ಕೊಡಗಿನಲ್ಲಿ ರೆಡ್ ಅಲರ್ಟ್: ಮಡಿಕೇರಿಯಲ್ಲಿ ತಕ್ಕಮಟ್ಟಿಗೆ ಮಳೆ!
ಮಡಿಕೇರಿ, ಜುಲೈ 20: ಇದೀಗ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಬದಲಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಡಿಕೇರಿ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಅಷ್ಟೇನೂ ಮಳೆ ಸುರಿಯುತ್ತಿಲ್ಲ. ಆದರೆ ಭಾರತೀಯ ಹವಾಮಾನ ಇಲಾಖೆ ಜುಲೈ 20 ರಿಂದ 23ರವರೆಗೆ 204 ಮಿ.ಮೀ ಗಿಂತ ಹೆಚ್ಚು ಮಳೆ ಸುರಿಯುತ್ತದೆ ಎಂದು ಮುನ್ಸೂಚನೆ ನೀಡಿರುವುದು ಈಗಾಗಲೇ ಭೂಕುಸಿತ ಸಂಭವಿಸಿದ ಪ್ರದೇಶಗಳ ವ್ಯಾಪ್ತಿಯಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.
ಈ ನಡುವೆ ಜುಲೈ 18ರಂದು ರಾತ್ರಿ ಭಾರಿ ಮಳೆ ಸುರಿದಿತ್ತು, ಹಾಗೆಯೇ ಜುಲೈ 19ರಂದು ಕೂಡ ಬೆಳಿಗ್ಗೆಯಿಂದಲೇ ಮಳೆ ಸುರಿಯುವ ಮೂಲಕ ಮುಂಗಾರು ಮಳೆಯ ವಾತಾವರಣವನ್ನು ಸೃಷ್ಟಿಸಿತ್ತು.
ಭಾರಿ ಮಳೆ ಮನ್ಸೂಚನೆ: ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್
ಮಡಿಕೇರಿ ಸುತ್ತಮುತ್ತ ಮಳೆ ಸ್ವಲ್ಪ ಮಟ್ಟಿಗೆ ಚೇತರಿಸಿದಂತೆ ಕಾಣುತ್ತಿದೆ. ಆದರೆ ಭಾರಿ ಮಳೆ ಸುರಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಸ್ಥಳೀಯರನ್ನು ಕೇಳಿದರೆ, ಮಳೆಯೇ ಸುರಿದಿಲ್ಲ. ಈಗ ಸುರಿಯುತ್ತಿರುವ ಮಳೆಯೂ ಏನೇನೂ ಸಾಲದಾಗಿದೆ. ಇಷ್ಟರಲ್ಲೇ ಮಳೆ ಸುರಿದು ನದಿ, ತೊರೆಗಳು ತುಂಬಿ ಹರಿಯಬೇಕಿತ್ತು. ಆದರೀಗ ಯಾವುದೇ ನದಿ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಸಂಭವಿಸಿದ ದುರ್ಘಟನೆಯಿಂದ ಜನ ಭಯಪಡುತ್ತಿದ್ದಾರೆ ವಿನಃ ಈಗಿನ ಮಳೆ ಏನೇನೂ ಸಾಲದು. ಮಳೆ ನೀರನ್ನು ನಂಬಿ ಭತ್ತದ ಕೃಷಿ ಕೈಗೊಂಡಿರುವ ರೈತರು ನೀರಿಲ್ಲದೆ, ಪರದಾಡುವಂತಾಗಿದೆ. ಆದರೆ ಇದೀಗ ಇನ್ನು ಮೂರು ದಿನಗಳ ಕಾಲ ಭಾರೀ ಮಳೆಯಾಗುತ್ತದೆ ಎಂಬ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಮಡಿಕೇರಿ ವ್ಯಾಪ್ತಿಯ ಕೆಲವು ಪ್ರದೇಶಗಳ ಜನರಲ್ಲಿ ಭೀತಿ ಸೃಷ್ಟಿಸಿದೆ.
