ಆಸ್ಟ್ರೇಲಿಯಾದಲ್ಲಿ ಅಗ್ಗದ ವೆಂಟಿಲೇಟರ್ ಸಂಶೋಧಿಸಿದ ಸೋಮವಾರಪೇಟೆ ವೈದ್ಯ
ಮಡಿಕೇರಿ, ಮೇ 06: ವಿಶ್ವವನ್ನೇ ಭೀತಿಯ ಮಡಿಲಿಗೆ ನೂಕಿರುವ ಕೊರೊನಾ ಎಂಬ ಮಹಾಮಾರಿಯಿಂದ ಜೀವ ಉಳಿಸಿಕೊಳ್ಳಲು ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕಿದೆ. ಈಗಾಗಲೇ ವಿಶ್ವಾದ್ಯಂತ ಎರಡು ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಜೀವ ಕಳೆದುಕೊಂಡ ಸಾವಿರಾರು ಸೋಂಕಿತರು ವೆಂಟಿಲೇಟರ್ ಲಭ್ಯವಾಗದೇ ಸಾವನ್ನಪ್ಪಿದ್ದಾರೆ ಎಂಬುದು ನಿಜಕ್ಕೂ ವಿಷಾದನೀಯ.
ಕೃತಕ ಉಸಿರಾಟ ಕಲ್ಪಿಸಿ ಜೀವ ಉಳಿಸುವ ವೆಂಟಿಲೇಟರ್ ಗಳನ್ನು ಎಲ್ಲ ದೇಶಗಳೂ ನಿಗದಿತ ಪ್ರಮಾಣದಲ್ಲಿ ಹೊಂದಿರುತ್ತವೆ. ಇವುಗಳ ಬೆಲೆಯೂ ದುಬಾರಿ ಅಗಿರುವುದರಿಂದ ಯಾವ ದೇಶವೂ ಹೆಚ್ಚು ದಾಸ್ತಾನು ಇರಿಸುವುದಿಲ್ಲ. ಆದರೆ ಕೊರೊನಾ ವಿರುದ್ಧ ಹೋರಾಡಲು ವೆಂಟಿಲೇಟರ್ ಗಳ ಅತ್ಯವಶ್ಯಕತೆ ಮನಗಂಡ ಕೊಡಗಿನ ವೈದ್ಯರೊಬ್ಬರು ಕಡಿಮೆ ವೆಚ್ಚದ ವೆಂಟಿಲೇಟರ್ ಆವಿಷ್ಕಾರ ಮಾಡಿ ಗಮನ ಸೆಳೆದಿದ್ದಾರೆ. ಈ ಕುರಿತ ವಿವರ ಇಲ್ಲಿದೆ...
ಅಗ್ಗದ ವೆಂಟಿಲೇಟರ್ ಆವಿಷ್ಕರಿಸಿದ ಸೋಮವಾರಪೇಟೆ ವೈದ್ಯ
ಮೂಲತಃ ಕೊಡಗಿನ ಸೋಮವಾರಪೇಟೆಯ ನಿವಾಸಿ, ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕಿರಣ್ ಶೇಖರ್ ಅವರ ನೇತೃತ್ವದ ತಜ್ಞರ ತಂಡ ಆವಿಷ್ಕರಿಸಿರುವ ಅಗ್ಗದ ವೆಂಟಿಲೇಟರ್ ಗಳು ಆಸ್ಟ್ರೇಲಿಯಾದಲ್ಲಿ ಕೊರೊನಾ ಪೀಡಿತರ ಜೀವ ಉಳಿಸುವಲ್ಲಿ ನೆರವಾಗುತ್ತಿವೆ. ಡಾ. ಕಿರಣ್ ಶೇಖರ್ ಅವರು ಪ್ರಸ್ತುತ ಆಸ್ಟ್ರೇಲಿಯಾದ ಪ್ರಿನ್ಸ್ ಚಾರ್ಲಿಸ್ ಆಸ್ಪತ್ರೆಯಲ್ಲಿ ಸಂಶೋಧಕ ಮತ್ತು ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಹಿರಿಯ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಭಾರತದ ಅಗ್ಗದ ಕ್ಯಾನ್ಸರ್ ಔಷಧಕ್ಕೆ ಚೀನಾದಲ್ಲಿ ಭಾರೀ ಬೇಡಿಕೆ
"ಓಜಡ್ ವೇಡರ್’ ಹೆಸರಿನ ಅಗ್ಗದ ವೆಂಟಿಲೇಟರ್
