ಮಹಾಮಳೆಯಿಂದ ನಲುಗಿದ ಊರಲ್ಲಿ ಸೂತಕದ ಕಳೆ
ಮಡಿಕೇರಿ, ಆಗಸ್ಟ್.29: ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಮಡಿಕೇರಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿಯುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಮಹಾಮಳೆಯಿಂದ ಸಂಕಷ್ಟ ಅನುಭವಿಸುತ್ತಿರುವ ಗ್ರಾಮಗಳಲ್ಲಿ ಪರ್ಯಾಯ ಕಾರ್ಯಗಳನ್ನು ಮಾಡಲು ತೊಂದರೆ ಅನುಭವಿಸುವಂತಾಗಿದೆ.
ಇಷ್ಟರಲ್ಲೇ ಈ ಊರುಗಳು ಗದ್ದೆ ನಾಟಿ ಮುಗಿಸಿಕೊಂಡು ಕೊಡಗಿನ ಕೈಲ್ ಮುಹೂರ್ತ ಹಬ್ಬದ ಆಚರಣೆಯ ಸಡಗರದಲ್ಲಿರಬೇಕಿತ್ತು. ಆದರೆ ಇದೀಗ ಇಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮನೆ, ಆಸ್ತಿ ಕಳೆದುಕೊಂಡು ಕೆಲವರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರೆ ಮತ್ತೆ ಕೆಲವರು ಪಟ್ಟಣಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ.
ಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳು
ಇನ್ನು ಕೆಲವು ಅಸಹಾಯಕರು ಸಂತ್ರಸ್ತರ ಶಿಬಿರಗಳಲ್ಲಿಯೇ ಮುಂದುವರೆದಿದ್ದಾರೆ. ಕೆಲವರು ಸಂತ್ರಸ್ತರ ಶಿಬಿರಗಳಿಂದ ಹಿಂತಿರುಗಿ ತಮ್ಮ ಮನೆಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ಕಾಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಊರಿಗೆ ಊರೇ ಕುಸಿದು ಹೋಗಿದ್ದು ಅಲ್ಲಿ ಸ್ಮಶಾನ ಮೌನ ಆವರಿಸಿದೆ ಕೆಲವರ ಮನೆಗಳು, ತೋಟಗಳು ಮಣ್ಣುಪಾಲಾಗಿವೆ.
ಮತ್ತೆ ಕೆಲವರ ಮನೆಗಳು ಬಿರುಕು ಬಿಟ್ಟಿದ್ದರೆ, ಇನ್ನು ಕೆಲವರದು ಮನೆಯೇನೋ ಇದೆಯಾದರೂ ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲವಾಗಿದೆ. ಒಟ್ಟಾರೆ ಮತ್ತೆ ಇಲ್ಲಿ ಜೀವನ ಕಟ್ಟಿಕೊಳ್ಳುವುದು ಅಷ್ಟು ಸುಲಭವಂತು ಇಲ್ಲವೇ ಅಲ್ಲ.
ಚಿತ್ರಗಳು : ಮಳೆ, ಗುಡ್ಡ ಕುಸಿತ, ಅಪಾರ ನಷ್ಟದ ಬಳಿಕ ಕೊಡಗು
ಇದೆಲ್ಲದರ ನಡುವೆ ಮಡಿಕೇರಿಯ ಮಂಗಳಾದೇವಿನಗರ, ಚಾಮುಂಡೇಶ್ವರಿ ನಗರ, ಉಡೋತ್ ಮುಂತಾದ ಕಡೆ ಮಳೆ ಗಾಳಿಗೆ ಕೆಲವು ಮನೆಗಳು ಉರುಳಿ ಬಿದ್ದಿವೆ. ಇನ್ನು ಕೆಲವು ಮನೆಗಳಿಗೆ ಮನೆಯ ಹಿಂಭಾಗದ ಗುಡ್ಡ ಕುಸಿದು ಬಂದು ಅಪ್ಪಳಿಸಿದೆ.
