ಕೊಡಗಿನಲ್ಲಿ ಬಿಡುವು ಪಡೆದುಕೊಂಡ ಮುಂಗಾರು ಮಳೆ
ಮಡಿಕೇರಿ, ಆಗಸ್ಟ್ 01: ಕೊಡಗಿನಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಕ್ಷೀಣಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಧಾರಾಕಾರ ಮಳೆಯಾಗುತ್ತಿತ್ತಾದರೂ ಈ ಬಾರಿ ಮಳೆ ಬಿಡುವು ನೀಡಿದಂತೆ ಗೋಚರವಾಗುತ್ತಿದೆ.
ಪ್ರಸಕ್ತ ವರ್ಷ ಜನವರಿಯಿಂದ ಜುಲೈ ಕೊನೆಯ ವಾರದವರೆಗೂ ಉತ್ತಮ ಮಳೆಯಾಗುತ್ತಿದ್ದರಿಂದ ಹಾರಂಗಿ ಜಲಾಶಯ ಭರ್ತಿಯಾಗುವ ಮಟ್ಟಕ್ಕೆ ಬಂದಿತ್ತು. ಕಾವೇರಿ ನದಿ ಸೇರಿದಂತೆ ಜಿಲ್ಲೆಯಲ್ಲಿರುವ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿತ್ತು. ಗದ್ದೆಗೂ ನೀರು ಹರಿದು ಬಂದಿದ್ದರಿಂದ ಭತ್ತದ ಕೃಷಿಯೂ ಸಮಾರೋಪಾದಿಯಲ್ಲಿ ಸಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಹೊಳೆ ತೊರೆಗಳಲ್ಲಿ ನೀರು ಹರಿಯುವಿಕೆ ತಗ್ಗಿದೆ.
ಕೊಡಗಿನಲ್ಲಿ ತಗ್ಗಿದ ಮಳೆ: ಹಾರಂಗಿ ಜಲಾಶಯದ ಕ್ರಸ್ಟ್ಗೇಟ್ ಬಂದ್
ಇನ್ನೂ ಅಂತರ್ಜಲ ಏರಿಕೆಯಾಗಿಲ್ಲ
ಸಾಮಾನ್ಯವಾಗಿ ನೀರಿನಾಶ್ರಯವಿರುವ ಸ್ಥಳಗಳಲ್ಲಿ ಅಂತರ್ಜಲ ಹೆಚ್ಚಾಗಿ ಜಲ ಹುಟ್ಟಿ ಹರಿಯಬೇಕಾಗಿತ್ತು. ಆದರೆ ಹೆಚ್ಚಿನ ಪ್ರದೇಶಗಳಲ್ಲಿ ಇನ್ನೂ ಜಲಹುಟ್ಟಿಲ್ಲ. ಕಳೆದ ವರ್ಷ ಜುಲೈ ಎರಡನೇ ವಾರ ಮತ್ತು ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿದು ಪ್ರವಾಹ ಏರ್ಪಟ್ಟಿತ್ತು. ಈಗ ಮಳೆ ಕಡಿಮೆ ಆದರೂ ಮುಂದೆ ಸುರಿಯಲಿರುವ ಮಳೆಯ ಭಯ ಇಲ್ಲಿನ ಜನರನ್ನು ಕಾಡತೊಡಗಿದೆ.
