ಮಡಿಕೇರಿ ಆರ್ ಟಿಒದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಧಿಕಾರಿಗಳೇ ಕಾಣಲ್ಲ!
ಮಡಿಕೇರಿ, ಫೆಬ್ರವರಿ 2: ಮಡಿಕೇರಿಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಯಾವುದೇ ಕಡತಗಳು ವಿಲೇವಾರಿಯಾಗದೆ ಸಾರ್ವಜನಿಕರು ನಿತ್ಯ ಅಲೆಯುವುದು ಮಾಮೂಲಿಯಾಗಿದೆ. ತಮ್ಮ ಕೆಲಸವನ್ನು ಬದಿಗೊತ್ತಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು, ಸಿಬ್ಬಂದಿಯ 'ನಾಳೆ ಬನ್ನಿ' ಎಂಬ ಉತ್ತರದಿಂದ ಕಂಗೆಟ್ಟು ಹೋಗಿದ್ದಾರೆ. ಸಿಬ್ಬಂದಿ ಅಸಹಾಯಕತೆಗೂ ಕಾರಣವಿದೆ.
ಇಲ್ಲಿ ಮುಖ್ಯವಾಗಿ 4 ಇನ್ ಸ್ಪೆಕ್ಟರ್ ಸೇರಿದಂತೆ 11 ಪ್ರಮುಖ ಹುದ್ದೆಗಳು ಖಾಲಿಯಿರುವುದರಿಂದ ಒಟ್ಟು 1,56,639 ವಿವಿಧ ಕಡತಗಳು ನಿಗದಿತ ವೇಳೆಗೆ ವಿಲೇವಾರಿಯಾಗುತ್ತಿಲ್ಲ. ಕಚೇರಿಯಲ್ಲಿರುವ ಲಕ್ಷಾಂತರ ಕಡತಗಳನ್ನು ಕೇವಲ 8 ಮಂದಿ ಅಧಿಕಾರಿ, ಸಿಬ್ಬಂದಿ ನಿರ್ವಹಿಸಬೇಕಾದ ದುಃಸ್ಥಿತಿ ಬಂದಿದೆ.[ಕೊಡಗಿನಲ್ಲಿ ಉರುಳಿಗೆ ಸಿಕ್ಕಿ ಮತ್ತೊಂದು ಹುಲಿ ಬಲಿ!]
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ಪ್ರಸ್ತುತ 36 ಹುದ್ದೆಗಳಲ್ಲಿ ಇಲಾಖೆಗೆ ಪ್ರಮುಖವಾಗಿ ಜೀವಾಳವಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಇಲ್ಲವೇ ಇಲ್ಲ. ಮತ್ತು ಅಷ್ಟೇ ಮುಖ್ಯವಾಗಿ 4 ಇನ್ ಸ್ಪೆಕ್ಟರ್ ಹುದ್ದೆಗಳು ಖಾಲಿಯಿದ್ದು, ಇವರಿಂದಲೇ ಕಚೇರಿಯ ಎಲ್ಲ ಕೆಲಸ ಕಾರ್ಯಗಳು ನಡೆಯುವುದಾಗಿದೆ.
ಇಬ್ಬರು ಸೂಪರಿಂಟೆಂಡೆಂಟ್ ಹುದ್ದೆಯಲ್ಲಿ ಒಂದು ಹುದ್ದೆ ಖಾಲಿಯಿದ್ದು, ಒಬ್ಬರಿದ್ದಾರೆ, 5 ಪ್ರಥಮ ದರ್ಜೆ ಸಹಾಯಕರಲ್ಲಿ ಎರಡು ಹುದ್ದೆ ಖಾಲಿ, 8 ದ್ವಿತೀಯ ದರ್ಜೆ ಸಹಾಯಕರಲ್ಲಿ ಮೂರು ಹುದ್ದೆ ಖಾಲಿ, ಇದ್ದ ಒಂದೇ ಒಂದು ಸೀನಿಯರ್ ಇನ್ ಸ್ಪೆಕ್ಟರ್ ಹುದ್ದೆ ಅದೂ ಖಾಲಿ. ಹೀಗಾಗಿ ದಿನವೂ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾದ ಪರಿಸ್ಥಿತಿ ತಲೆದೋರಿದೆ.[ದೇಶ ಸ್ಮರಿಸುವ ವೀರಯೋಧ ಫೀಲ್ಡ್ ಮಾರ್ಷಲ್ ಕಾರ್ಯಪ್ಪ]
1957ರಲ್ಲಿದ್ದ ವಾಹನಗಳ ದಟ್ಟಣೆಯಂತೆ ಅದರ ಆಧಾರದಲ್ಲಿ ಆಗ ಇಲಾಖೆಗೆ ನೇಮಕಾತಿ ಮಾಡಿದ ಅಧಿಕಾರಿ, ಸಿಬ್ಬಂದಿಯೇ ಈಗಲೂ ಮುಂದುವರಿದಿರುವುದು ಮಾತ್ರ ವಿಷಾದದ ಸಂಗತಿಯಾಗಿದೆ. ಒಂದು -ಒಂದೂವರೆ ವರ್ಷದಿಂದ ಆರ್ ಟಿಒ ಅಧಿಕಾರಿ ಹುದ್ದೆ ಖಾಲಿಯಾಗಿದ್ದು, ಸರಕಾರ ನೂತನ ಆರ್ ಟಿಒ ಅಧಿಕಾರಿಯನ್ನು ನೇಮಿಸುವ ಬದಲು ಪುತ್ತೂರಿನ ಪ್ರಭಾರ ಆರ್ ಟಿಒ ಅಧಿಕಾರಿಯನ್ನು ನಿಯುಕ್ತಿಗೊಳಿಸಿದೆ.
ಇವರು ವಾರಕ್ಕೆ ಒಂದೆರಡು ದಿನ ಬಂದು, ಕೆಲಸ ಮಾಡಿ ಹಿಂತಿರುಗುತ್ತಾರೆ. ಕಚೇರಿ ತುಂಬಾ ಸಮಸ್ಯೆಗಳೇ ತಾಂಡವವಾಡುತ್ತಿದ್ದರೂ ಸಂಬಂಧಿಸಿದವರು ಇತ್ತ ಗಮನಹರಿಸದಿರುವುದು ಸಮಸ್ಯೆ ಮುಂದುವರೆಯಲು ಕಾರಣವಾಗಿದೆ.