಂಸ್ಟೇ ಏಜೆಂಟ್ಗಳು ದಬ್ಬಾಳಿಕೆ ನಡೆಸುತ್ತಿದ್ದು ಇದಕ್ಕೆಲ್ಲ ಶೀಘ್ರವೇ ಕಡಿವಾಣ ಹಾಕಲಾಗುವುದಾಗಿ ಅವರು ಹೇಳಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಜುಲೈ 19 ರಂದು ನಡೆದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೋಂಸ್ಟೇ ವ್ಯವಸ್ಥೆಗಳು ಹಾದಿ ತಪ್ಪುತ್ತಿರುವುದನ್ನು ಉಲ್ಲೇಖಿಸದರಲ್ಲದೆ, ಕೊಡಗಿನ ಸಂಸ್ಕೃತಿ ಹಾಗೂ ಆಹಾರ ಪದ್ಧತಿಯನ್ನು ಪರಿಚಯಿಸುವ ಮೂಲಕ ಪ್ರವಾಸಿಗರಿಗೆ ಉತ್ತಮ ಆತಿಥ್ಯವನ್ನು ನೀಡುವ ವ್ಯವಸ್ಥೆಯಾಗಿ ಗಮನ ಸೆಳೆಯಬೇಕಾಗಿದ್ದ ಹೋಂಸ್ಟೇಗಳು ಇಂದು ವ್ಯಾಪಾರೀಕರಣಗೊಂಡಿವೆ, ಅಲ್ಲದೆ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಆತಂಕಕಾರಿಯಾಗಿದೆ. ಇದಕ್ಕೆ ಕಡಿವಾಣ ಹಾಕದೆ ಹೋದರೆ ಉಳಿಗಾಲವಿಲ್ಲ ಎಂದ ಅವರು ತಮ್ಮ ವಾಹನವನ್ನು ತಡೆದ ಬಗ್ಗೆಯೂ ವಿವರಿಸಿದರು.
ಕೊಡಗಿನ ಹೋಂಸ್ಟೇಗಳ ಅಕ್ರಮಕ್ಕಿಲ್ಲವೆ ತಡೆ?
ರಾತ್ರಿ 12 ಗಂಟೆ ಸುಮಾರಿಗೆ ನಗರದ ಕಾರ್ಯಪ್ಪ ವೃತ್ತದ ಬಳಿ ನಾನು ಹಾಗೂ ಸ್ನೇಹಿತ ಖಾಸಗಿ ಕಾರಿನಲ್ಲಿ ಬರುತ್ತಿರುವಾಗ ಹೋಂ ಸ್ಟೇ ಮಾಲೀಕರು ವಾಹನವನ್ನು ತಡೆದಿದ್ದಾರೆ. ಹೋಂಸ್ಟೇ ಬೇಕೆ ಎಂದು ವಿಚಾರಿಸಿ ಅಬ್ಬಿಫಾಲ್ಸ್ ಬಳಿಯಲ್ಲಿರುವ ಹೋ ಸ್ಟೇಗೆ ಆಹ್ವಾನಿಸಿದ್ದಾರೆ. ಮಧ್ಯರಾತ್ರಿಯಲ್ಲಿ ವಾಹನಕ್ಕೆ ಅಡ್ಡಹಾಕಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ತಾನು ಎಸ್ಪಿ ಎಂದು ತಿಳಿದಾಗ ಆತ ಅಲ್ಲಿಂದ ತೆರಳಿದ್ದಾನೆ.
ಮಧ್ಯ ರಾತ್ರಿಯಲ್ಲಿ ಕೂಡ ಹೋಂ ಸ್ಟೇ ಏಜೆಂಟ್ ದಂಧೆ ನಡೆಯುತ್ತಿದ್ದು, ಪ್ರವಾಸಿಗರಿಗೆ ಕಿರಿ ಕಿರಿ ಎನಿಸಿದೆ. ಈ ರೀತಿಯ ಬೆಳವಣಿಗೆಗಳು ತಪ್ಪು ಸಂದೇಶವನ್ನು ರವಾನಿಸುತ್ತಿದ್ದು, ಕೊಡಗಿನ ಗೌರವಕ್ಕೆ ಧಕ್ಕೆಯಾಗುತ್ತಿದೆ. ಈಗಾಗಲೇ ವೆಬ್ಸೈಟ್ ಮೂಲಕ ನಡೆಯುತ್ತಿದ್ದ ಹೆಣ್ಣು ಮಕ್ಕಳ ದಂಧೆ ಮತ್ತು ಹನಿ ಟ್ರ್ಯಾಪ್ ಗಳಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಾಗಿದೆ. ಇನ್ನು ಮುಂದೆ ಹೋಂಸ್ಟೇ ಏಜೆಂಟ್ ದಂಧೆ ವಿರುದ್ಧವೂ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವ ಮೂಲಕ ದಂಧೆಗೆ ಕಡಿವಾಣ ಹಾಕಲಾಗುವುದೆಂದು ಎಸ್ಪಿ ಭರವಸೆ ನೀಡಿದರು.