ಒಂದು ವೇಳೆ ಮಳೆಯಿಂದ ಏನಾದರೂ ತೊಂದರೆ ಸಂಭವಿಸಿದಲ್ಲಿ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08272-221077 ಹಾಗೂ ವಾಟ್ಸ್ ಆಪ್ ಸಂಖ್ಯೆ 8550001077 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಈಗಾಗಲೇ ಎಲ್ಲಾ ಇಲಾಖೆಯ ಅಧಿಕಾರಿಗಳು ಎನ್ಡಿಆರ್ ಎಫ್ ತಂಡದ ಸಹಕಾರದೊಂದಿಗೆ ಮಳೆಯ ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ಮುಂದಿನ ಮೂರು ದಿನವೂ ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ
ಆದರೆ ಕಳೆದ ಒಂದು ದಿನದಲ್ಲಿ ಸುರಿದ ಮಳೆಯ ದಾಖಲೆ ನೋಡುವುದಾದರೆ, ಜಿಲ್ಲೆಯಲ್ಲಿ ಸರಾಸರಿ 24.47 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 34.17 ಮಿ.ಮೀ. ಮಳೆಯಾಗಿದ್ದನ್ನು ಸ್ಮರಿಸಬಹುದು. ಇನ್ನು ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯ ವಿವರವನ್ನು ನೋಡುವುದಾದರೆ, ಇದುವರೆಗೆ 758.80ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2309.04 ಮಿ.ಮೀ ಮಳೆಯಾಗಿತ್ತು.
ಹಾಗೆ ನೋಡಿದರೆ ಮಡಿಕೇರಿ ನಗರ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚು ಮಳೆಯಾಗುತ್ತಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ವಿರಾಜಪೇಟೆಯಲ್ಲಿ 11.75 ಮಿ.ಮೀ, ಸೋಮವಾರಪೇಟೆಯಲ್ಲಿ 9.10 ಮಿ.ಮೀ. ಸುರಿದಿದೆ. ಈ ಎರಡು ತಾಲ್ಲೂಕಿಗಿಂತ ಮಡಿಕೇರಿಯಲ್ಲಿ ಮಾತ್ರ ಸ್ವಲ್ಪ ಹೆಚ್ಚಿನ ಮಳೆಯಾಗುತ್ತಿರುವುದು ಕಂಡು ಬಂದಿದೆ. ಕೊಡಗಿನ ಕೆಲವೆಡೆ ಮಾತ್ರ ಮಳೆಯಾಗುತ್ತಿದೆ. ಇನ್ನು ಕೆಲವೆಡೆ ಮೋಡಕವಿದ ವಾತಾವರಣ ತುಂತುರು ಮಳೆಗೆ ಸಮಾಧಾನಪಟ್ಟುಕೊಳ್ಳುವಂತಾಗಿದೆ.
ಬೆಂಗಳೂರಲ್ಲಿ ಭಾರಿ ಮಳೆ ಮುನ್ಸೂಚನೆ : ರೆಡ್ ಅಲರ್ಟ್ ಘೋಷಣೆ
ಮಡಿಕೇರಿ ವ್ಯಾಪ್ತಿಯಲ್ಲಿ ಮಳೆಯಾದರೆ ಹಾರಂಗಿ ಜಲಾಶಯಕ್ಕೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರಲಿದ್ದು, ಶೀಘ್ರ ಭರ್ತಿಯಾಗುವ ಸಾಧ್ಯತೆಯಿದೆ. ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕೇವಲ 2280 ಕ್ಯುಸೆಕ್, ಕಳೆದ ವರ್ಷ 7305 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ 2823.27 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಜಲಾಶಯದಿಂದ ಸುಮಾರು 12 ಸಾವಿರ ಕ್ಯುಸೆಕ್ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗಿತ್ತು. ಹೀಗಾಗಿ ಕೆಆರ್ ಎಸ್ ಜಲಾಶಯ ಭರ್ತಿಯಾಗಿತ್ತು.