ಕೊಡಗಿನ ಫೇಮಸ್ ರಿವರ್ ರಾಫ್ಟಿಂಗ್ ಈ ಬಾರಿ ನಡೆಯುತ್ತಾ?
ಮಡಿಕೇರಿ, ಆಗಸ್ಟ್ 24: ಕೊಡಗಿನ ಕುಶಾಲನಗರ ಬಳಿಯ ದುಬಾರೆಯ ಕಾವೇರಿ ನದಿಯಲ್ಲಿ ಮಳೆಗಾಲದಲ್ಲಿ ನಡೆಯುತ್ತಿದ್ದ ರಿವರ್ ರಾಫ್ಟಿಂಗ್ ಸಾಹಸಮಯ ಕ್ರೀಡೆಯ ಮೇಲೆಯೂ ಕೊರೊನಾ ಕರಿನೆರಳು ಬಿದ್ದಿದೆ. ಹೀಗಾಗಿ ಇದನ್ನೇ ನಂಬಿದ್ದ ಹಲವರ ಬದುಕು ಸಂಕಷ್ಟದಲ್ಲಿದೆ.
Recommended Video
ಮಳೆಗಾಲದಲ್ಲಿ ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ ರಾಫ್ಟಿಂಗ್ ಮಾಡುವುದೇ ಒಂದು ಮರೆಯಲಾರದ ಅನುಭವ. ಈ ಅನುಭವ ಪಡೆಯಲೆಂದೇ ದೂರದ ಪ್ರವಾಸಿಗರು ಇಲ್ಲಿಗೆ ಬರಲು ಆರಂಭಿಸುತ್ತಿದ್ದಂತೆಯೇ ಇದೊಂದು ಉದ್ಯಮವಾಗಿ ಬೆಳೆಯತೊಡಗಿತು. ಪೈಪೋಟಿಯೂ ಆರಂಭವಾಯಿತು. ಇದು ಜಟಾಪಟಿಗೂ ಕಾರಣವಾಯಿತು. ಇದೀಗ ಕೊರೊನಾ ಪರಿಣಾಮದಿಂದ ರಾಫ್ಟಿಂಗ್ ಮೇಲೂ ಆಗಿದೆ.
ಕೊಡಗಿನಲ್ಲಿ ಮಳೆ ತಗ್ಗಿದರೂ, ಆತಂಕ ಮಾತ್ರ ದೂರವಾಗಿಲ್ಲ...
ಹಿಂದೆ ಕೊಡಗಿನ ಬೆಳೆಗಾರರು ಇಲ್ಲಿ ಬೆಳೆಯುತ್ತಿದ್ದ ಕಾಫಿ, ಏಲಕ್ಕಿ, ಕರಿಮೆಣಸು ಬೆಳೆಗೆ ಮಾತ್ರ ಸೀಮಿತರಾಗಿದ್ದರು. ಕೃಷಿ ಹೊರತು ಪಡಿಸಿದರೆ ಇತರೆ ವಾಣಿಜ್ಯ ಚಟುವಟಿಕೆಗಳು ಕಡಿಮೆಯೇ ಇತ್ತು. ಆದರೆ ಕಳೆದ ಎರಡು ದಶಕಗಳಿಂದ ಪ್ರವಾಸಿಗರು ಇತ್ತ ಮುಖ ಮಾಡಿದ್ದರಿಂದ ನಿಧಾನವಾಗಿ ಪ್ರವಾಸಿ ಸ್ನೇಹಿ ಚಟುವಟಿಕೆಗಳು ಗರಿಗೆದರಿದವು. ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳು ಹುಟ್ಟಿಕೊಂಡವು. ಆದರೆ ಕಳೆದ ಮೂರು ವರ್ಷಗಳಿಂದ ಹಲವು ಕಾರಣಗಳಿಂದಾಗಿ ಪ್ರವಾಸಿಗರು ಜಿಲ್ಲೆಯತ್ತ ಸುಳಿಯುತ್ತಿಲ್ಲ. ಇದರಿಂದ ಎಲ್ಲ ರೀತಿಯಲ್ಲಿಯೂ ಸಂಕಷ್ಟ ಎದುರಾಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
