ವಿಶೇಷ ಸುದ್ದಿ: ಕಲಾಕಾರರ ಕುಂಚದಲ್ಲಿ ಅರಳಿದ ಕೊಡಗಿನ ಸಂಸ್ಕೃತಿ-ಪ್ರಕೃತಿ!
ಮಡಿಕೇರಿ, ಏಪ್ರಿಲ್ 6: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಾ ಒಂದಲ್ಲ ಒಂದು ರೀತಿಯ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಇದೀಗ ಮತ್ತೊಂದು ವಿನೂತನ ಯೋಜನೆಯನ್ನು ಹಮ್ಮಿಕೊಂಡಿದ್ದು ಅದುವೇ ಅರೆ ಭಾಷೆ ಜನಾಂಗವನ್ನು ಚಿತ್ರಕಲಾ ರೂಪದಲ್ಲಿ ದಾಖಲಿಸುವ ಸಂಸ್ಕೃತಿ-ಪ್ರಕೃತಿ ಯೋಜನೆಯಾಗಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧೆಡೆಯ ಗ್ರಾಮಗಳಲ್ಲಿ ರಾಜ್ಯದ ಚಿತ್ರಕಲಾವಿದರು ತಂಗಿದ್ದು, ಅರೆಭಾಷೆಗೆ ಸಂಬಂಧಿಸಿದ ಸಂಸ್ಕೃತಿ, ಕೃಷಿ, ಜನಜೀವನ ಕ್ರಮದ ಬಗ್ಗೆ ಅಪೂರ್ವ ಚಿತ್ರಕಲಾ ರಚನೆಯಲ್ಲಿ ಸಕ್ರಿಯರಾಗಿರುವುದು ವಿಶೇಷವಾಗಿದೆ. ಕಲಾವಿದರು ಕೊಡಗಿನ ಮನೆಗಳಿಗೆ ತೆರಳಿ ಅಲ್ಲಿಯೇ ವಾರದ ಕಾಲ ತಂಗಿದ್ದು, ಕೊಡಗಿನ ಅರೆಭಾಷೆ ಜನಾಂಗದ ವಿವಿಧ ಆಯಾಮಗಳ ಬಗ್ಗೆ ಕಲಾಕೃತಿ ರಚಿಸುವ ಮೂಲಕ ಹೊರ ಜಿಲ್ಲೆಯ ಕಲಾವಿದರಿಗೆ ಕೊಡಗಿನ ಅರೆಭಾಷಿಕ ಜನಾಂಗದ ಮಾಹಿತಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಹೊರಜಿಲ್ಲೆಯ ಕಲಾವಿದರನ್ನು ಸತ್ಕರಿಸಿ, ತಮ್ಮ ಆಚಾರ, ವಿಚಾರ ತಿಳಿಸುವ ಮೂಲಕ ಸಾಂಸ್ಕೃತಿಕ ವಿನಿಮಯದ ಬೆಸುಗೆಯೂ ಆಗಲಿದೆ.
