ಕೊಡಗಿನ ಮಳೆ ನಿಂತರೂ 726 ಕುಟುಂಬಗಳು ಇನ್ನೂ ನೆಲೆ ಕಂಡಿಲ್ಲ
ಮಡಿಕೇರಿ, ಸೆಪ್ಟೆಂಬರ್ 1: ಈ ವರ್ಷ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದರೆ ಮಡಿಕೇರಿ ವ್ಯಾಪ್ತಿಯ ಹದಿನೈದಕ್ಕೂ ಹೆಚ್ಚಿನ ಗ್ರಾಮಗಳು ಜಲ ಪ್ರಳಯಕ್ಕೆ ಸಿಲುಕಿ, ತತ್ತರಿಸಿ ಹೋಗಿದ್ದವು. ಜನ ಪ್ರಾಣ ಉಳಿಸಿಕೊಂಡರೆ ಸಾಕೆಂದು ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಓಡಿಬಂದಿದ್ದರು.
ಒಂದಷ್ಟು ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದರು. ಕೆಲವರು ಎಲ್ಲ ಇದ್ದರೂ ಏನೂ ಇಲ್ಲದಾಗಿ ನಡು ಬೀದಿಯಲ್ಲಿ ನಿಂತು ಬಿಟ್ಟಿದ್ದರು. ಇದ್ದಕ್ಕಿದ್ದಂತೆಯೇ ಕೊಡಗಿನಲ್ಲಿ ನಡೆದು ಹೋದ ದುರಂತವನ್ನು ನೋಡಿದ ರಾಜ್ಯದ ಜನ ಬೆಚ್ಚಿ ಬಿದ್ದಿದ್ದರು. ಅಷ್ಟೇ ಅಲ್ಲ, ನೆರವಿಗೆ ಪ್ರವಾಹೋಪಾದಿಯಲ್ಲಿ ಬಂದಿದ್ದರು. ಆ ಕಾರಣದಿಂದಾಗಿ ಜನರು ತುತ್ತು ಅನ್ನ, ಬಟ್ಟೆಗೆ ಆಗಬಹುದಾದ ಸಂಕಷ್ಟದಿಂದ ಪಾರಾಗಿದ್ದರು.
ಚಿತ್ರಗಳು : ಕೊಡಗಿನಲ್ಲಿ ಇನ್ನೂ ನಡೆಯುತ್ತಿದೆ ಪರಿಹಾರ ಕಾರ್ಯ
ರಕ್ಷಣಾ ಪಡೆಗಳು, ಸಂಘ-ಸಂಸ್ಥೆಗಳು, ಅಧಿಕಾರಿಗಳು ಭೂಕುಸಿತಕ್ಕೆ ಈಡಾದ ಪ್ರದೇಶಗಳಲ್ಲಿ ಮಹಾಮಳೆಯನ್ನು ಲೆಕ್ಕಿಸದೆ ಕಾರ್ಯಾಚರಣೆ ನಡೆಸಿದರು. ಒಂದಷ್ಟು ಮಂದಿಯನ್ನು ರಕ್ಷಿಸಿದರು. ಆದರೆ ಆಗಲೇ ಅವರು ತಮ್ಮ ಮನೆ, ಆಸ್ತಿಯನ್ನೆಲ್ಲ ಕಳೆದುಕೊಂಡು ಕಂಗಾಲಾಗಿ ಯಾರದ್ದೋ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆತರಲಾಯಿತು.
ವಾಸವಿದ್ದ ಸ್ಥಳಗಳು ಗುರುತಿಸಲಾಗದಷ್ಟು ಬದಲಾವಣೆ
ಈ ಎಲ್ಲವೂ ಅವತ್ತಿನ ಪರಿಸ್ಥಿತಿಯಾದರೆ, ಇವತ್ತು ಮಳೆ ತಗ್ಗಿದೆ. ವಿಕೋಪ ಸಂಭವಿಸಿದ ಸ್ಥಳದಲ್ಲಿ ಕಾಣುತ್ತಿರುವುದು ಕುಸಿದ ಗುಡ್ಡಗಳು, ಮುರಿದು ಬಿದ್ದ ಮನೆಗಳು, ಕೊಚ್ಚಿ ಹೋದ ರಸ್ತೆ, ಸೇತುವೆಗಳು, ಮಣ್ಣಿನಡಿಯಲ್ಲಿ ಸಿಲುಕಿದ ಕಾಫಿ ತೋಟಗಳು, ಕೆಸರು, ಮರಳಿನಲ್ಲಿ ಮುಚ್ಚಿ ಹೋದ ಗದ್ದೆಗಳು. ಕಳೆದ ಹಲವು ವರ್ಷಗಳಿಂದ ತಮ್ಮ ತೋಟ- ಮನೆ ಅಂಥ ಬದುಕಿದವರು ಪ್ರಕೃತಿ ವಿಕೋಪದ ಬಳಿಕ ತಮ್ಮ ಸ್ವಗ್ರಾಮಕ್ಕೆ ತೆರಳಿದರೆ ತಾವು ವಾಸವಿದ್ದ ಸ್ಥಳಗಳನ್ನು ಗುರುತಿಸಲಾರದ ಮಟ್ಟಿಗೆ ಬದಲಾವಣೆಯಾಗಿ ಹೋಗಿದೆ. ಇದನ್ನು ನೋಡಿದ ಜನ ಕಣ್ಣೀರು ಸುರಿಸುತ್ತಿದ್ದಾರೆ. ಮುಂದೇನು ಎಂಬ ಯೋಚನೆ ಅವರನ್ನು ಕಾಡತೊಡಗಿದೆ.
