ಮಡಿಕೇರಿ ಅರಮನೆಗೆ ದುರಸ್ತಿ ಭಾಗ್ಯ: ಭರದಿಂದ ಸಾಗಿದೆ ಕಾಮಗಾರಿ
ಮಡಿಕೇರಿ, ಮಾರ್ಚ್ 11: ಆಳರಸರ ಆಳ್ವಿಕೆಯ ಕುರುಹುಗಳಾಗಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ಸ್ಮಾರಕವಾಗಿ ಅಳಿದು ಉಳಿದಿರುವ ಮಡಿಕೇರಿ ಕೋಟೆಯ ಅರಮನೆಯನ್ನು ಸಂರಕ್ಷಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮುಂದಾಗಿದೆ.
ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಅರಮನೆಯು, ಈಗ ಅದಕ್ಕೆ ದುರಸ್ತಿ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಕೆಲಸ ಭರದಿಂದ ಸಾಗಿದೆ. ಅರಮನೆಯ ಅವ್ಯವಸ್ಥೆಯ ಕುರಿತು ಮಾಧ್ಯಮಗಳು ಈ ಹಿಂದೆ ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದವು.
ಮತ್ತೊಂದು ಮಳೆಗಾಲ ಬಂದರೂ ಹೀಗೇ ಇದೆಯಲ್ಲ ಮಡಿಕೇರಿ ಅರಮನೆ
ಇದೀಗ ಅರಮನೆಯ ಹಳೆಯ ಹೆಂಚುಗಳನ್ನು ಸಂಪೂರ್ಣವಾಗಿ ತೆಗೆದು ಒಳಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್ಗಳು ಮತ್ತು ಮರದ ಪಟ್ಟಿಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ.
ಮಂಗಳೂರು ಮೂಲದ ಗುತ್ತಿಗೆದಾರರು
ಕಾಮಗಾರಿ ನಡೆಸಲು ಪುರಾತತ್ವ ಇಲಾಖೆ ಈ ಹಿಂದೆ ಟೆಂಡರ್ ಕರೆದಿದ್ದು, ಮೊದಲು ಟೆಂಡರ್ ಕರೆದವರು ಇಲಾಖೆಯ ಯೋಜನಾ ವರದಿಗೆ(ಡಿಪಿಆರ್) ಒಪ್ಪದೇ ಹಿಂದೆ ಸರಿದ ಹಿನ್ನೆಲೆಯಲ್ಲಿ ಇದೀಗ ಎರಡನೇ ಬಾರಿಗೆ ಟೆಂಡರ್ ಕರೆಯಲಾಗಿದೆ.
ಮಂಗಳೂರು ಮೂಲದ ಗುತ್ತಿಗೆದಾರರು ಈ ಕಾಮಗಾರಿಯ ನೇತೃತ್ವ ವಹಿಸಿಕೊಂಡಿದ್ದು, ಮಡಿಕೇರಿಯ ಸ್ಥಳೀಯ ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಮಳೆಗಾಲಕ್ಕೂ ಮುನ್ನ ದುರಸ್ತಿ ಕಾರ್ಯ ಮುಗಿಸಿ
ಕಳೆದ ಹಲವು ವರ್ಷಗಳಿಂದ ಅರಮನೆ ಸೇರಿದಂತೆ ಕೋಟೆ ಆವರಣವನ್ನು ನಿರ್ಲಕ್ಷ್ಯ ಮಾಡಿದ್ದ ಪರಿಣಾಮ ಅಮೂಲ್ಯ ಕುರುಹುಗಳು ಹಾನಿಗೀಡಾಗಿವೆ. ಕೋಟೆ ಮೇಲ್ಛಾವಣಿಯಲ್ಲಿ ಅಳವಡಿಸಿದ್ದ ಸಾವಿರಾರು ಹೆಂಚುಗಳು ಗಾಳಿ, ಮಳೆಗೆ ಈಗಾಗಲೇ ಬಿದ್ದು ಒಡೆದು ಹಾಳಾಗಿವೆ. ಹಳೆಯ ಹೆಂಚುಗಳ ಬದಲಿಗೆ ಈಗಿನ ನೂತನ ಮಾದರಿಯ ಮಂಗಳೂರು ಹೆಂಚುಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ.
ಗತವೈಭವಕ್ಕೆ ಮರಳಲು ಕಾಯುತ್ತಿದೆಯಾ ಮಡಿಕೇರಿ ಅರಮನೆ?
ಈಗಾಗಲೇ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿ ಬಂದಿದೆ.
ಕಾಮಗಾರಿಯಿಂದ ಪ್ರವಾಸಿಗರಿಗೆ ನಿರಾಸೆ
ಕೋಟೆ ಆವರಣದಲ್ಲಿದ್ದ ಸರ್ಕಾರಿ ಕಚೇರಿಗಳು ಬಹುತೇಕ ಸ್ಥಳಾಂತರಗೊಂಡಿದ್ದರೂ, ನ್ಯಾಯಾಲಯ ಅಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯ, ಜಿಲ್ಲಾ ಪಂಚಾಯತಿ ಹಳೇ ಇಂಜಿನಿಯರಿಂಗ್ ವಿಭಾಗದ ಕಟ್ಟಡಗಳು, ಓವರ್ ಹೆಡ್ ಟ್ಯಾಂಕ್ ನ್ನು ಇದೇ ಆಗಸ್ಟ್ 31 ರೊಳಗೆ ತೆರವುಗೊಳಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ನ್ಯಾಯಾಲಯ ಕೂಡ ನೂತನ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. ಇದೀಗ ಅರಮನೆಯ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿರುವುದರಿಂದ ಪ್ರತಿದಿನ ಕೋಟೆ ಆವರಣ ವೀಕ್ಷಿಸಲು ಆಗಮಿಸುತ್ತಿರುವ ನೂರಾರು ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ.
53 ಲಕ್ಷ ರೂ, ಗಳ ದುರಸ್ತಿ ಯೋಜನೆ
ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಕ್ಷ ಜಿಲ್ಲಾಧಿಕಾರಿಗಳು ಕೋಟೆ ಆವರಣದ ಅಭಿವೃದ್ಧಿ ಮತ್ತು ಆಕರ್ಷಕ ಪ್ರವಾಸಿತಾಣವನ್ನಾಗಿ ಪರಿವರ್ತಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿದ್ದರು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯ ಹಿನ್ನೆಲೆ ಮಹತ್ವಾಕಾಂಕ್ಷೆಯ ಯಾವುದೇ ಯೋಜನೆಗಳು ಸಾಕಾರಗೊಂಡಿದ್ದಿಲ್ಲ. ಪುರಾತತ್ವ ಇಲಾಖೆ ಸುಮಾರು 53 ಲಕ್ಷ ರುಪಾಯಿ ವೆಚ್ಚದಲ್ಲಿ ಕೋಟೆ ಆವರಣ ಮತ್ತು ಅರಮನೆಯ ದುರಸ್ತಿ ಕಾರ್ಯಕ್ಕೆ ಯೋಜನೆಯನ್ನು ಸಿದ್ಧಪಡಿಸಿ ಹಲವು ತಿಂಗಳುಗಳೇ ಕಳೆದಿದ್ದವು. ಆದರೆ ಅಭಿವೃದ್ಧಿ ಕಾರ್ಯವನ್ನು ಇನ್ನೂ ಕೂಡ ಆರಂಭಿಸಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.