ಮೈಸೂರಿನಲ್ಲಿ ಮಾ.26ರಿಂದ ಕೈಮಗ್ಗ ಕರಕುಶಲ ಸಂಭ್ರಮ
ಕಂದನನ್ನು ಜಳಕ ಮಾಡಿಸುವ ಅಜ್ಜಿ
ಮೊದಲಿಗೆ ಚೆಂಬು ಗ್ರಾಮದಲ್ಲಿ ಲೇಖಕಿ ಸ್ಮಿತಾ ಅಮೃತರಾಜ್ ಅವರ ಮನೆಗೆ ತೆರಳಿದ ಕಲಾಕಾರರು ಮಂದಿಯ ಸತ್ಕಾರವನ್ನು ಸ್ವೀಕರಿಸುತ್ತಲೇ ಕಂದನನ್ನು ಜಳಕ ಮಾಡಿಸುತ್ತಿರುವ ಅಜ್ಜಿಯ ಅಪೂರ್ವ ಚಿತ್ರ ರಚಿಸಿದ್ದಾರೆ. ಈ ಕಲಾಕೃತಿಯನ್ನು ಮೈಸೂರಿನ ಗಂಗಾಧರ ಮೂರ್ತಿ ಅವರು ರಚಿಸಿದ್ದು, ಈ ಚಿತ್ರಕಲಾ ಯೋಜನೆ ಮೂಲಕ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯ ಪ್ರಯತ್ನ ನಡೆದಿದೆ. ಈ ಕುರಿತಂತೆ ಮಾತನಾಡಿದ ಅವರು, "ನಾನು ಚಿತ್ರ ರಚಿಸುತ್ತಿರುವ ಮನೆಗೆ ಗ್ರಾಮದ ಹಿರಿಯರು, ಮಕ್ಕಳು ಬಂದು ಕಲಾರಚನೆಯ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ನನ್ನ ಪಾಲಿಗೆ ಇದೊಂದು ಹೊಸ ಅನುಭವ' ಎಂದಿದ್ದಾರೆ.
ರಾಜ್ಯದಲ್ಲಿಯೇ ವಿಶಿಷ್ಟ ಪ್ರಯತ್ನ
ಇನ್ನು ರಾಜ್ಯದ ಹಿರಿಯ ಚಿತ್ರಕಲಾವಿದ ಕೆ.ವಿ.ಕಾಳೆ ಅವರು ಅವಂದೂರು ಗ್ರಾಮದ ಹಿರಿಯ ಲೇಖಕ ಪಟ್ಟಡ ಪ್ರಭಾಕರ್ ಅವರ ಮನೆಯಲ್ಲಿ ಚಿತ್ರಕಲೆ ರಚಿಸುತ್ತಿದ್ದಾರೆ. ಆವಂದೂರಿನ ಮಕ್ಕಳು ಇವರ ಮನೆಗೆ ಬಂದು ಕಲಾವಿದ ರಚಿಸುತ್ತಿರುವ ಚಿತ್ರ ನೋಡಿ ತಾವೂ ಚಿತ್ರರಚನೆಗೆ ಮುಂದಾಗಿರುವ ಬೆಳವಣಿಗೆ ನಡೆದಿದೆ. ಅರೆಭಾಷೆ ಅಕಾಡೆಮಿಯ ಈ ಪ್ರಯೋಗ ಮಕ್ಕಳಲ್ಲಿಯೂ ಚಿತ್ರಕಲೆಗೆ ಪ್ರೋತ್ಸಾಹಿಸುತ್ತಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಮನೆಗಳಿಗೆ ತೆರಳಿ ಮನೆಮಂದಿಯ ಆತ್ಮೀಯತೆಯೊಂದಿಗೆ ಚಿತ್ರಕಲೆ ರೂಪಿಸುವ ಈ ಪ್ರಯತ್ನ ರಾಜ್ಯದಲ್ಲಿಯೇ ವಿಶಿಷ್ಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮನೆಮಗಳಾದ ಕಲಾವಿದೆ ಮೀನಾಕ್ಷಿ
ಈ ಕುರಿತು ಮಾತನಾಡಿದ ಚಿತ್ರಕಲಾವಿದ ಕೆ.ವಿ ಕಾಳೆ ಅವರು, ಬಳ್ಳಾರಿ ಜಿಲ್ಲೆಯವನಾದ ತನಗೆ ಕೊಡಗಿನ ಅರೆಭಾಷೆ ಸಂಸ್ಕೃತಿಯನ್ನು ಅರಿತುಕೊಳ್ಳಲು ಈ ಯೋಜನೆಯಿಂದ ಸಾಧ್ಯವಾಯಿತು. ಅರೆಭಾಷೆ ಜನಾಂಗದ ಮರೆಯಾಗುತ್ತಿರುವ ಸಂಸ್ಕೃತಿಯಾದ ಜೋಗಿ ಕುಣಿತದ ಚಿತ್ರರೂಪಿಸುತ್ತಿರುವುದಾಗಿ ಅವರು ಹೇಳಿದರು.