ಸಮೀಕ್ಷೆ ಕಾರ್ಯಗಳು ನಡೆಯುತ್ತಲೇ ಇವೆ
ಅನಾಹುತ ಸಂಭವಿಸಿದ ಗಾಳಿಬೀಡು, ಮಕ್ಕಂದೂರು, ಕೆ.ನಿಡುಗಣೆ, ಮದೆ, ಗರ್ವಾಲೆ, ಮಾದಾಪುರ ಮತ್ತಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಹೀಗಾಗಿ ಬೆಳೆ ಹಾನಿ ಹಾಗೂ ಮನೆ ಹಾನಿ ಆಗಿರುವ ಕುರಿತಂತೆ ಸಮೀಕ್ಷೆ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಪ್ರದೇಶಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಇದ್ದ ರಸ್ತೆಗಳು ಕುಸಿದು, ಕೊಚ್ಚಿ ಹೋಗಿರುವ ಕಾರಣದಿಂದಾಗಿ ಅವುಗಳನ್ನು ದುರಸ್ತಿಪಡಿಸುವ ಕಾರ್ಯ ಇದೀಗ ಸಾಗುತ್ತಿದೆ. ಮೊದಲಿನಂತೆ ರಸ್ತೆಗಳನ್ನು ನಿರ್ಮಾಣ ಮಾಡುವುದು ಸಾಧ್ಯವಾಗಲಾರದು. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಸಂಪರ್ಕ ಕಲ್ಪಿಸುವಷ್ಟರ ಮಟ್ಟಿಗೆ, ಜನರು ತಾತ್ಕಾಲಿಕವಾಗಿ ಓಡಾಡಲು ಸಾಧ್ಯವಾಗುವಷ್ಟರ ಮಟ್ಟಿಗೆ ರಸ್ತೆ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ.
ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನ
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತಿಕ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಕೆ.ನಿಡುಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಮತ್ತಿತರ ತೀವ್ರ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದ್ದಾರೆ. ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟ್ಟಗೇರಿ, ದೇವಸ್ತೂರು, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೂರು ಮತ್ತಿತರ ಗ್ರಾಮಗಳ ರಸ್ತೆ ಸರಿಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಜತೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ನಡೆಯುತ್ತಿದೆ.
18 ಪರಿಹಾರ ಕೇಂದ್ರಗಳಲ್ಲಿ 1,878 ಜನ ಸಂತ್ರಸ್ತರಿದ್ದಾರೆ
ಈಗಾಗಲೇ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದವರು ತಮ್ಮ ಮನೆಯತ್ತ ತೆರಳಿದ್ದು, ಮನೆಯನ್ನು ಸಂಪೂರ್ಣ ಕಳೆದುಕೊಂಡವರು ಇನ್ನೂ ಪರಿಹಾರ ಕೇಂದ್ರಗಳಲ್ಲೇ ಇದ್ದಾರೆ. ಇದೀಗ ಜಿಲ್ಲೆಯಲ್ಲಿರುವ 18 ಪರಿಹಾರ ಕೇಂದ್ರಗಳಲ್ಲಿ ಒಟ್ಟು 726 ಕುಟುಂಬಗಳು ಆಶ್ರಯ ಪಡೆದಿದ್ದು, ಅವರಲ್ಲಿ 943 ಪುರುಷರು ಮತ್ತು 935 ಮಹಿಳೆಯರು ಸೇರಿದಂತೆ ಒಟ್ಟು 1,878 ಜನ ಸಂತ್ರಸ್ತರಿದ್ದಾರೆ.