ಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆ
ಮಡಿಕೇರಿ, ಜುಲೈ 22: ಕೊಡಗಿನಲ್ಲಿ ಕಳೆದ ಐದು ದಿನಗಳಿಂದ ಧಾರಾಕಾರವಲ್ಲದ ಸಾಧಾರಣ ಮಳೆ ಸುರಿಯುತ್ತಿದ್ದು, ಮುಂಗಾರು ಚೇತರಿಸಿಕೊಂಡಂತೆ ಕಂಡುಬರುತ್ತಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ಮಾತ್ರ ಎಡೆಬಿಡದೆ ಮಳೆ ಸುರಿಯುತ್ತಿರುವುದು ರೈತರಲ್ಲಿ ಆಶಾಭಾವನೆಯನ್ನು ಹುಟ್ಟಿಸಿದೆ.
ಮಡಿಕೇರಿಯಲ್ಲಿ ಭಾರೀ ಮಳೆ; ನಾಪೋಕ್ಲು-ಭಾಗಮಂಡಲ ರಸ್ತೆ ಮೇಲೆ ನೀರು
ಇಷ್ಟರಲ್ಲಿಯೇ ಮಳೆ ಸುರಿದು ಬೆಟ್ಟಗುಡ್ಡ, ಕೊಲ್ಲಿ (ನೀರಿನಾಶ್ರಯವಿರುವ ಜಾಗ)ಗಳಲ್ಲಿ ಅಂತರ್ಜಲ ಹುಟ್ಟಿ ತೊರೆಗಳು ತುಂಬಿ ಹರಿಯಬೇಕಿತ್ತು. ಚಿಕ್ಕಪುಟ್ಟ ಹೊಳೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ಕಂಡು ಬರುತ್ತಿಲ್ಲ. ಆದರೆ ಮಡಿಕೇರಿ ಮತ್ತು ತಲಕಾವೇರಿ, ಭಾಗಮಂಡಲದಲ್ಲಿ ಸ್ವಲ್ಪ ಮಟ್ಟಿಗಿನ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಹೆಚ್ಚಳ ಕಂಡು ಬಂದಿದೆ.
ಇನ್ನೂ ಕೆಲವೆಡೆ ಮಳೆಯಿಲ್ಲ
ಹಾಗೆ ನೋಡಿದರೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಾದ್ಯಂತ ಒಂದೇ ಸಮನೆ ಮಳೆ ಸುರಿಯಬೇಕಿತ್ತು. ಆದರೆ ಈ ಬಾರಿ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚಿನ ಮಳೆಯಾಗುತ್ತಿದೆ. ಉಳಿದಂತೆ ಕೆಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿಲ್ಲ. ಇದರಿಂದ ಆ ವ್ಯಾಪ್ತಿಯ ರೈತರು ಆತಂಕಪಡುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಪೈಕಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 79.40 ಮಿ.ಮೀ ಮಳೆಯಾಗಿದ್ದು, ಇದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಭಾಗಮಂಡಲದ ಸಂಗಮಕ್ಷೇತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹೀಗೇ ಮಳೆ ಸುರಿದರೆ ಸಂಗಮ ಕ್ಷೇತ್ರ ಜಲಾವೃತವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ ಇನ್ನೂ ಹೆಚ್ಚಾಗುತ್ತೆ
ಗುಡ್ಡ ಅಗೆದ ಪ್ರದೇಶಗಳಲ್ಲಿ ಭೂಕುಸಿತ
