ಸಂತ್ರಸ್ತರಿಗೆ ಶೀಘ್ರ ಮನೆ ನೀಡಿ ಎಂದ ಕಂದಾಯ ಸಚಿವರು!
ಮಡಿಕೇರಿ, ಜೂನ್ 20: ಕಳೆದ ವರ್ಷ ಮುಂಗಾರಿನಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಸಂತ್ರಸ್ತರಿಗಾಗಿ ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ವೀಕ್ಷಣೆ ಮಾಡಿದರು.
ಬಳಿಕ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂತ್ರಸ್ತ ಕುಟುಂಬದವರಿಗೆ ಜುಲೈ31ರೊಳಗೆ ಕರ್ಣಂಗೇರಿಯಲ್ಲಿ ನಿರ್ಮಿಸಿರುವ ಮನೆಗಳನ್ನು, ಆಗಸ್ಟ್ 15ರೊಳಗೆ ಮದೆನಾಡು ಗ್ರಾಮದ ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಹಸ್ತಾಂತರಿಸಬೇಕು. ಉಳಿದಂತೆ ಜಂಬೂರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಕಿದ್ದರೆ ಮರಗಳ್ಳರನ್ನು ಶೂಟ್ ಮಾಡಿ: ಸಚಿವ ದೇಶಪಾಂಡೆ ಸೂಚನೆ
ಹಾಗೆಯೇ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಮನೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಹರಿಗೆ ಮನೆ ನೀಡಲು ಮುಂದಾಗಬೇಕು ಎಂದು ಅವರು ಹೇಳಿದರು.
ಈ ವೇಳೆ ಪ್ರಕೃತಿ ವಿಕೋಪದಲ್ಲಿ ಆದ ಹಾನಿಯ ಕುರಿತಂತೆ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಮಾಹಿತಿ ನೀಡಿದರು. 431 ಮನೆಗಳು ಪೂರ್ಣ ಹಾನಿಯಾಗಿವೆ. 405 ಮನೆಗಳು ಭಾಗಶಃ ಹಾನಿಯಾಗಿದ್ದು, ಒಟ್ಟು 770 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ 431 ಮನೆಗಳನ್ನು ಪ್ರಥಮ ಹಂತದಲ್ಲಿ ನಿರ್ಮಿಸಲಾಗುತ್ತಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಹೇಳಿದರು. ಸ್ವತಃ ಮನೆ ನಿರ್ಮಿಸಿಕೊಳ್ಳಲು 83 ಕುಟುಂಬದವರಿಂದ ಅರ್ಜಿಗಳು ಬಂದಿದ್ದು, ಇವರಲ್ಲಿ ಮನೆ ನಿರ್ಮಿಸಲು ಸೂಕ್ತ ಸ್ಥಳವಿರುವ 53 ಕುಟುಂಬಗಳಿಗೆ ಅನುಮತಿ ನೀಡಲಾಗಿದೆ. ಮನೆಗಾಗಿ ಜಿಲ್ಲಾಧಿಕಾರಿ ಅವರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ, ವಿಶೇಷ ಅದಾಲತ್ ಸೇರಿದಂತೆ ಒಟ್ಟು 1200 ಅರ್ಜಿಗಳು ಮನೆ ನಿರ್ಮಾಣಕ್ಕೆ ಬೇಡಿಕೆ ಬಂದಿದ್ದು, ಪರಿಶೀಲನಾ ಹಂತದಲ್ಲಿದೆ ಎಂದರು.
ಕೊಡಗು ಪ್ರವಾಹ : 35 ಸಂತ್ರಸ್ತರಿಗೆ ಮನೆಗಳ ಹಂಚಿಕೆ
ಕರ್ಣಂಗೇರಿ ಹಾಗೂ ಮದೆನಾಡು ಗ್ರಾಮದ ಬಳಿ ಕ್ರಮವಾಗಿ 35 ಮತ್ತು 80 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಜಂಬೂರಿನಲ್ಲಿ 120 ಮನೆಗಳ ಕಾಮಗಾರಿ ಮೇಲ್ಛಾವಣಿ ಹಂತದಲ್ಲಿದೆ. 150 ಮನೆಗಳ ಅಡಿಪಾಯ ಪೂರ್ಣಗೊಂಡಿದೆ. ಕರ್ಣಂಗೇರಿ ಮತ್ತು ಮದೆನಾಡುವಿನಲ್ಲಿ ಆದಷ್ಟು ಶೀಘ್ರ ಮನೆ ಹಸ್ತಾಂತರಿಸಬಹುದಾಗಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್ ತಿಳಿಸಿದರು.
ಮುಂಗಾರು ಮಳೆ ಅನಾಹುತ ಎದುರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ
ಅಧಿಕಾರಿಗಳು ಮತ್ತು ಶಾಸಕರಿಂದ ಮಾಹಿತಿ ಪಡೆದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಪ್ರಕೃತಿ ವಿಕೋಪದ ಮನೆ ನಿರ್ಮಾಣ ಕಾಮಗಾರಿ, ರಸ್ತೆ ಸೇರಿದಂತೆ ವಿವಿಧ ಹಂತದ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.