ಕೊಡಗಿಗೆ ಪ್ರವಾಸ ಹೊರಟಿರಾ? ಹಾಗಿದ್ದರೆ ಈ ಮಳೆ ವರದಿ ಓದಿಕೊಳ್ಳಿ...
ಮಡಿಕೇರಿ, ಜುಲೈ 31 : ಕೊಡಗಿನಲ್ಲಿ ಮಳೆಯ ಅಬ್ಬರ ತಗ್ಗಿದೆ. ಹೀಗಾಗಿ, ಅಬ್ಬಾ ಸಾಕಪ್ಪಾ ಸ್ವಲ್ಪ ದಿನ ಬಿಡುವು ನೀಡಲಿ ಅಂತ ಜನ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಮಳೆಯು ಹತ್ತಾರು ಅನಾಹುತ ಸೃಷ್ಠಿಸಿತ್ತು. ಕೋಟ್ಯಂತರ ರುಪಾಯಿ ನಷ್ಟವೂ ಸಂಭವಿಸಿತ್ತು. ಅದಕ್ಕಿಂತ ಹೆಚ್ಚಾಗಿ ಮಳೆಯಿಂದಾಗಿ ಮಿಡಿ ಕಚ್ಚಿದ ಕಾಫಿ ಉದುರುತ್ತಿದೆ.
ಇದು ಮುಂದುವರಿದರೆ ಬೆಳೆಗಾರರ ಬದುಕು ಮೂರಾಬಟ್ಟೆ ಆಗುವುದಂತೂ ಖಚಿತವಾಗಿದೆ. ಕಳೆದ ಕೆಲವು ವರ್ಷಗಳಿಂದ ಮಳೆಯೇ ಇಲ್ಲ ಎಂದು ಗೋಗರೆಯುತ್ತಿದ್ದವರಿಗೆ ಮತ್ತೆ ಮಳೆಗಾಲದ ನೆನಪನ್ನು ಈ ಬಾರಿಯ ಮುಂಗಾರು ಮಾಡಿಸಿಕೊಟ್ಟಿದೆ. ಈಗ ಮಳೆ ಕಡಿಮೆಯಾಗಿರುವ ಕಾರಣ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಸುದ್ದಿಯ ಜಂಜಾಟ ಮರೆತು ಕೆಸರುಗದ್ದೆಯಲ್ಲಿ ಮಿಂದೆದ್ದ ಕೊಡಗಿನ ಪತ್ರಕರ್ತರು
ಜತೆಗೆ ಹಾರಂಗಿಗೆ ಬರುವ ನೀರಿನ ಪ್ರಮಾಣ ಕಡಿಮೆಯಾದ ಕಾರಣ ನದಿಗೆ ಬಿಡುವ ನೀರನ್ನು ಕಡಿಮೆ ಮಾಡಲಾಗಿದ್ದು, ನಾಲ್ಕರ ಪೈಕಿ ಕೇವಲ ಒಂದೇ ಒಂದು ಕ್ರಸ್ಟ್ ಗೇಟ್ ನಲ್ಲಿ ನೀರು ಹರಿಯುತ್ತಿದೆ.
ಇನ್ನೊಂದೆಡೆ ಸಂತೋಷ ಪಡುವ ವಿಚಾರವೆಂದರೆ, ಸೋಮವಾರಪೇಟೆ ತಾಲೂಕಿನ ಐತಿಹಾಸಿಕ ಹೊನ್ನಮ್ಮನ ಕೆರೆ ಜುಲೈ ತಿಂಗಳಿನಲ್ಲೇ ಭರ್ತಿಯಾಗಿರುವುದು. ಇದು ಸುಮಾರು 19 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಒತ್ತುವರಿಯಾಗಿರುವುದರಿಂದ ಅಷ್ಟು ಪ್ರದೇಶ ಇಲ್ಲ ಎನ್ನಲಾಗುತ್ತಿದೆ.
ಆದರೆ, ಈ ಕೆರೆ ತುಂಬಿದರೆ ರೈತರ ಜಮೀನಿಗೆ ನೀರಾಗುತ್ತದೆ. ಈ ಕೆರೆಗೆ ದೊಡ್ಡಮಳ್ತೆ ಮತ್ತು ಸುಳಿಮಳ್ತೆ ಗ್ರಾಮ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು ಹರಿದುಬರುತ್ತಿದ್ದು, ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಆಗಿರುವುದರಿಂದ ಕೆರೆಯ ಮೆಟ್ಟಿಲುಗಳು ಮುಳುಗಿವೆ.
ಕರ್ನಾಟಕದದಲ್ಲಿ ಹಲವು ದಿನಗಳ ನಂತರ ಬಿಡುವು ಪಡೆವ ಮಳೆರಾಯ
ಈಗ ಹೆಚ್ಚಿನವರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. ಮಳೆ ಬಿಡುವು ಕೊಟ್ಟ ಪರಿಣಾಮ ಕೃಷಿ ಚಟುವಟಿಕೆ ಭರದಿಂದ ಸಾಗುತ್ತಿದೆ. ಸಾಮಾನ್ಯವಾಗಿ ಕಕ್ಕಡ ಮಾಸದಲ್ಲಿ ಮಳೆ ಜಾಸ್ತಿ ಸುರಿಯಬೇಕು. ಬಹುಶಃ ಚೇತರಿಸಿದರೂ ಅಚ್ಚರಿಪಡುವಂತಿಲ್ಲ. ಆದರೂ ಮಳೆ ಪ್ರಮಾಣವಷ್ಟೆ ಕಡಿಮೆಯಾಗಿದೆ ಹೊರತು ಮಳೆ ಸುರಿಯುತ್ತಿದೆ.
ಮೈ ಕೊರೆಯುವ ಚಳಿಯೂ ಇದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 11.87 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 22.20 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 5.43 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 7.97 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಜಿಲ್ಲೆಯಲ್ಲಿ 2581.48 ಮಿ.ಮೀ ಮಳೆ ಸುರಿದಿದೆ.