ಕುಶಾಲನಗರದಲ್ಲಿ 20 ವರ್ಷಗಳಿಂದ ನಾಪತ್ತೆ ಆಗಿದ್ದ ಮಗ ಮನೆಗೆ ಬಂದಾಗ...
ಮಡಿಕೇರಿ, ಫೆಬ್ರವರಿ 26: ಒಂದಲ್ಲ, ಎರಡಲ್ಲ... ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಮನೆಯಿಂದ ಹೊರ ನಡೆದಿದ್ದ ಮಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರೆ? ಮಗ ಬದುಕಿದ್ದಾನೋ ಇಲ್ಲವೋ, ಇದ್ದರೆ ಎಲ್ಲಿರಬಹುದು? ಇಂದಲ್ಲಾ ನಾಳೆ ಅವನು ಬರಬಹುದು... ಹೀಗೆ ಪ್ರಶ್ನೆ, ನಿರೀಕ್ಷೆಗಳೊಂದಿಗೇ ಇಪ್ಪತ್ತು ವರ್ಷಗಳನ್ನು ತಳ್ಳಿದ ಮನೆಯವರ ಮುಂದೆ ಮಗ ಬಂದು ನಿಂತರೆ ಆಗುವ ಸಂತೋಷಕ್ಕೆ ಸಮ ಯಾವುದು?
ಕುಶಾಲನಗರದ ಸೆರಗಿನ ಕಾವೇರಿ ನದಿ ದಂಡೆಯ ಚಿಕ್ಕಹೊಸೂರು ಗ್ರಾಮದ ಶಿವಮ್ಮ ಹಾಗೂ ತಮ್ಮಯ್ಯ ಅವರ ಏಕೈಕ ಪುತ್ರ ಶಿವಕುಮಾರ್ ಎಂಬಾತನ ಕಥೆ ಇದು. ಇಪ್ಪತ್ತು ವರ್ಷಗಳ ಹಿಂದೆ ಕುಶಾಲನಗರ ಬಿಟ್ಟು ಹೋಗಿದ್ದ ಶಿವಕುಮಾರ್ ಮತ್ತೆ ಮನೆಗೆ ಮರಳಿದ್ದಾನೆ. ಆತನ ಕಥೆ ಇಲ್ಲಿದೆ...
ಮರ್ಯಾದೆಗೆ ಅಂಜಿ ಮನೆ ಬಿಟ್ಟಿದ್ದ ಶಿವಕುಮಾರ್
ಶಿವಕುಮಾರ್, ಇಪ್ಪತ್ತು ವರ್ಷಗಳ ಹಿಂದೆ ಕಾರ್ಪೆಂಟರ್ ಒಬ್ಬರ ಬಳಿ ಕುಷನ್ ಕಸೂತಿ ಕೆಲಸ ಮಾಡಿಕೊಂಡಿದ್ದ. ತನ್ನದಲ್ಲದ ತಪ್ಪಿಗೆ ಯಾವುದೋ ಆರೋಪ ಈತನ ಹೆಗಲೇರಿದಾಗ ಮರ್ಯಾದೆಗೆ ಅಂಜಿ ತನ್ನ ಹೆತ್ತವರನ್ನೂ ತೊರೆದು ದೂರದ ದೆಹಲಿಗೆ ಹೋಗಿದ್ದ. ತಾನು ಮನೆಯಿಂದ ಮರೆಯಾಗಿ ಹೋಗಿ ಇಪ್ಪತ್ತು ವರ್ಷಗಳ ತನಕವೂ ತಾನು ಎಲ್ಲಿದ್ದೇನೆ, ಹೇಗಿದ್ದೇನೆ, ಏನು ಮಾಡಿಕೊಂಡಿದ್ದೇನೆ ಎಂಬ ಯಾವ ಮಾಹಿತಿಯನ್ನೂ ಮನೆಯವರಿಗೆ ನೀಡಿರಲಿಲ್ಲ. ಈಗ ಶಿವಕುಮಾರ್ ಗೆ ಮೂವತ್ತಾರು ವರ್ಷ.