ಇಂಜಿನಿಯರ್ ಗಳ ತಂಡದೊಂದಿಗೆ ಸೇರಿ ಕಡಿಮೆ ವೆಚ್ಚದಲ್ಲಿ ಕೊರೊನಾ ಸೋಂಕಿತರಿಗೆ ಕೃತಕ ಉಸಿರಾಟಕ್ಕೆ ಅವಕಾಶ ಕಲ್ಪಿಸುವ ವೆಂಟಿಲೇಟರ್ ಅನ್ನು ಕಿರಣ್ ಆವಿಷ್ಕರಿಸಿದ್ದಾರೆ. "ಓಜಡ್ ವೇಡರ್' ಹೆಸರಿನ ಈ ವೆಂಟಿಲೇಟರ್ ಹಾಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ವೆಂಟಿಲೇಟರ್ ಗಳ ಬೆಲೆಗಿಂತ 10 ಪಟ್ಟು ಕಡಿಮೆ ದರದಲ್ಲಿ ಸಿಗಲಿದೆ. ಬ್ರಿಸ್ಟೇನ್ ಮೂಲದ ಕಂಪೆನಿ ‘ಒಲಿಟಿಕ್'ನ ಜತೆಗೆ ಮೆಡಿಕಲ್ ಇಂಜಿನಿಯರಿಂಗ್ ರಿಸರ್ಚ್ ಫ್ಯಾಕಲ್ಟಿ (ಎಂಇಆರ್ ಎಫ್), ಕ್ಯೂಸ್ ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಕ್ಯೂಯುಟಿ) ಸಹಯೋಗದೊಂದಿಗೆ ಇದನ್ನು ತಯಾರಿಸಲಾಗಿದೆ.
ಲಕ್ಷಾಂತರ ಬಡವರ ಪ್ರಾಣಿ ಉಳಿಸಲು ಸಹಕಾರಿ
ಕಡಿಮೆ ವೆಚ್ಚದ ವೆಂಟಿಲೇಟರ್ ನಿರ್ಮಾಣ ಮಾಡುವುದರ ಜತೆಗೆ ಹೆಚ್ಚಿನ ಸುರಕ್ಷತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಅಭಿವೃದ್ಧಿಶೀಲ ರಾಷ್ಟ್ರಗಳು ಅಗ್ಗದ ಉಪಕರಣವನ್ನು ತ್ವರಿತವಾಗಿ ತಯಾರಿಸುವುದರಲ್ಲಿ ಮುಂದಿರುತ್ತವೆ ಎಂಬ ಮಾತಿದೆ. ಇದನ್ನು ಓಜಡ್ ವೇಡರ್ ಮಾಡಿ ತೋರಿಸಿದೆ. ಆ ಮೂಲಕ ದೇಶದಲ್ಲಿರುವ ಲಕ್ಷಾಂತರ ಬಡವರ ಪ್ರಾಣವನ್ನು ಉಳಿಸಲು ಸಹಕಾರಿಯಾಗಿದೆ ಎಂದು ಡಾ. ಕಿರಣ್ ಹೇಳುತ್ತಾರೆ.
ವೆಂಟಿಲೇಟರ್ ಬಿಡಿಭಾಗಕ್ಕಾಗಿ ನಂಜನಗೂಡಿನ ಈ ಕಾರ್ಖಾನೆಗೆ ಸಿಕ್ಕಿದೆ ಅನುಮತಿ
ಪರಿಣಾಮಕಾರಿಯಾಗಲಿರುವ ವೆಂಟಿಲೇಟರ್ ಗಳು
ಜಾಗತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಪೀಡಿತ ರೋಗಿಗಳನ್ನು ಸಂರಕ್ಷಿಸಲು ಈ ವೆಂಟಿಲೇಟರ್ ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಇವುಗಳ ಮಹತ್ವವೂ ತಿಳಿಯುತ್ತಾ ಹೋಗುತ್ತದೆ ಎಂದು ಡಾ. ಕಿರಣ್ ಶೇಖರ್ ಹೇಳುತ್ತಾರೆ. ಡಾ. ಕಿರಣ್ ಶೇಖರ್ ಅವರು ಸೋಮವಾರಪೇಟೆ ಬಸವೇಶ್ವರ ರಸ್ತೆಯ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಜೆ.ಸಿ. ಶೇಖರ್ ಮತ್ತು ಜಲಜಾ ದಂಪತಿ ಪುತ್ರ. ಈಗ ಭಾರತದಲ್ಲೂ ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್, ಮಹೀಂದ್ರ ಅಂಡ್ ಮಹೀಂದ್ರ ಮತ್ತು ಭಾರತೀಯ ರೈಲ್ವೇಯು ಅಗ್ಗದ ವೆಂಟಿಲೇಟರ್ ತಯಾರಿಕೆಗೆ ಮುಂದಾಗಿದ್ದು ಇವು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿವೆ ಎನ್ನಲಾಗಿದೆ.