ಸಂಗಮದಲ್ಲಿ ಜಲಾವೃತವಾದರೆ ಕಾವೇರಿ ನದಿ ಪಾತ್ರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಲಿದ್ದು, ನೀರು ಜನ ವಸತಿ ಪ್ರದೇಶ ಹಾಗೂ ಕಾಫಿ ತೋಟಗಳಿಗೆ, ಗದ್ದೆಗಳಿಗೆ ನುಗ್ಗುವ ಸಾಧ್ಯತೆಯಿದೆ. ಇಂತಹ ಪ್ರದೇಶಗಳಲ್ಲಿ ಇದೀಗ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಿದ್ದು, ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮತ್ತೊಂದೆಡೆ ಕಳೆದ ವರ್ಷ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ತೆರವುಗೊಳಿಸಿದ ಮಣ್ಣನ್ನು ಹಾಕಿದ ಪ್ರದೇಶ ಮತ್ತು ಗುಡ್ಡಗಳನ್ನು ಅಗೆದ ಪ್ರದೇಶಗಳಲ್ಲಿ ಭೂಕುಸಿತ ಕಂಡು ಬರುತ್ತಿದೆ. ಈ ಹಿಂದೆ ಇದ್ದ ಮಡಿಕೇರಿ ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಇಲ್ಲಿ ಸ್ಮಾರಕ ನಿರ್ಮಿಸುವ ಸಂಬಂಧ ಕಾಮಗಾರಿ ಆರಂಭಿಸಲಾಗಿದೆ. ಸುಮಾರು ಐವತ್ತು ಅಡಿಗೂ ಹೆಚ್ಚಿನ ಗುಡ್ಡದಲ್ಲಿ ಮಣ್ಣನ್ನು ತೆಗೆದ ಪರಿಣಾಮ ಮಳೆ ಸುರಿಯುತ್ತಿದ್ದಂತೆಯೇ ಗುಡ್ಡ ಕುಸಿಯುತ್ತಿದೆ. ಇದು ಹೀಗೆ ಮುಂದುವರೆದರೆ ಭಾರೀ ಅನಾಹುತಕ್ಕೆ ಎಡೆ ಮಾಡಿಕೊಡಲಿದೆ.
ಸರ್ವ ಸನ್ನದ್ಧವಾಗಿದೆ ಜಿಲ್ಲಾಡಳಿತ
ಇನ್ನು ಮಡಿಕೇರಿ ಮಂಗಳೂರು ರಸ್ತೆ ಮತ್ತು ಮಡಿಕೇರಿ ಮೂರ್ನಾಡು ರಸ್ತೆಗಳಲ್ಲೂ ಬರೆ ಕುಸಿತ, ರಸ್ತೆಗೆ ಹಾನಿ ಸಂಭವಿಸಿದರೂ ಅಚ್ಚರಿ ಪಡುವಂತಿಲ್ಲ. ಆದರೆ ಈಗಾಗಲೇ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಇದೀಗ ಸುರಿದ ಮಳೆಗೆ ಕೆಲವೆಡೆ ಚಿಕ್ಕಪುಟ್ಟ ಅನಾಹುತಗಳಾಗಿರುವುದನ್ನು ನಾವು ಕಾಣಬಹುದಾಗಿದೆ. ಜಿಲ್ಲೆಗೊಂದು ಸುತ್ತು ಹೊಡೆದರೆ ಜೋಡುಪಾಲದ ಬರೆ ಕುಸಿತ, ವಿರಾಜಪೇಟೆ ಬಳಿಯ ಮಲೆತಿರಿಕೆ ಬೆಟ್ಟದಲ್ಲಿ ಬರೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ.
ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯನ್ನು ಗಮನಿಸಿದ್ದೇ ಆದರೆ ಧಾರಾಕಾರವಲ್ಲದ ಸಾಧಾರಣ ಮಳೆ ಸುರಿದಿದ್ದು, 33.49 ಮಿ.ಮೀ ಮಳೆ ದಾಖಲಾಗಿದೆ. ಮಡಿಕೇರಿ ವ್ಯಾಪ್ತಿಯಲ್ಲಿ 55.75 ಮಿ.ಮೀ, ವೀರಾಜಪೇಟೆಯಲ್ಲಿ 25.43 ಮಿ.ಮೀ, ಸೋಮವಾರಪೇಟೆಯಲ್ಲಿ 19.30ಮಿ.ಮೀ ಮಳೆಯಾಗಿರುವುದನ್ನು ಕಾಣಬಹುದು.