ಕೊಡಗಿನಲ್ಲಿ ಮತ್ತೆ ಮನೆ ನಿರ್ಮಿಸುವ ನಿರಾಶ್ರಿತರ ಕನಸು ನನಸಾಗುವುದೇ?
ಉಳಿದಂತೆ ಇಲ್ಲಿರುವ ಮನೆಗಳಲ್ಲಿ ಯಾವಾಗ ಏನು ಸಂಭವಿಸುತ್ತದೆಯೋ ಎಂದು ಹೇಳಲಾಗದ ಪರಿಸ್ಥಿತಿಯಿದ್ದು, ಮನೆಯ ಹಿಂಭಾಗದಲ್ಲಿ ಜಲ ಹುಟ್ಟಿ ಹರಿಯುತ್ತಿದ್ದು, ಭಯದ ವಾತಾವರಣವನ್ನು ಸೃಷ್ಠಿ ಮಾಡಿದೆ. ಇದು ಇಷ್ಟಕ್ಕೆ ಮುಗಿದಿಲ್ಲ. ಜಲಪ್ರವಾಹಕ್ಕೆ ನಲುಗಿದ ಜನರು ಇನ್ನು ಏನೆಲ್ಲಾ ಎದುರಿಸಬೇಕಾಗಿದೆ ಗೊತ್ತಾ?
ಜಿಲ್ಲಾಡಳಿತಕ್ಕೆ ಸವಾಲ್
ಪ್ರವಾಸಿ ತಾಣ ರಾಜಸೀಟಿನ ಪಕ್ಕದ ಗುಡ್ಡ ಪ್ರದೇಶದ ಚಾಮುಂಡೇಶ್ವರಿ ನಗರದಲ್ಲಿ ಮನೆಗಳೇ ಇರಲಿಲ್ಲ. ಇದು ಪೈಸಾರಿ ಜಾಗವಾಗಿತ್ತಲ್ಲದೆ ಗುಡ್ಡಪ್ರದೇಶವನ್ನು ಹೊಂದಿತ್ತು. ಇಲ್ಲಿ ಕುರುಚಲು ಕಾಡುಗಳಷ್ಟೆ ಇದ್ದವು. ಇಲ್ಲಿನ ಜಾಗ ಪೈಸಾರಿ ಜಾಗ ಎಂಬುದು ತಿಳಿಯುತ್ತಿದ್ದಂತೆಯೇ ಕೆಲವರು ರಾತ್ರೋರಾತ್ರಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಆರಂಭಿಸಿದರು.
ನೋಡನೋಡುತ್ತಿದ್ದಂತೆಯೇ ಗುಡ್ಡಗಳನ್ನು ಅಗೆದು ಮನೆಕಟ್ಟುವವರ ಸಂಖ್ಯೆ ಹೆಚ್ಚಾಯಿತು. ಬಡಾವಣೆಯಾಗಿ ರೂಪುಗೊಂಡಿತು. ಮನೆಗಳಾದ ಬಳಿಕ ರಸ್ತೆ, ವಿದ್ಯುತ್ ಹೀಗೆ ಎಲ್ಲವೂ ಇಲ್ಲಿಗೆ ಬಂತು.
ಓಟಿನ ಆಸೆಗೆ ರಾಜಕಾರಣಿಗಳು ಇದನ್ನೆಲ್ಲ ಪ್ರೋತ್ಸಾಹಿಸಿದರು. ಇದೆಲ್ಲದರ ಪರಿಣಾಮ ಇವತ್ತು ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುವಂತಾಗಿದೆ. ಬೆಟ್ಟಗಳ ಮೇಲೆ ಜೆಸಿಬಿ ಆರ್ಭಟಿಸಿದ್ದರ ಪರಿಣಾಮ ಸದ್ದಿಲ್ಲದೆ ಗುಡ್ಡಗಳು ಕುಸಿಯುತ್ತಿವೆ.
ಈ ಬಾರಿಯ ಮಹಾಮಳೆ ಈ ಪ್ರದೇಶಗಳು ಸುರಕ್ಷಿತವಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಮುಂದೆ ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದು ಜಿಲ್ಲಾಡಳಿತಕ್ಕೆ ಸವಾಲ್ ಆಗಿ ಪರಿಣಮಿಸಿದೆ.