ಮಡಿಕೇರಿಯಲ್ಲಿ ತಾಯಿ ಮಗನ ಪುನರ್ಮಿಲನದ ಹೃದಯಸ್ಪರ್ಶಿ ಕ್ಷಣ
ಮಗನ ಕಾಯುತ್ತಿದ್ದ ಹೆತ್ತವರು
ಕುಶಾಲನಗರದಿಂದ ದೂರದ ದೆಹಲಿಗೆ ಬಂದು ಹಲವು ವರ್ಷಗಳ ನಂತರ ಉತ್ತರ ಪ್ರದೇಶಕ್ಕೆ ಬಂದು ನೆಲೆ ನಿಂತ ಶಿವಕುಮಾರ್. ಇತ್ತ ಈತನ ತಂದೆ ತಾಯಿ, ತಮ್ಮ ಮಗ ಬದುಕುಳಿದಿಲ್ಲ, ಬದುಕಿದ್ದರೆ ಇದುವರೆಗೂ ಮರಳಿ ಬಾರದೇ ಇರುತ್ತಿರಲಿಲ್ಲ. ಅಯ್ಯೋ ವಿಧಿ ಎಂದು ದುಃಖ ಪಟ್ಟುಕೊಂಡಿದ್ದರು. ಆದರೂ ಮನದ ಮೂಲೆಯಲ್ಲಿ ಮಗ ಒಂದಲ್ಲಾ ಒಂದು ದಿನ ಬರಬಹುದು ಎಂಬ ನಿರೀಕ್ಷೆಯೂ ಇತ್ತು. ಆ ಆಸೆ ಅವರಲ್ಲಿ ಜೀವಂತವಾಗಿತ್ತು.
ಶಿವಕುಮಾರನನ್ನು ಕರೆತಂದ ಸೋದರಮಾವ
ಈ ನಡುವೆ ಈತನ ಒಡಹುಟ್ಟಿದ್ದ ಇಬ್ಬರು ಸಹೋದರಿಯರನ್ನು ವಿವಾಹ ಮಾಡಿದರು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ತನ್ನ ಮಗ ಬದುಕಿರುವ ಸುಳಿವು ಆ ತಾಯಿಗೆ ಸಿಕ್ಕಿತ್ತು. ಶಿವಕುಮಾರನ ಸೋದರ ಮಾವ ಕಂದಾಯ ಅಧಿಕಾರಿ ಚಿಕ್ಕಹೊಸೂರಿನ ಸೋಮಶೇಖರ್ ಅವರಿಗೆ ವಿಷಯ ತಿಳಿಸಿದಾಗ ಕೂಡಲೇ ಸೋಮಶೇಖರ್ ತಮ್ಮ ಕಾರಿನಲ್ಲಿ ತೆರಳಿ ಶಿವಕುಮಾರನನ್ನು ತಮ್ಮ ಮನೆಗೆ ಕರೆ ತಂದಿದ್ದಾರೆ. ಈತ ಮನೆಗೆ ಮರಳಿದ ವಿಷಯ ತಿಳಿಯುತ್ತಿದ್ದಂತೆಯೇ ಈತನ ಬೇರೆ ಬೇರೆ ಊರಿನ ಸಂಬಂಧಿಗಳು ತಂಡೋಪತಂಡವಾಗಿ ಈತನನ್ನು ನೋಡಲು ಧಾವಿಸುತ್ತಿದ್ದಾರೆ.
ಆಗುಂಬೆಯ ದಟ್ಟಕಾಡಿನಲ್ಲಿ ಹೆಣ್ಣು ಮಗು ಪತ್ತೆ.! ಮುಂದೆ ಆಗಿದ್ದೇನು?
ಕನ್ನಡ ಭಾಷೆ ಕಲಿಸುತ್ತಿರುವ ಕುಟುಂಬ
ಸೋಮಶೇಖರ್ ಕುಟುಂಬ ಶಿವಕುಮಾರನಿಗೆ ಮತ್ತು ಕುಟುಂಬಕ್ಕೆ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾರೆ. ಹಿಂದಿ ಮಿಶ್ರಿತ ಕನ್ನಡದಲ್ಲಿ ಮಾತನಾಡುವ ಶಿವಕುಮಾರ್, "ನನಗೆ ನನ್ನಮ್ಮ ಯಾವಾಗಲೂ ಕನಸಲ್ಲಿ ಕಾಣುತ್ತಿದ್ದರು ಮತ್ತು ಕರೆಯುತ್ತಿದ್ದರು. ಅದಕ್ಕೆ ನಾನು ಊರಿಗೆ ಬಂದುಬಿಟ್ಟೆ. ಪತ್ನಿ ದಮಯಂತಿ ಮತ್ತು ಮಕ್ಕಳಿಗೆ ಕನ್ನಡ ಕಲಿಸ್ತೇನೆ. ಇಲ್ಲೇ ತಾಯಿ, ತಂದೆ ಮತ್ತು ಸೋದರಿಯರೊಂದಿಗೆ ಇರುತ್ತೇನೆ" ಎಂದರು. ತಾಯಿ ಶಿವಮ್ಮ ಮಾತನಾಡಿ, "ದೇವರು ಕೊನೆಗೂ ನನ್ನ ಮಗನಿಗೆ ಪುನರ್ ಜನ್ಮ ಕೊಟ್ಟು ನನ್ನಲ್ಲಿಗೆ ತಂದು ಬಿಟ್ಟ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.