ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಖಂಡಿತ; ಪ್ರತಾಪ್ ಸಿಂಹ
ಮಡಿಕೇರಿ, ನವೆಂಬರ್ 4: ಮದುವೆಗೆ ಮುನ್ನ ಮತಾಂತರ ಕಡ್ಡಾಯ ಎಂಬುವವರು ಹುಟ್ಟು ಮತಾಂಧರು. ಇಂಥ ಒತ್ತಡ ಹೇರುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದು ಅತ್ಯಗತ್ಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮದುವೆಗೂ ಮುನ್ನ ಮತಾಂತರವಾಗಬೇಕು ಎಂಬ ಒತ್ತಡ ಹೇರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಇದು ಸ್ವಾಗತಾರ್ಹ. ಕರ್ನಾಟಕದಲ್ಲಿಯೂ ಸಚಿವ ಸಿ.ಟಿ.ರವಿ ಇಂಥ ಕಾನೂನು ಜಾರಿ ಸಂಬಂಧ ಸರ್ಕಾರ ಒಲವು ತೋರುತ್ತದೆ ಎಂದಿದ್ದಾರೆ. ಇದು ಸೂಕ್ತ ನಿರ್ಧಾರವಾಗಲಿದೆ" ಎಂದು ಹೇಳಿದರು.
ಲವ್ ಜಿಹಾದ್ ಎಂಬುದೇ ವ್ಯವಸ್ಥಿತ ಷಡ್ಯಂತ್ರ; ಶೋಭಾ ಕರಂದ್ಲಾಜೆ
ಪ್ರೀತಿಸುವಾಗ ಅಡ್ಡಿ ಬಾರದ ಧರ್ಮ ಮದುವೆಯಾಗುವಾಗ ಯಾಕೆ ಅಡ್ಡಿ ಬರುತ್ತಿದೆ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಇಂಥ ವ್ಯಕ್ತಿಗಳು ಪ್ರೀತಿಯ ನಾಟಕವಾಡಿ, ಧರ್ಮಾಂಧತೆ ಜತೆಗೆ ಮತಾಂತರದ ಉದ್ದೇಶ ಹೊಂದಿದ್ದಾರೆ. ಲವ್ ಜಿಹಾದ್ ಗೆ ಇದು ಉದಾಹರಣೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕಾನೂನು ಬೇಕೇಬೇಕು ಎಂದರು.
ರಾಜ್ಯದ ಮುಖ್ಯಮಂತ್ರಿಯಾದ ಕೂಡಲೇ ಟಿಪ್ಪುಜಯಂತಿ ರದ್ದುಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ನುಡಿದಂತೆ ನಡೆದುಕೊಂಡು ಟಿಪ್ಪುಜಯಂತಿ ರದ್ದುಗೊಳಿಸಿದ್ದಾರೆ. ಇದೀಗ ಲವ್ ಜಿಹಾದ್ ಗೆ ಸಂಬಂಧಿಸಿದಂತೆಯೂ ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದೂ ಹೇಳಿದರು.
Recommended Video
ಗೋಣಿಕೊಪ್ಪದ ಯುವಕನೋರ್ವ ಪಾಕಿಸ್ತಾನದ ಸೆರೆಮನೆಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೂ ಖಚಿತ ಮಾಹಿತಿ ಲಭಿಸಿಲ್ಲ. ಖಚಿತ ಮಾಹಿತಿ ಇದ್ದಲ್ಲಿ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ವ್ಯವಹರಿಸಿ ಪಾಕಿಸ್ತಾನದ ಇಂಡಿಯನ್ ಹೈ ಕಮೀಷನರ್ ಗಮನಕ್ಕೂ ತಂದು ಆತನನ್ನು ಬಂಧಮುಕ್ತಗೊಳಿಸಿ ಭಾರತಕ್ಕೆ ಖಂಡಿತ ಕರೆತರಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇನೆ ಎಂದು ಭರವಸೆ ಕೊಟ್ಟರು.