2018ರಲ್ಲಿ ನಿಷೇಧ ಹೇರಿದ್ದ ಜಿಲ್ಲಾಡಳಿತ
ಈ ವೇಳೆ ಜಿಲ್ಲಾಡಳಿತ ನಿಷೇಧ ಹೇರಿದ್ದರಿಂದ 2018ರ ಮಳೆಗಾಲದಲ್ಲಿ ರಿವರ್ ರಾಫ್ಟಿಂಗ್ ನಡೆದಿರಲಿಲ್ಲ. ಆದರೆ 2019ರಲ್ಲಿ ಒಂದಷ್ಟು ಕಠಿಣ ನಿಬಂಧನೆಗಳನ್ನು ಮುಂದಿಟ್ಟಿತ್ತಲ್ಲದೆ, ಅನುಮತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಲಾಯಿತು. ಇದಕ್ಕೂ ಮೊದಲು ಕೆಲವರು ಯಾವುದೇ ಅನುಮತಿಯಿಲ್ಲದೆ ಇಲ್ಲಿ ರಾಫ್ಟಿಂಗ್ ನಡೆಸುತ್ತಿದ್ದರು. ಜತೆಗೆ ಪ್ರವಾಸಿಗರಿಂದ ಹೆಚ್ಚಿನ ಹಣವನ್ನು ಸುಲಿಗೆ ಕೂಡ ಮಾಡುತ್ತಿದ್ದ ಬಗ್ಗೆಯೂ ಆರೋಪಗಳಿದ್ದವು.
ಈ ಬಾರಿ ರಾಫ್ಟಿಂಗ್ ಗೆ ಕೊರೊನಾ ಹೊಡೆತ
ಇದರೆಲ್ಲದರ ಬಗ್ಗೆ ತಿಳಿದು ಒಂದು ತೀರ್ಮಾನಕ್ಕೆ ಬಂದ ಜಿಲ್ಲಾಡಳಿತ ಒಂದಷ್ಟು ನಿಬಂಧನೆಯೊಂದಿಗೆ ಅವಕಾಶ ನೀಡಿತು. ಆದರೆ ಕಳೆದ ವರ್ಷವೂ ಮಹಾಮಳೆ ಹೊಡೆತ ನೀಡಿತು. ದೂರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿಲ್ಲ. ಇದರಿಂದ ಸಂಪೂರ್ಣ ನಷ್ಟ ಅನುಭವಿಸಬೇಕಾಯಿತು. ಇದನ್ನೇ ನಂಬಿದ್ದ ಒಂದಷ್ಟು ಮಂದಿ ನಿರುದ್ಯೋಗಿಗಳಾದರು.
ಈ
ಬಾರಿಯ
ಮುಂಗಾರು
ವೇಳೆಗೆ
ಎಲ್ಲವೂ
ಸರಿಹೋಗುತ್ತದೆ
ಎಂಬ
ನಂಬಿಕೆಯಲ್ಲಿದ್ದವರಿಗೆ
ಬೇಸಿಗೆಯಲ್ಲಿ
ವಕ್ಕರಿಸಿದ
ಕೊರೊನಾ
ಇನ್ನೂ
ಅಟ್ಟಹಾಸ
ಮೆರೆಯುತ್ತಿರುವುದರಿಂದ
ಕಾವೇರಿ
ಉಕ್ಕಿ
ಹರಿದರೂ
ರಾಫ್ಟಿಂಗ್
ಗೆ
ಅವಕಾಶ
ಮಾಡಿಕೊಡಲಿಲ್ಲ.