ಈ ಸಂದರ್ಭ ಮಾತನಾಡಿದ ಪಟ್ಟಡ ರೀನಾ ಅವರು, ಕೊರೊನಾ ಕಾರಣದಿಂದ ಶಾಲಾ ತರಗತಿಯಿಂದ ವಂಚಿತಳಾಗಿ ಮನೆಯಲ್ಲಿಯೇ ಇರುವ ಮಗಳಿಗೆ ಕಲಾವಿದರು ಮನೆಯಲ್ಲಿಯೇ ಚಿತ್ರಬಿಡಿಸುವ ಹೊಸ ಅನುಭವದಿಂದಾಗಿ ಚಿತ್ರಕಲಾ ರಚನೆ ಬಗ್ಗೆ ಆಸಕ್ತಿ ಬಂದಿದೆ. ಮಗಳೊಂದಿಗೆ ಗ್ರಾಮದ ಮಕ್ಕಳೂ ಚಿತ್ರಕಲೆ ಪ್ರಾರಂಭಿಸಿರುವ ಹೊಸ ಬೆಳವಣಿಗೆಗೆ ಈ ಯೋಜನೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಕೋಳಿ ಅಂಕದ ಅಪರೂಪದ ಚಿತ್ರ
ಮರಗೋಡಿನ ಕಟ್ಟೆಮಾಡು ಗ್ರಾಮದಲ್ಲಿರುವ ತೋಟಂಬೈಲು ಪಾರ್ವತಿ ಮನೆಯಲ್ಲಿ ನೆಲೆಸಿರುವ ವಿಜಯಪುರದ ಕಲಾವಿದೆ ಮೀನಾಕ್ಷಿ ಈಗ ಮನೆಮಗಳಂತೆಯೇ ಆಗಿಬಿಟ್ಟಿದ್ದಾರೆ. ಪಾರ್ವತಿ ಅವರ ಕರಿಮೆಣಸು ಕೃಷಿ ಪದ್ದತಿಯ ಚಿತ್ರವನ್ನು ಕುಂಚದಲ್ಲಿ ಅರಳಿಸಿರುವ ಮೀನಾಕ್ಷಿ, ಅರೆಭಾಷಿಕರ ಸಾಂಪ್ರದಾಯಿಕ ವಿವಾಹದ ಎಣ್ಣೆ ಅರಿಶಿಣ ಶಾಸ್ತ್ರದ ಕಲಾಚಿತ್ರ ರಚಿಸುತ್ತಿದ್ದಾರೆ. ಮಂಗಳೂರಿನ ಅಜೇಶ್ ಅವರು ಮೇಕೇರಿಯ ಸುಮನ್ ಪೂಜಾರೀರ ಮನೆಯಲ್ಲಿ ಕೋಳಿ ಅಂಕದ ಅಪರೂಪದ ಚಿತ್ರ ರಚಿಸುತ್ತಿದ್ದು, ಇದಕ್ಕಾಗಿ ಕಲಾವಿದರನ್ನು ಮನೆಮಂದಿ ಚೇರಂಗಾಲ ದೇವಾಲಯಕ್ಕೆ ಕರೆದೊಯ್ದು ಕೋಳಿ ಅಂಕದ ಸಮಗ್ರ ಮಾಹಿತಿ ನೀಡಿದ್ದಾರೆ.