ಮಳೆ ಕಡಿಮೆಯಾಗುತ್ತಿದೆ
ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಮಳೆ ಸ್ವಲ್ಪ ತಗ್ಗಿದಂತೆ ಕಂಡು ಬರುತ್ತಿದೆ. ಹೀಗಾಗಿ ಮಂಗಳೂರು ರಸ್ತೆ, ಮೂರ್ನಾಡು ರಸ್ತೆ ಹೀಗೆ ವಿವಿಧೆಡೆ ಹಾಳಾದ ರಸ್ತೆಗಳನ್ನು ದುರಸ್ತಿಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದೇ ರೀತಿ ಮಳೆ ಕಡಿಮೆಯಾದರೆ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ ಜನ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮಡಿಕೇರಿಯಲ್ಲಿ ಹೆಚ್ಚಿದ ಮಳೆ
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದೊಂದು ದಿನದಲ್ಲಿ ಮಡಿಕೇರಿ ವ್ಯಾಪ್ತಿಯಲ್ಲಿ 83.20, ಮಿ,ಮೀ ಮಳೆ ಸುರಿದಿದೆ. ಇದು ಕಡಿಮೆ ಮಳೆಯೇನಲ್ಲ. ಇದು ಭಯ ಹುಟ್ಟಿಸಿದೆ.
ಜಿಲ್ಲೆಯಲ್ಲಿ ಸರಾಸರಿ 31.58 ಮಿ.ಮೀ. ಮಳೆಯಾಗಿದ್ದು, ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲಿ ಮಳೆಯ ಪ್ರಮಾಣ ತೀರ ಕಡಿಮೆಯಾಗಿದೆ. ಅದ್ಯಾಕೋ ಮಡಿಕೇರಿ ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚು ಮಳೆ ಸುರಿಯುತ್ತಿರುವುದು ಇಲ್ಲಿನವರು ನಿದ್ದೆಗೆಡುವಂತೆ ಮಾಡಿದೆ.
ಇನ್ನಷ್ಟು ಅಪಾಯ!
ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಸರಾಸರಿ 3746.23 ಮಿ.ಮೀ. ಮಳೆ ಸುರಿದಿದ್ದು, ಮಡಿಕೇರಿಯಲ್ಲಿ ದಾಖಲೆಯ 5406.68 ಮಿ.ಮೀ ಮಳೆಯಾಗಿದೆ. ವೀರಾಜಪೇಟೆಯಲ್ಲಿ 2844.01, ಸೋಮವಾರಪೇಟೆಯಲ್ಲಿ 2987.99 ಮಿ.ಮೀ. ಮಳೆಯಾಗಿದೆ.
ಸಂಪಾಜೆ ಸುತ್ತಮುತ್ತ 83.80 ಮಳೆಯಾಗಿದ್ದು ಭಯ ಹುಟ್ಟಿಸಿದೆ. ಕಾರಣ ಈಗಾಗಲೇ ಸಮೀಪದ ಜೋಡುಪಾಲದಲ್ಲಿ ಬೆಟ್ಟಗಳು ಕುಸಿಯುತ್ತಲೇ ಇದೆ. ಹೀಗಿರುವಾಗ ಮಳೆ ಕಡಿಮೆಯಾಗದೆ ಹೋದರೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆಯಿದೆ.
ಇನ್ನು ಗರಿಷ್ಠ 2,859 ಅಡಿಯ ಹಾರಂಗಿ ಜಲಾಶಯದಲ್ಲಿ ಸದ್ಯ 2856.17 ಅಡಿಯಷ್ಟು ನೀರಿದೆ. ಜತೆಗೆ ಒಳ ಹರಿವು 7000 ಕ್ಯುಸೆಕ್ ಇದೆ. ಹೀಗಾಗಿ ನದಿಗೆ 4000 ಕ್ಯುಸೆಕ್ ಹಾಗೂ ನಾಲೆಗೆ 1600 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.