ಮೇ 22ರಿಂದ ಕೊಡಗಿನಲ್ಲಿ ಜಿಲ್ಲಾ ಗ್ರಾಮೀಣ ಕ್ರೀಡಾಕೂಟ
ಗ್ರಾಮೀಣ ಕ್ರೀಡೆಯನ್ನು ಉಳಿಸಿ ಪ್ರೋತ್ಸಾಹಿಸುವ ಸಲುವಾಗಿ ಆದಿಪರಾಶಕ್ತಿ ಸೇವಾ ಟ್ರಸ್ಟ್ ಮುಂದೆ ಬಂದಿದ್ದು, ಕೊಡಗಿನಲ್ಲಿ ಮೇ 22-26ರವರೆಗೆ ಹಲವಾರು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದೆ.
ಮಡಿಕೇರಿ, ಮೇ 3: ಕ್ರಿಕೆಟ್, ಹಾಕಿ ಆಟಗಳ ಭರಾಟೆ ಮುಂದೆ ಗ್ರಾಮೀಣ ಕ್ರೀಡೆಗಳು ಅವಸಾನದ ಅಂಚಿಗೆ ತಲುಪುತ್ತಿರುವ ಸನ್ನಿವೇಶಕ್ಕೆ ಕೊಡಗು ಜಿಲ್ಲೆಯೂ ಹೊರತಾಗಿಲ್ಲ. ಅದಕ್ಕೆಂದೇ ಗ್ರಾಮೀಣ ಕ್ರೀಡೆಯನ್ನು ಉಳಿಸಿ ಪ್ರೋತ್ಸಾಹಿಸುವ ಸಲುವಾಗಿ ಆದಿಪರಾಶಕ್ತಿ ಸೇವಾ ಟ್ರಸ್ಟ್ ಮುಂದೆ ಬಂದಿದ್ದು, ಕೊಡಗಿನಲ್ಲಿ ಮೇ 22-26ರವರೆಗೆ ಹಲವಾರು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದೆ.
ಈ ಕುರಿತು ಟ್ರಸ್ಟ್ ನ ನಾಪಂಡ ಪೂವಯ್ಯ ಮಾಹಿತಿ ನೀಡಿ ಮೇ.22 ರಿಂದ ಗ್ರಾಮೀಣ ಕ್ರೀಡೆಯನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ(ಮ್ಯಾನ್ಸ್ ಕಾಂಪೌಂಡ್) ಮೈದಾನದಲ್ಲಿ 5 ದಿನಗಳ ಕಾಲ ನಡೆಸಲಿದ್ದು, ಜಿಲ್ಲೆಯ ಪ್ರತಿಯೊಬ್ಬ ಗ್ರಾಮೀಣ ಪ್ರದೇಶದ ಕ್ರೀಡಾಭಿಮಾನಿಗಳು ವಯಸ್ಸಿನ ಅಂತರವಿಲ್ಲದೆ ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.[ಕೊಡಗಿನಲ್ಲಿ ಯೋಧನ ಪ್ರತಿಮೆ; ರಾಷ್ಟ್ರ ಲಾಂಛನ ನಿರ್ಮಾಣ]
ಮ್ಯೂಸಿಕಲ್ ಚೇರ್, ನಿಂಬೆಹಣ್ಣಿನ ಚಮಚದ ಓಟ, ಮೂಟೆ ಹೊರೆ ಓಟ, ಮೂರು ಕಾಲು ಓಟ, ಹಿಮ್ಮುಖ ಓಟ, ಒಂಟಿಕಾಲಿನ ಓಟ, ನದಿ-ದಡ, ಸೂಜಿಯಲ್ಲಿ ದಾರ ಪೋಣಿಸಿ ಓಡುವುದು, ಮಕ್ಕಳಿಗೆ ಕಪ್ಪೆ ಓಟ, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ತೆಂಗಿನಕಾಯಿ ಎಳೆದಾಡುವುದು, ಗುಂಡುಕಲ್ಲು ಎಸೆತ, 200ಮೀ ಓಟ, ಕಣ್ಣಿಗೆ ಬಟ್ಟೆಕಟ್ಟಿ ಮಡಿಕೆ ಒಡೆಯುವುದಲ್ಲದೆ ಹತ್ತು ಹಲವು ಕ್ರೀಡೆಗಳಿದ್ದು, ಈ ಕ್ರೀಡೆಗಳನ್ನು ಮಕ್ಕಳಿಗೆ, ಹೆಂಗಸರಿಗೆ, ವಯಸ್ಕರಿಗೆ ಮತ್ತು ಗಂಡಸರಿಗೆ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿಸಿದ್ದಾರೆ.[ಮದುವೆ ದಿಬ್ಬಣದವರಂತೆ ಬಂದು ದಾಳಿ ನಡೆಸಿದ ಐಟಿ ಅಧಿಕಾರಿಗಳು]
ಮೇ 10ರ ಒಳಗಾಗಿ ತಮ್ಮ ಸ್ಥಳೀಯ ಪಂಚಾಯಿತಿಯ ಸದಸ್ಯರಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಟ್ರಸ್ಟಿ ನಿಶಾ ಪೂವಯ್ಯ ಮಾತನಾಡಿ, ಟ್ರಸ್ಟ್ ಮೂಲಕ ಕ್ರೀಡಾ ಚಟುವಟಿಕೆಗಳ ಜೊತೆಯಲ್ಲೇ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ, ಮೇ.22 ರಂದು ರಕ್ತದಾನ ಶಿಬಿರವನ್ನು ಏರ್ಪಡಿಸಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಗ್ರಾಮಿಣ ಕ್ರೀಡಾಕೂಟದ ಲೋಗೋವನ್ನು ಆದಿಪರಾಶಕ್ತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಅನಾವರಣಗೊಳಿಸಿದ್ದಾರೆ.