ಲಕ್ಷ್ಮಣ್ ಮನೆಯಲ್ಲಿ ಕಾಫಿ ಕೃಷಿ
ಕಾಲೂರು ಗ್ರಾಮದ ಕುಕ್ಕೇರ ಲಕ್ಷ್ಮಣ್ ಮನೆಯಲ್ಲಿ ಕೊಡಗಿನ ಅರೆಭಾಷಿಕ ಸಮುದಾಯದ ಕಾಫಿ ಕೃಷಿ ಪದ್ದತಿಯ ಕುರಿತ ಚಿತವನ್ನು ಮಂಗಳೂರಿನ ಪ್ರಥ್ವಿರಾಜ್ ಬಿಡಿಸಿದ್ದಾರೆ. ಹಾಸನದ ಕಲಾವಿದ ಕೆ.ಎನ್.ಶಂಕರಪ್ಪ ಅವರಿಗೆ ತಮ್ಮ ಮನೆಯಲ್ಲಿ ಅತಿಥ್ಯ ನೀಡಿರುವ ವೈದ್ಯ, ಲೇಖಕ ಡಾ.ಕುಶ್ವಂತ್ ಕೋಳಿಬೈಲು ಅವರು ಅಕಾಡೆಮಿಯಿಂದ ಬಹಳ ಒಳ್ಳೆಯ ಪ್ರಯತ್ನ ನಡೆದಿದೆ. ಕಲಾವಿದರು ಮತ್ತು ಮನೆಮಂದಿಯ ನಡುವಿನ ಸಂವಾದ ಮತ್ತು ಸಾಂಸ್ಕೃತಿಕ ವಿನಿಮಯ ಕೂಡ ಈ ವಿನೂತನ ಶಿಬಿರದ ದೂರದೃಷ್ಟಿಯಾಗಿದೆ ಎಂದರು.
ಮಂಗಳೂರಿನ ಸೈಯದ್ ಅಸೀಫ್ ಆಲಿ, ವಿರಾಜಪೇಟೆಯ ಬಿ.ಆರ್.ಸತೀಶ್, ಮಡಿಕೇರಿಯ ಕೆ.ಆರ್.ಮಂಜುನಾಥ್, ಮರಗೋಡಿನ ರೂಪೇಶ್ ನಾಣಯ್ಯ ಕೂಡ ಕೊಡಗಿನಲ್ಲಿ ಅರೆಭಾಷೆ ಸಂಸ್ಕೃತಿಯ ವಿಶಿಷ್ಟ ಚಿತ್ರಗಳನ್ನು ಕುಂಚದ ಮೂಲಕ ಆಕರ್ಷಕವಾಗಿ ರೂಪಿಸಿರುವುದು ನಿಜಕ್ಕೂ ವಿನೂತನ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾಂಸ್ಕೃತಿಕ ಚಿತ್ರಗಳ ದಾಖಲೀಕರಣ
ಈ ಕುರಿತಂತೆ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ನಮ್ಮ ಪ್ರದೇಶದ ಸಾಂಸ್ಕೃತಿಕ ಚಿತ್ರಗಳು ದಾಖಲೀಕರಣಗೊಳ್ಳಬೇಕು ಎಂಬ ಮೂಲ ಉದ್ದೇಶದೊಂದಿಗೆ ಯೋಜನೆ ಪ್ರಾರಂಭಿಸಿದ್ದು, ಕಲಾವಿದರು ಕೊಡಗಿಗೆ ಬಂದು ಇಲ್ಲಿನ ಸಮುದಾಯದೊಂದಿಗೆ ಬೆರೆತು ಅವರ ಸಂಸ್ಕೃತಿ, ಪ್ರಕೃತಿಯನ್ನು ಅರಿತುಕೊಳ್ಳುವ ಪ್ರಯತ್ನ ಇದಾಗಿದೆ. ಸಾಂಸ್ಕೃತಿಕ ಕೊಡುಕೊಳ್ಳುವಿಕೆಗೆ ಈ ಚಿತ್ರಕಲಾ ಯೋಜನೆ ಕಾರಣವಾಗಿದೆ ಎಂದಿದ್ದಾರೆ.
Recommended Video