ಎರಡು ತಿಂಗಳ ಮಗುವನ್ನು ರಕ್ಷಿಸಿದ ಈ ವಿಡಿಯೋ ಎಲ್ಲೆಲ್ಲೂ ವೈರಲ್
ಕೊಡಗು ಜಿಲ್ಲೆಯು ಮಳೆಯ ಪೆಟ್ಟಿನಿಂದ ದಿಕ್ಕೆಟ್ಟು ನಿಂತು, ಈಗ ತಾನೇ ಉಸ್ಸಪ್ಪೋ ಎಂದು ಚೇತರಿಸಿಕೊಳ್ಳುತ್ತಿದೆ. ಇಂಥ ಸನ್ನಿವೇಶದಲ್ಲಿ ಒಂದೊಂದು ಮಾನವೀಯ ಅಂತಃಕರಣದ ಘಟನೆಗಳು ತೆರೆದುಕೊಳ್ಳುತ್ತಿವೆ. ನಮ್ಮ ಮಧ್ಯೆಯೇ ಓಡಾಡುವ 'ಹೀರೋ'ಗಳನ್ನು ನೋಡಲು ಸಾಧ್ಯವಾಗುತ್ತಿದೆ. ಅಂಥದ್ದೇ ಒಂದು ಪರಿಹಾರ ಕಾರ್ಯಾಚರಣೆ ಬಗ್ಗೆ ಎಲ್ಲರ ಗಮನ ಹೋಗಿದೆ.
ಎರಡು ತಿಂಗಳ ಮಗುವನ್ನು ರಕ್ಷಣೆ ಮಾಡಿದ ಆ ಅದ್ಭುತ ಕಾರ್ಯಾಚರಣೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಮೆಚ್ಚುಗೆ ಸೂಚಿಸಿದ್ದಾರೆ. ಆ ವಿಡಿಯೋದಲ್ಲಿ ದಾಖಲಾಗಿರುವ ದೃಶ್ಯಗಳು ಎಂಥವರ ಎದೆ ನಡುಗಿಸುವ ಜತೆಗೆ ಮನ ಕರಗುವಂತೆ ಮಾಡುತ್ತವೆ.
ಭಾರತದ ಭೀಕರ ಪ್ರವಾಹಗಳು, 1 ಲಕ್ಷ ಮಂದಿ ಮೃತರು, 4 ಲಕ್ಷ ಕೋಟಿ ನಷ್ಟ
ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿಯ ಸದಸ್ಯರೊಬ್ಬರು ಹುಚ್ಚೆದ್ದು ಹರಿಯುತ್ತಿರುವ ನೀರಿನ ಮೇಲ್ಭಾಗದಲ್ಲಿ ಕಟ್ಟಿದ್ದ ಹಗ್ಗದ ಸಹಾಯದಿಂದ ಎರಡು ತಿಂಗಳ ಮಗುವನ್ನು ರಕ್ಷಣೆ ಮಾಡಿರುವ ಆ ವಿಡಿಯೋ ಎಲ್ಲೆಲ್ಲೂ ಸುದ್ದಿಯಾಗಿದೆ.
ವೃತ್ತಿಪರರಾದ ಸಿ.ಎಂ.ಪ್ರವೀಣ್ ಅವರು ಎರಡು ತಿಂಗಳ ಮಗುವನ್ನು ಅವಚಿಕೊಂಡು, ಹರಿಯುತ್ತಿರುವ ನೀರಿಗೆ ಸ್ವಲ್ಪವೇ ಮೇಲ್ಮಟ್ಟದಲ್ಲಿ ಹಗ್ಗದ ಮೇಲೆ ಜಾರುತ್ತಾ ಸಾಗುವ ದೃಶ್ಯ ಎದೆ ಝಲ್ ಎನ್ನುವಂತೆ ಮಾಡುತ್ತದೆ. ಈ ಘಟನೆಯು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಂತಿಪಾಲದಲ್ಲಿ ನಡೆದಿದೆ. ಎರಡು ತಿಂಗಳ ಮಗು ಶಾಲಿನಿಯನ್ನು ಕಾಪಾಡಲಾಗಿದೆ.
ಇಡೀ ರಕ್ಷಣಾ ಕಾರ್ಯಾಚರಣೆಯಲ್ಲಿ ಅದು ಬಹಳ ಕಠಿಣವಾದ ಸವಾಲಾಗಿತ್ತು. ನಾವು ಇಂಥ ರಕ್ಷಣಾ ಕೆಲಸಗಳನ್ನು ನುರಿತವರಾಗಿದ್ದೇವೆ ಎಂದು ಪ್ರವೀಣ್ ಹೇಳಿದ್ದಾರೆ.
ಆ ಕುಟುಂಬ ಇದ್ದ ಸ್ಥಳಕ್ಕೆ ಎಂಟು ಕಿ.ಮೀ. ಕಡಿದಾದ ಜಾಗದಲ್ಲಿ ಸಾಗಬೇಕಿತ್ತು. ಏಕೆಂದರೆ ಆ ಮನೆಗೆ ತಲುಪುವ ಎಲ್ಲ ರಸ್ತೆಗಳು ಮಣ್ಣಿನಲ್ಲಿ ಕೊಚ್ಚಿಹೋಗಿದ್ದವು. ನಮ್ಮೆದುರು ಭೂ ಕುಸಿತ ಆಗಿತ್ತು. ನಾವು ತಕ್ಷಣವೇ ಸ್ಥಳಾಂತರ ಮಾಡಬೇಕಿತ್ತು. ಮಗುವಿನ ತಾಯಿ, ಅಜ್ಜಿ ಸೇರಿದ ಹಾಗೆ ಐದು ಮಂದಿ ನಮ್ಮ ಸಲಕರಣೆ ಬಳಸಿ ಹಳ್ಳವನ್ನು ದಾಟಿದರು. ಆ ನಂತರ ನಾನು ಮಗವನ್ನು ಅವಚಿಕೊಂಡು ಹಳ್ಳ ದಾಟಿದೆ ಎಂದು ಅನುಭವ ಹಂಚಿಕೊಳ್ಳುತ್ತಾರೆ ಪ್ರವೀಣ್.
ಆ ಮೇಲೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು, ಪರೀಕ್ಷೆ ಮಾಡಿಸಿದ ನಂತರ ಪೋಷಕರಿಗೆ ನೀಡಲಾಗಿದೆ. "ಒಂದು ವೇಳೆ ಪ್ರವೀಣ್ ಅಲ್ಲಿ ಇರದಿದ್ದರೆ ನನ್ನ ಕುಟುಂಬ ಬದುಕುಳಿಯುತ್ತಿರಲಿಲ್ಲ" ಎಂದು ಮಗುವಿನ ತಂದೆ ಸಂತು ಹೇಳಿದ್ದಾರೆ. ಮಳೆ ಅವಘಡ ಸಂಭವಿಸುವ ವೇಳೆ ಸಂತು ಅವರು ತಮ್ಮ ಕುಟುಂಬದ ಜತೆಗೆ ಇರಲಿಲ್ಲ.