ಆದರೆ
ಪ್ರವಾಹದ
ಸಂದರ್ಭ
ರಿವರ್
ರಾಫ್ಟಿಂಗ್
ನಡೆಸುತ್ತಿದ್ದವರನ್ನು
ಜಿಲ್ಲಾಡಳಿತ
ಬಳಸಿಕೊಂಡಿತ್ತಷ್ಟೆ.
ದಶಕದಿಂದ ರಿವರ್ ರಾಫ್ಟಿಂಗ್ ನಡೆಯುತ್ತಿದೆ
ಕೊಡಗಿಗೆ ರಿವರ್ ರಾಫ್ಟಿಂಗ್ ಕಾಲಿಟ್ಟು ಒಂದು ದಶಕವಾಗಿದೆ. ಇಂತಹದೊಂದು ಕಲ್ಪನೆಯನ್ನು ಹುಟ್ಟು ಹಾಕಿದ್ದು ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್. ರಾಫ್ಟಿಂಗ್ ಗೆ ಕೊಡಗಿನಲ್ಲಿ ಕುಶಾಲನಗರ ಬಳಿಯ ದುಬಾರೆ ಮತ್ತು ದಕ್ಷಿಣಕೊಡಗಿನ ಬರಪೊಳೆಯನ್ನು ಸೂಚಿಸಲಾಯಿತು. ಆದರೆ ನಂತರದ ದಿನಗಳಲ್ಲಿ ದುಬಾರೆ ರಿವರ್ ರಾಫ್ಟಿಂಗ್ ಗೆ ಹೆಸರುವಾಸಿಯಾಯಿತು. ಮೊದಲಿಗೆ ನಾಲ್ಕಾರು ಮಂದಿ ಬರುತ್ತಿದ್ದರೆ, ನಂತರದ ವರ್ಷಗಳಲ್ಲಿ ಸಾವಿರ ಸಂಖ್ಯೆಗೆ ಏರಿತು. ಯಾವಾಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರೋ ಪೈಪೋಟಿ, ಕಿರಿಕಿರಿ ಆರಂಭವಾಗಿ ಹೊಡೆದಾಟ, ಬಡಿದಾಟಕ್ಕೂ ದಾರಿ ಮಾಡಿಕೊಟ್ಟಿದ್ದನ್ನು ಮರೆಯುವಂತಿಲ್ಲ.
ರಿವರ್ ರಾಫ್ಟಿಂಗ್ ಗೆ ತಟ್ಟಿದ ಬಿಸಿ
ಕಳೆದ ಎರಡು ವರ್ಷಗಳಿಂದ ಇಲ್ಲಿ ರಾಫ್ಟಿಂಗ್ ಸರಿಯಾಗಿ ನಡೆಯುತ್ತಿಲ್ಲ. ಜತೆಗೆ ಪ್ರವಾಸಿಗರೇ ಇತ್ತ ಸುಳಿಯುತ್ತಿಲ್ಲ. ಕೊರೊನಾ ಕೊಡಗಿನ ಜನರನ್ನು ಇನ್ನಿಲ್ಲದಂತೆ ಕಾಡಿದೆ. ಅದರಲ್ಲೂ ರಿವರ್ ರಾಫ್ಟಿಂಗ್ ನಡೆಸುತ್ತಿರುವವರಿಗೆ ಅದರ ಬಿಸಿ ಚೆನ್ನಾಗಿಯೇ ತಟ್ಟಿದೆ. ಇದು ಬಹಳಷ್ಟು ಕುಟುಂಬಗಳಿಗೆ ಆಸರೆಯಾಗಿತ್ತು. ಹೀಗಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾದರೆ ಮತ್ತೆ ರಾಫ್ಟಿಂಗ್ ನಡೆಸುವುದು ಕಷ್ಟವೇ. ಹೀಗಾಗಿ ಈ ಬಾರಿಯೂ ದುಬಾರೆಯಲ್ಲಿ ರಾಫ್ಟಿಂಗ್ ನಡೆಯುವುದು ಅಸಾಧ್ಯ ಎನ್ನಬಹುದು.