ಜೋಡುಪಾಲದಲ್ಲಿ ಬರೆ ಕುಸಿತ; ಜನರಲ್ಲಿ ಹೆಚ್ಚಿದೆ ಆತಂಕ
ಕೊಡಗು, ಜುಲೈ 22: ಮಳೆಯಿಲ್ಲದೇ ಪರಿತಪಿಸುತ್ತಿದ್ದ ಕೊಡಗಿನಲ್ಲಿ ಇದೀಗ ಪ್ರವಾಹದ ಭೀತಿ ಎದುರಾಗಿದೆ. ನಿನ್ನೆಯಿಂದ ಸುರಿಯುತ್ತಿರುವ ಸಾಧಾರಣ ಮಳೆಗೇ ಅಲ್ಲಲ್ಲಿ ಬರೆ ಕುಸಿಯುತ್ತಿರುವುದು ಕಂಡುಬರುತ್ತಿದೆ. ಜೋಡುಪಾಲದಲ್ಲಿ ನಿನ್ನೆ ಬರೆ ಕುಸಿದಿದ್ದು, ಗ್ರಾಮದ ನಿವಾಸಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಭೂಕುಸಿತವಾಗಿದ್ದ ಸ್ಥಳದಲ್ಲೇ ಮತ್ತೆ ಮಣ್ಣು ಕುಸಿಯುತ್ತಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಕೊಡಗಿನಲ್ಲಿ ರೆಡ್ ಅಲರ್ಟ್: ಮಡಿಕೇರಿಯಲ್ಲಿ ತಕ್ಕಮಟ್ಟಿಗೆ ಮಳೆ
ಕಳೆದೆರಡು ದಿನಗಳಿಂದ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಸಾಧಾರಣ ಮಳೆ ಬೀಳುತ್ತಿದೆ. ಒಂದೆಡೆ ಇದರಿಂದ ಕೃಷಿಕರಿಗೆ ಸ್ವಲ್ಪ ಸಂತೋಷವಾಗಿದೆ. ಕೃಷಿಕರು ಗದ್ದೆ ಹದಮಾಡುವಲ್ಲಿ ತೊಡಗಿದ್ದಾರೆ. ಎರಡು ದಿನಗಳಿಂದ ನಾಪೋಕ್ಲು ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದೆ. ಭಾಗಮಂಡಲ - ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿರುವುದರಿಂದ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಶನಿವಾರದಿಂದ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.
ನಿಂತಿದ್ದ ವಾಹನಗಳ ಮೇಲೆ ಮರಬಿದ್ದು ಮೂರು ವಾಹನಗಳು ಜಖಂಗೊಂಡಿರುವ ಘಟನೆ ಆನೆಚೌಕೂರು ಬಳಿಯ ಮಜ್ಜಿಗೆಹಳ್ಳದಲ್ಲಿ ಶನಿವಾರ ನಡೆದಿದೆ. ಮರಬಿದ್ದ ವೇಳೆ ವಾಹನದಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮೈಸೂರು ವಿರಾಜಪೇಟೆ ಅಂತರರಾಜ್ಯ ಹೆದ್ದಾರಿ ಮಧ್ಯದಲ್ಲಿನ ಮಜ್ಜಿಗೆಹಳ್ಳದ ಹಾಡಿಯಲ್ಲಿ ಸಾವು ಸಂಭವಿಸಿತ್ತು. ಸಾವಿಗಾಗಿ ವಾಹನದಲ್ಲಿ ಬಂದಿದ್ದ ಜನರು ರಸ್ತೆ ಬದಿ ವಾಹನ ನಿಲ್ಲಿಸಿದ್ದರು. ಸಂಜೆ 5 ಗಂಟೆ ವೇಳೆ ಬೀಸಿದ ರಭಸದ ಗಾಳಿಗೆ ನಾಗರಹೊಳೆ ಅರಣ್ಯದಂಚಿನ ಮರವೊಂದು ರಸ್ತೆಗೆ ಉರುಳಿತು. ಮರದ ರೆಂಬೆಗಳು ವಾಹನಗಳ ಮೇಲೆ ಬಿದ್ದ ಪರಿಣಾಮ ಕಾರು, ಜೀಪು, ಗೂಡ್ಸ್ ಆಟೊ ಜಖಂಗೊಂಡವು.