ಕೊಡಗಿನಲ್ಲಿ ತಗ್ಗಿದ ಮಳೆ, ಭರ್ತಿಯಾಗದ ಹಾರಂಗಿ ಜಲಾಶಯ...
ಮಡಿಕೇರಿ, ಜುಲೈ 14: ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆಯಾದ ಬೆನ್ನಲ್ಲೇ ಮಳೆಯ ಆರ್ಭಟ ತಗ್ಗಿದ್ದು, ಹಾರಂಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇಳಿಕೆಯಾಗಿರುವುದರಿಂದ ಸದ್ಯಕ್ಕೆ ಭರ್ತಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಕಳೆದ ಕೆಲವು ದಿನಗಳ ಹಿಂದೆ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ಜಲಾಶಯದ ಒಳ ಹರಿವು ಹೆಚ್ಚಾಗಿತ್ತಲ್ಲದೇ, ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡು ಬಂದಿತ್ತು. ಒಂದು ವೇಳೆ ಮಳೆ ಅದೇ ರೀತಿಯಲ್ಲಿ ಮುಂದುವರೆದಿದ್ದರೆ ಹಾರಂಗಿ ಜಲಾಶಯ ಇಷ್ಟರಲ್ಲಿಯೇ ಭರ್ತಿಯಾಗುತ್ತಿತ್ತು.
ಮಹಾಮಳೆಗೆ ಭಾಗಮಂಡಲ- ತಲಕಾವೇರಿ ರಸ್ತೆಯಲ್ಲಿ ಗುಡ್ಡ ಕುಸಿತ
ಮಡಿಕೇರಿ ಮತ್ತು ಸೋಮವಾರಪೇಟೆಯ ಕೆಲವು ಭಾಗಗಳಲ್ಲಿ ಸುರಿವ ಮಳೆ ನೀರು ನೇರವಾಗಿ ಹರಿದು ಹಾರಂಗಿ ಜಲಾಶಯವನ್ನು ಸೇರುತ್ತಿದ್ದು, ಈಗ ಮಡಿಕೇರಿಯಲ್ಲಿ ಮಳೆ ಸುರಿಯದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ.
ಗರಿಷ್ಠ 2,859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಸದ್ಯ 2851.24 ಅಡಿಯಷ್ಟು ನೀರಿದ್ದು, ಭರ್ತಿಯಾಗಲು ಕೇವಲ 9 ಅಡಿಯಷ್ಟು ಬಾಕಿಯಿದೆ. ಒಳ ಹರಿವು ಕಡಿಮೆಯಾಗಿದ್ದು, ಕೇವಲ 917 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಪೈಕಿ 300 ಕ್ಯೂಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2818.35 ಅಡಿಯಷ್ಟು ನೀರಿದ್ದುದನ್ನು ಸ್ಮರಿಸಬಹುದಾಗಿದೆ.
ಕೊಡಗಿನಲ್ಲಿ ಮುಂದುವರೆದ ಮಳೆ... ಹಾರಂಗಿ ಜಲಾಶಯದಲ್ಲಿ ಹೆಚ್ಚಿದ ನೀರಿನ ಪ್ರಮಾಣ
ಇದೀಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಒಂದು ದಿನದ ಅವಧಿಯಲ್ಲಿ ಸರಾಸರಿ 9.05 ಮಿ.ಮೀ ನಷ್ಟು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿವರೆಗೆ 595.14 ಮಿ.ಮೀ ಮಳೆ ಬಂದಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತುಸು ಹೆಚ್ಚು ಎನ್ನಬಹುದು.
ಭಾರೀ ಮಳೆ ಸುರಿಯುವ ಭಾಗಮಂಡಲದಲ್ಲಿಯೂ ಮಳೆಯ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಇದರಿಂದ ಕಾವೇರಿ ನದಿಯಲ್ಲಿ ನೀರು ಹರಿಯುವಿಕೆಯ ರಭಸ ಕಡಿಮೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಮಡಿಕೇರಿ ತಾಲೂಕಿನಲ್ಲಿ 935.62 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 506.24 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ 343.55 ಮಿ.ಮೀ. ಮಳೆ ಸುರಿದಿದೆ.