ಹಾರಂಗಿ ಜಲಾಶಯದ ಒಳಹರಿವು ಕ್ಷೀಣ
ಹಾರಂಗಿ ಭರ್ತಿಯಾದ ಹಿನ್ನೆಲೆಯಲ್ಲಿ ನೀರನ್ನು ನದಿಗೆ ಬಿಡಲಾಗಿತ್ತಾದರೂ ಮಡಿಕೇರಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣ ಹಾರಂಗಿ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ. ಇದುವರೆಗೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಹೆಚ್ಚಿತ್ತಾದರೂ ಇದೀಗ ತಗ್ಗಿರುವುದರಿಂದ ಕಳೆದ ವರ್ಷಕ್ಕಿಂತ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. ಗರಿಷ್ಠ 2,859 ಅಡಿಯ ಹಾರಂಗಿ ಜಲಾಶಯದಲ್ಲಿ ಸದ್ಯ 2857.14 ಅಡಿಯಷ್ಟು ನೀರಿದೆ. ಒಳಹರಿವು 775 ಕ್ಯುಸೆಕ್ ಮಾತ್ರವಿದೆ. ಆದರೂ ಕೃಷಿ ಚಟುವಟಿಕೆ ಸೇರಿದಂತೆ ಇನ್ನಿತರ ಅನುಕೂಲಕ್ಕಾಗಿ ಹೊರಕ್ಕೆ 1575 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಕೇವಲ 4.52 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗಿನ 796.39 ಮಿ.ಮೀ ಸುರಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 808 ಮಿ.ಮೀ ಮಳೆಯಾಗಿದ್ದನ್ನು ಗಮನಿಸಬಹುದಾಗಿದೆ.
ತಾಲೂಕುವಾರು ಮಳೆ ಅಬ್ಬರ ಇಳಿಕೆ
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಳೆಯ ರಭಸ ಕಡಿಮೆಯಾಗಿದೆ. ಆದರೆ ಜನವರಿಯಿಂದ ಇಲ್ಲಿಯವರೆಗೆ 1222.97 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1132.92 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಜಾಸ್ತಿ ಎಂಬಂತೆ ಕಂಡು ಬರುತ್ತಿದೆಯಾದರೂ ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆ ದಾಖಲಾಗಿದೆ. ವಿರಾಜಪೇಟೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 695.87 ಮಿ.ಮೀ. ಆಗಿದ್ದರೆ, ಕಳೆದ ವರ್ಷ 809.26 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಇಲ್ಲಿಯವರೆಗಿನ 470.33 ಮಿ.ಮೀ. ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 481.83 ಮಿ.ಮೀ. ಮಳೆಯಾಗಿತ್ತು.
ಇನ್ನು ಹೋಬಳಿವಾರು ಮಳೆ ಸುರಿದಿರುವ ಪ್ರಮಾಣವನ್ನು ನೋಡುವುದಾದರೆ ಈ ವೇಳೆಗೆಲ್ಲ ನೂರಕ್ಕೂ ಹೆಚ್ಚು ಮಿ.ಮೀ. ಮಳೆ ಸುರಿಯಬೇಕಾಗಿದ್ದ ಭಾಗಮಂಡಲದಲ್ಲಿ ಕೇವಲ 15 ಮಿ.ಮೀ. ಮಳೆ ಸುರಿದಿರುವುದು ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ ಕಕ್ಕಡ(ಆಟಿ) ಮಾಸದಲ್ಲಿ ಹೆಚ್ಚಿನ ಮಳೆ ಸುರಿಯಬೇಕಾಗಿತ್ತು. ಆದರೆ ಕಕ್ಕಡ ಮಾಸ ಆರಂಭವಾಗಿ ಎರಡು ವಾರವಾದರೂ ಮಳೆಯ ಪ್ರಮಾಣ ಹೆಚ್ಚುವ ಬದಲು ಕಡಿಮೆಯಾಗಿರುವುದು ಆತಂಕಕಾರಿಯಾಗಿದೆ.
ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಪ್ರತಿ ವರ್ಷದಂತೆ ಈ ಬಾರಿಯೂ ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಹಾಗೂ ವರಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಮೊದಲಿಗೆ ಜಲಾಶಯದಲ್ಲಿರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, ಕಳೆದ 24 ವರ್ಷಗಳಿಂದ ಬಾಗಿನ ಅರ್ಪಿಸಿಕೊಂಡು ಬರಲಾಗುತ್ತಿದ್ದು, ಅದರಂತೆ ಗುರುವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಹಾಗೂ ನೀರಾವರಿ ಸಚಿವರ ಗಮನಕ್ಕೆ ತಂದು ಬಾಗಿನ ಅರ್ಪಿಸಲಾಗುತ್ತಿರುವುದಾಗಿ ಹೇಳಿದರು.