ದುರಂತ ಸಾವಿನ ಶವಗಳ ಆಪತ್ಭಾಂಧವ ಹಸನಬ್ಬ ನಿಧನ
ಮಡಿಕೇರಿ, ಏಪ್ರಿಲ್ 09: ಇಂದಿನ ಜಗತ್ತಿನಲ್ಲಿ ನಿತ್ಯವೂ ಜನರು ಒಂದಿಲ್ಲೊಂದು ದುರಂತ ಸಾವಿಗಿಡಾಗುವುದು ಸಹಜವೇ ಆಗಿದೆ. ಆದರೆ ಈ ಮೃತ ದೇಹಗಳನ್ನು ಸಾಗಿಸುವುದೇ ಕುಟುಂಬಸ್ಥರಿಗೆ ದೊಡ್ಡ ಸಮಸ್ಯೆಯೇ ಆಗಿದೆ. ಅದರಲ್ಲೂ ಕೂಡ ನೀರಿನಲ್ಲಿ ಮುಳುಗಿ ಮೃತರಾದವರ ಶವಗಳು ಕೊಳೆತು ಹೋಗಿರುತ್ತವೆ.
ಇವುಗಳನ್ನು ಸಾಗಿಸಲು ಯಾರೂ ಒಪ್ಪುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಾವಿನ ಮನೆಯವರಿಗೆ ಆಪತ್ಭಾಂಧವ ಆಗಿರುವುದೇ ಸೋಮವಾರಪೇಟೆಯ ಗೂಡ್ಸ್ ಆಟೋ ಚಾಲಕ ಹಸನಬ್ಬ ಅವರು.
ಆದರೆ ಈ ಆಪದ್ಭಾಂದವ ಬುಧವಾರ ಹೃದಯ ಸಂಬಂಧಿ ಕಾಯಿಲೆಯಿಂದ ಮೃತರಾಗಿದ್ದಾರೆ. ಸೋಮವಾರಪೇಟೆಯ ಕಾನ್ವೆಂಟ್ ಬಾಣೆಯ ನಿವಾಸಿ ಅಗಿರುವ ಹಸನಬ್ಬ (62)ಅವರು ಇಲ್ಲಿಯೇ ಹುಟ್ಟಿ ಬೆಳೆದವರು.
ತನ್ನ ಗೂಡ್ಸ್ ಗಾಡಿಯಲ್ಲಿ ಶವ ಸಾಗಾಟ
ಕೆಲವೊಮ್ಮೆ ಕೊಳೆತ ಶವಗಳನ್ನೂ ಸಾಗಾಟ ಮಾಡಿದ್ದಾರೆ. ಇವರ ಗೂಡ್ಸ್ ಆಟೋದಲ್ಲಿ ಯಾರೇ ಶವ ಸಾಗಿಸಲು ಕರೆದರೂ ಇವರು ಸದಾ ಸಿದ್ದರಾಗಿರುತಿದ್ದರು ಎಂದು ಇಲ್ಲಿನ ಆಟೋ ಚಾಲಕ ಗಣೇಶ್ ಹೇಳಿದರು.
ನಗರದಲ್ಲಿ ಅನಾಥ ಶವ ಕಂಡುಬಂದರೆ, ಅವುಗಳನ್ನು ತನ್ನ ಗೂಡ್ಸ್ ಆಟೋದಲ್ಲಿ ಶವಗಾರಕ್ಕೆ ಸಾಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಜಲಪಾತ, ಬಾವಿಯಲ್ಲಿ ಕಂಡು ಬರುವ ಕೊಳೆತ ಶವಗಳನ್ನು ಯಾವುದೇ ಅಸಹ್ಯ, ಹಿಂಜರಿಕೆ ಇಲ್ಲದೆ ಮೇಲೆತ್ತುತ್ತಿದ್ದರು.
ಇದನ್ನೇ ಸಮಾಜಸೇವೆ ಅಂದುಕೊಂಡಿದ್ದರು
ಇಲ್ಲಿಯವರೆಗೆ ಒಟ್ಟು 50 ಕ್ಕೂ ಅಧಿಕ ಶವಗಳನ್ನು ಶವಗಾರಕ್ಕೆ ಸಾಗಿಸಿದ್ದಾರೆ. ಕೆಲವು ಅನಾಥ ಶವಗಳನ್ನು ಇತರ ಆಟೋ ಚಾಲಕರು ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದು ಶವ ಸಂಸ್ಕಾರವನ್ನೂ ಮಾಡಿದ್ದಾರೆ.
ಈ ಕೆಲಸವನ್ನು ಸಮಾಜಸೇವೆಯೆಂದೇ ಪರಿಗಣಿಸಿದ್ದ ಹಸನಬ್ಬ, ಅನೇಕ ಸಂಘ- ಸಂಸ್ಥೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ. ಕಾವೇರಿ ಕಾರ್ಮಿಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, 1984 ರಲ್ಲಿ ಹವ್ಯಾಸಿ ಕಲಾವೃಂದ ಸಾಂಸ್ಕೃತಿಕ ಸಂಘ ಸ್ಥಾಪಿಸಿದ್ದರು.
ಅದ್ಧೂರಿ ಗಣೇಶೋತ್ಸವ ಆಚರಣೆ
ಸೋಮವಾರಪೇಟೆಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯದರ್ಶಿಯಾಗಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಇಲ್ಲಿನ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅದ್ಧೂರಿ ಗೌರಿ-ಗಣೇಶೋತ್ಸವ ಆಚರಿಸಿದ ಕೀರ್ತಿಯೂ ಇವರಿಗಿದೆ. ಸೋಮವಾರಪೇಟೆಯ ಸುತ್ತ ಮುತ್ತ ಇವರು ಈವರೆಗೂ ಸುಮಾರು 50 ಕ್ಕೂ ಹೆಚ್ಚು ಶವಗಳ ಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ.
ಎಲ್ಲರಿಗೂ ಆಪತ್ಭಾಂಧವ ಆಗಿದ್ದರು
ನಗರದ ಜಲಾಲಿಯ ಮಸೀದಿಯ ಕಾರ್ಯದರ್ಶಿಯಾಗಿ, ಸಾರ್ವಜನಿಕ ಆಸ್ಪತ್ರೆ ಸಂದರ್ಶಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಮಾಜಸೇವೆ ಗುರುತಿಸಿದ ಇಲ್ಲಿನ ರೋಟರಿ ಸಂಸ್ಥೆ, ವಾಹನ ಚಾಲಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಇವರ ಅಂತ್ಯ ಸಂಸ್ಕಾರ ಗುರುವಾರ ನಡೆಯಿತು.