ಮಳೆ ಬಂದದ್ದು ಓಕೆ, ಭೂ ಕುಸಿತವಾಗಿದ್ದು ಏಕೆ ? ಇಲ್ಲಿದೆ ನಿಜವಾದ ಕಾರಣ...
Recommended Video
ಮೈಸೂರು, ಆಗಸ್ಟ್ .26: ಕಳೆದ 10 ದಿನಗಳ ಕೆಳಗೆ ಸುರಿದ ಮಳೆಗೆ ಮಡಿಕೇರಿ, ಜೋಡುಪಾಲ ಸೇರಿದಂತೆ ಹಲವೆಡೆ ಅಕ್ಷರಶಃ ಜನರು ಬೆಚ್ಚಿಬಿದ್ದಿದ್ದಾರೆ. ಮಳೆ ಬರುವುದು ಸಾಮಾನ್ಯ. ಆದರೆ ಕಳೆದ 92 ವರುಷಗಳ ಹಿಂದಿನಿಂದಲೂ ಕಂಡು ಕೇಳರಿಯದಂತಹ ಇಂತಹ ಮಳೆ ಹಾಗೂ ಭೂಕುಸಿತದ ರೌದ್ರ ನರ್ತನ ಈಗ ನಡೆದದ್ದು ಏಕೆ ?
ಇದಕ್ಕೆ ನಿಜವಾದ ಕಾರಣ ಏನಿರಬಹುದು ಎಂಬುದು ಸಾಮಾನ್ಯ ಪ್ರಶ್ನೆ. ಈ ಕುರಿತಾಗಿ ಒನ್ ಇಂಡಿಯಾ ಕೆಲವು ಭೂ ವಿಜ್ಞಾನಿಗಳನ್ನು ಮಾತನಾಡಿಸಿದಾಗ ಅವರು ಉತ್ತರಿಸಿದ್ದು ಹೀಗೆ, ಕೆಂಪು ಮಣ್ಣಿನಿಂದ ಕೂಡಿದ ಜೇಡಿ ಮಿಶ್ರಿತ ಮಣ್ಣು ಗುಡ್ಡಗಾಡು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ.
ಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು
ಮುಖ್ಯವಾಗಿ ಒಂದು ಕಡೆ ಕಣಿವೆ ಇರುವಲ್ಲಿ ಇದರ ಅಪಾಯ ಹೆಚ್ಚು. ಮಧ್ಯೆ ರಸ್ತೆ ಹಾದು ಹೋದರೆ ಮತ್ತಷ್ಟು ಅಪಾಯ. ಇದಕ್ಕೆ ಈಗ ನಡೆದ ಘಟನೆಯೇ ಪ್ರತ್ಯಕ್ಷ ಉದಾಹರಣೆ. ಒಮ್ಮೆ ಮಳೆ ಬಂದ ಕೂಡಲೇ ಕುಸಿತ ಸಂಭವಿಸುವುದಿಲ್ಲ.
ಅನೇಕ ವರುಷಗಳ ಕಾಲ ಮಣ್ಣು ಭೂಮಿಯೊಳಗಿನ ಶಿಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತದೆ. ಮೇಲ್ಮೈಯಲ್ಲಿ ಒತ್ತಡ ಅಧಿಕವಾದಾಗ ಅದು ಸಡಿಲಗೊಂಡು ದುರ್ಬಲವಾಗುತ್ತದೆ. ಭಾರೀ ಮಳೆಗೆ ಸಹಜವಾಗಿ ಮಣ್ಣು ಕರಗಿ ನೀರಿನೊಂದಿಗೆ ಕಳೆಮುಖವಾಗಿ ಹರಿಯುತ್ತದೆ ಎಂದು ತಿಳಿಸಿದ್ದಾರೆ.
ಭೂಗರ್ಭ ಶಾಸ್ತ್ರ ವಿಜ್ಞಾನಿ ನಾಗೇಶ ಹೆಗ್ಡೆ ಹೇಳುವುದು ಹೀಗೆ... ಇಲ್ಲಿರುವುದು ಜೇಡಿ ಮಣ್ಣು. ಹಾಗಾಗಿ ಈ ಮಣ್ಣು ಬೇಗನೆ ಸಡಿಲಗೊಳ್ಳುತ್ತದೆ. ಭೂ ಪ್ರದೇಶದ ಕೆಳಪದರದಲ್ಲಿ ಶಿಲೆಯಲ್ಲಿ ನೀರು ಇಂಗುವುದಿಲ್ಲ. ಶಿಲೆಯ ಮೇಲ್ಮೈಯಲ್ಲಿ ಕೆಲವು ವರುಷಗಳ ಕಾಲ ಮಣ್ಣು ಗಟ್ಟಿಯಾಗಿ ಇರುತ್ತದೆ.
ಕೊಡಗಿನಲ್ಲಿ ಆದ ನಷ್ಟದ ಅಂದಾಜು ಅಂಕಿ-ಅಂಶಗಳು
ಮಳೆ ನೀರು ಶಿಲೆಯಲ್ಲಿ ಭೂಮಿಯಲ್ಲಿ ಇಂಗದೇ ಇದ್ದಾಗ ಶಿಲೆಯ ಮೇಲಿನಿಂದ ನೀರು ಕೆಳಕ್ಕೆ ಹರಿದು ಹೋಗುತ್ತದೆ. ಇದೇ ಇಲ್ಲೂ ಆಗಿದ್ದು. ಒಳಪದರದಲ್ಲಿ ನೀರು ಇಳಿದು ಹೋಗುವುದಿಲ್ಲ. ಹೀಗಾಗಿ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ ಎಂದರು.
ಇದರೊಟ್ಟಿಗೆ ಯಂತ್ರಗಳ ಅತೀ ಬಳಕೆಯಿಂದಾಗಿ ಭೂಮಿ ಕೂಡ ಬಿಸಿಯಾಗುತ್ತಿದೆ. ಹವಮಾನ ಅಲ್ಲಲ್ಲಿ ಅನಿರೀಕ್ಷಿತವಾಗಿ ಬದಲಾಗುತ್ತಾ ನಾನಾ ಬಗೆಯ ವಿಪ್ಲವಗಳನ್ನು ಸೃಷ್ಟಿಸುತ್ತಿದೆ. ಮೇಘ ಸ್ಫೋಟ, ನೆರೆ ಹಾವಳಿ, ಭೂ ಕುಸಿತ, ಹಿಮ ಕುಸಿತ, ಸುಂಟರಗಾಳಿ, ಬರ ಗಾಲ , ಕಾಡಿಗೆ ಬೆಂಕಿ ಹೀಗೆ ಅನೇಕ ಘಟನೆಗಳು ಘಟಿಸುತ್ತದೆ. ಇದು ಕೂಡ ಒಮ್ಮೊಮ್ಮೆ ಕಾರಣವಾಗಬಹುದು ಎನ್ನುತ್ತಾರೆ.