ಕೊಡಗಿನಲ್ಲಿ ಮತ್ತೆ ಅಬ್ಬರಿಸಿದ ವರುಣ, ಶಾಲಾ-ಕಾಲೇಜಿಗೆ ರಜೆ
ಮಡಿಕೇರಿ, ಜುಲೈ 07: ಕೊಡಗಿನಲ್ಲಿ ಎರಡು ವಾರಗಳಿಂದ ಮಳೆ ತಗ್ಗಿತ್ತಾದರೂ ಶುಕ್ರವಾರದಿಂದ ಮತ್ತೆ ರಭಸ ಹೆಚ್ಚಾಗಿದೆ. ಪುನರ್ವಸು ಮಳೆ ಆರಂಭದಲ್ಲೇ ಅಬ್ಬರಿಸುತ್ತಿದ್ದು, ತೊರೆ, ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಕಾವೇರಿಯೂ ತುಂಬಿ ಹರಿಯುತ್ತಿದ್ದು ಇದೇ ರೀತಿ ಮಳೆ ಮುಂದುವರೆದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದೆ.
ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, 2591 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 2,859 ಅಡಿಯ ಜಲಾಶಯದಲ್ಲಿ ಸದ್ಯ 2852.49 ಅಡಿಯಷ್ಟು ನೀರಿದ್ದು ಭರ್ತಿಯಾಗಲು ಸುಮಾರು ಆರು ಅಡಿಯಷ್ಟು ಮಾತ್ರ ಬಾಕಿಯಿದೆ.
ವಾರಾಂತ್ಯ ಲೇಖನ: ತಡಿಯಂಡಮೋಳ್ ಬೆಟ್ಟದ ಮಿಂಚು ನೀಲಕಂಡಿ ಜಲಧಾರೆ!
ಶುಕ್ರವಾರದಿಂದ ಆರಂಭವಾದ ಮಳೆ ಬಿಡುವು ನೀಡದೆ ಸುರಿಯುತ್ತಿರುವುದರಿಂದ ಮತ್ತೆ ನದಿ, ತೊರೆ, ಹಳ್ಳ-ಕೊಳ್ಳಗಳು, ಜಲಪಾತಗಳು ತುಂಬಿ ಹರಿಯ ತೊಡಗಿವೆ. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 98.01 ಮಿ.ಮೀ. ಮಳೆ ಸುರಿದಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗಿನ 1461.73 ಮಿ.ಮೀ, ಮಳೆಸುರಿದಿದೆ.
ಮಡಿಕೇರಿ ತಾಲೂಕಿನಲ್ಲಿ 144.35 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 74.92 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 74.75 ಮಿ.ಮೀ. ಮಳೆಯಾಗಿದ್ದು, ಗಡಿಭಾಗವಾದ ಸಂಪಾಜೆಯಲ್ಲಿ ಅತಿ ಹೆಚ್ಚು 177.60 ಮಿ.ಮೀ. ಮಳೆ ಸುರಿದಿದೆ. ಜೂನ್ ಎರಡನೇ ವಾರದಲ್ಲಿ ಸುರಿದಿದ್ದ ಮಳೆ ಬಳಿಕ ಬಿಡುವು ನೀಡಿತ್ತು.
ಇದೀಗ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಶನಿವಾರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.