ಜೋಡುಪಾಲದಲ್ಲಿ ಬರೆ ಕುಸಿತ; ಜನರಲ್ಲಿ ಹೆಚ್ಚಿದೆ ಆತಂಕ
ಕುಶಾಲನಗರದಲ್ಲಿ ಕಡಿಮೆ ಮಳೆ
ಭಾಗಮಂಡಲದಲ್ಲಿ ಅತಿ ಹೆಚ್ಚು, 79.40 ಮಿ.ಮೀ ಮಳೆಯಾಗಿದ್ದರೆ, ಅತಿ ಕಡಿಮೆ 2.20ಮಿ.ಮೀ. ಮಳೆ ಕುಶಾಲನಗರದಲ್ಲಿ ಸುರಿದಿದೆ. ಮಡಿಕೇರಿ ಸುತ್ತಮುತ್ತ ಮಳೆಯಾಗುತ್ತಿರುವುದರಿಂದ ಅಬ್ಬಿಜಲಪಾತ ಧುಮ್ಮಿಕ್ಕುತ್ತಿದ್ದರೆ, ಹಾರಂಗಿ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿದೆ. ಸದ್ಯ 1748 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಳ ಹರಿವು ಬಹಳ ಕಡಿಮೆ ಇರುವುದು ಕಂಡು ಬಂದಿದೆ.
ಕಳೆದ ವರ್ಷ ಇದೇ ದಿನ ಒಳಹರಿವು 11,067 ಕ್ಯುಸೆಕ್ ಇದ್ದುದನ್ನು ಸ್ಮರಿಸಬಹುದಾಗಿದೆ. 2859ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಇದೀಗ 2827.56 ಅಡಿ ನೀರಿದೆ. ಮುಂಗಾರು ಚುರುಕುಗೊಂಡರೆ ಇನ್ನು ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಬಹುದೇನೋ, ಆದರೆ ಜಲಾಶಯದಿಂದ ನದಿಗೆ 30 ಕ್ಯುಸೆಕ್, ನಾಲೆಗೆ 500 ಕ್ಯುಸೆಕ್ ನೀರನ್ನು ಹರಿದು ಬಿಡುತ್ತಿರುವುದರಿಂದ ಜಲಾಶಯ ಭರ್ತಿಯಾಗಲು ಇನ್ನಷ್ಟು ದಿನಗಳು ಬೇಕಾಗಬಹುದೇನೋ?
ಕೊಡಗಿನಲ್ಲಿ ಹಿಂದಿನಿಂದಲೂ ಆಟಿ (ಕಕ್ಕಡ) ಮಾಸ ಎನ್ನುವುದು ಭಾರೀ ಮಳೆ ಸುರಿಯುವ ದಿನಗಳೆಂದೇ ಹೇಳಲಾಗುತ್ತಿದೆ. ಈ ದಿನಗಳಲ್ಲಿ ಮಳೆ ಸುರಿದು ಅಂತರ್ಜಲ ಹೆಚ್ಚಾದರೆ ಮಾತ್ರ ಮುಂದಿನ ದಿನಗಳಲ್ಲಿ ಕೃಷಿ ಮತ್ತು ಕುಡಿಯಲು ನೀರು ದೊರೆಯಲು ಸಾಧ್ಯ. ಇಲ್ಲದೆ ಹೋದರೆ ಪರದಾಟ ತಪ್ಪಿದ್ದಲ್ಲ. ಈಗಲೂ ಜಿಲ್ಲೆಯ ಜನ ಧಾರಾಕಾರವಾಗಿ ಮಳೆ ಸುರಿಯಲೆಂದು ಪ್ರಾರ್ಥಿಸುತ್ತಿದ್ದಾರೆ. ಇಷ್ಟಕ್ಕೂ ಕೊಡಗಿನಲ್ಲಿ ಮಳೆ ಸುರಿದರೆ ಮಾತ್ರ ಕೆಆರ್ಎಸ್ ಜಲಾಶಯ ಭರ್ತಿಯಾಗಲು ಸಾಧ್ಯ. ಇಲ್ಲದೆ ಹೋದರೆ ನೀರಿಗಾಗಿ ಪರದಾಟ ತಪ್ಪಿದಲ್ಲ.