ಕೊಡಗಿನ ಹೋಂ ಸ್ಟೇಗಳಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಳ
ಮೈಸೂರು, ಜನವರಿ 11: ಪ್ರವಾಸಿಗರಿಗೆ ಉತ್ತಮ ಆತಿಥ್ಯಕ್ಕೆ ಹೆಸರಾದ ಹೋಂ ಸ್ಟೇಗಳಲ್ಲಿ ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ವರದಿಯಾಗುತ್ತಿರುವುದು ಜಿಲ್ಲೆಯ ಪ್ರಜ್ಞಾವಂತರಿಗೆ ಮುಜುಗರ ತರಿಸಿದೆ. ಅದರಲ್ಲೂ ಹೋಂ ಸ್ಟೇಗಳ ಮಾಲೀಕರೇ ಇಂತಹ ಪ್ರಕರಣಗಳಲ್ಲಿ ಭಾಗಿ ಆಗಿರುವುದು ಜಿಲ್ಲೆಯ ಉದ್ಯಮಕ್ಕೂ ಕಪ್ಪು ಚುಕ್ಕಿ ಆಗಿದೆ.
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು ಜಿಲ್ಲೆಯ ಗಡಿ ತಾಲೂಕಾದ ವೀರಾಜಪೇಟೆಯ ಹೊರ ವಲಯದ ಹೋಂ ಸ್ಟೇಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಹಾಗೂ ಆಟೋ ಚಾಲಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕುಶಾಲನಗರದ ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ
ಕೇರಳ ಗಡಿ ಭಾಗದ ಅರ್ಜಿ ಗ್ರಾಮದ ವ್ಯಾಪ್ತಿಯಲ್ಲಿ ಕೂರ್ಗ್ ಮೌಂಟೇನ್ ಮಿಸ್ಟಿ ಹೋಂ ಸ್ಟೇಯ ಮಾಲೀಕ (ಕಾಳಮಂಡ) ಸಂತೋಷ್ ಮತ್ತು ಪತ್ನಿ ಹೇಮಲತಾ ಹಾಗೂ ವೇಶ್ಯಾವಾಟಿಕೆಗೆ ಸಹಕರಿಸಿದ ಆಟೋ ಚಾಲಕ ಕುಶಾಲನಗರದ ನಿವಾಸಿ ಶಿವರಾಜ್ ಬಂಧಿತ ಆರೋಪಿಗಳು.
ಕೊಡಗಿನ ಹೋಂ ಸ್ಟೇಗಳ ಮೇಲೆ ತೀವ್ರ ನಿಗಾ ಇಡಿ; ಸಚಿವ ಸುಧಾಕರ್
ನಗರದ ಹೊರವಲಯದ ಹೋಂ ಸ್ಟೇಯೊಂದರಲ್ಲಿ ಆಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದಾಗಿ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಕಚೇರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಅರ್ಜಿ ಗ್ರಾಮದ ಕೂರ್ಗ್ ಮೌಂಟೇನ್ ಮಿಸ್ಟಿ ಹೋಂ ಸ್ಟೇ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೇರಳ ಮೂಲದ ಇಬ್ಬರು ಗಂಡಸರು ಮತ್ತು ಕುಶಾಲನಗರದ ಓರ್ವ ಮಹಿಳೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರರ್ತರಾದ ಪೊಲೀಸರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮರುಕಳಿಸಿದ ಪ್ರವಾಸಿಗರ ಕಲರವ
ಕಳೆದ 10 ತಿಂಗಳ ಅವಧಿಯಲ್ಲಿ ಪತ್ತೆಯಾದ ಇಂತಹ ಮೂರನೇ ಪ್ರಕರಣವಿದಾಗಿದೆ. ಮೊದಲು ವೀರಾಜಪೇಟೆ ತಾಲೂಕಿನ ಹೋಂ ಸ್ಟೇನಲ್ಲೂ ಇಂತಹುದೇ ಘಟನೆ ವರದಿ ಆಗಿತ್ತು. ಮೂರು ತಿಂಗಳ ಹಿಂದೆ ಕುಶಾಲನಗರ ಸಮೀಪದ ಹೋಂ ಸ್ಟೇನಲ್ಲಿಯೂ ಇಂತಹ ಘಟನೆ ನಡೆದಿತ್ತು.
ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತಿದ್ದಂತೆ ಅವರ ಬೇಕು ಬೇಡಗಳನ್ನು ಪೂರೈಸಲು ಆ ಮೂಲಕ ಸುಲಭ ಹಣ ಗಳಿಸುವ ದಂಧೆಗೆ ಹೋಂ ಸ್ಟೇಗಳ ಮಾಲೀಕರು ಮುಂದಾಗಿರುವುದು ವಿಷಾದನೀಯ ಸಂಗತಿ ಆಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ನ ಪಧಾಧಿಕಾರಿ ಬಿ. ಜಿ. ಅನಂತ ಶಯನ, "ಈ ಪ್ರಕರಣ ನಡೆದಿರುವುದು ನಮ್ಮ ಅಸೋಸಿಯೇಷನ್ನ ಸದಸ್ಯರ ಹೋಂ ಸ್ಟೇನಲ್ಲಿ ಅಲ್ಲ. ನಮ್ಮ ಅಸೋಸಿಯೇಷನ್ ಸದಸ್ಯರಾಗಿದ್ದರೆ ನಾವು ಸದಸ್ಯತ್ವವನ್ನೆ ರದ್ದು ಮಾಡುತ್ತಿದ್ದೆವು" ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 950 ಹೋಂ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಂಡಿವೆ. ಆದರೆ, ನೋಂದಾಯಿಸದೇ ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಸಂಖ್ಯೆಯೇ 2000ಕ್ಕೂ ಹೆಚ್ಚು ಇದೆ ಎನ್ನುವ ಮಾಹಿತಿ ಇದೆ. ಕೆಲವೆಡೆ ಕಾನೂನು ಪಾಲಕರೇ ಇಂತಹ ಕೃತ್ಯ ಮಾಡುವವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪವೂ ಇದೆ.
ಕೊಡಗು ಜಿಲ್ಲಾಡಳಿತ ಇನ್ನಾದರೂ ವಾರಾಂತ್ಯದಲ್ಲಿ ಹಠಾತ್ ಪರಿಶೀಲನೆ ನಡೆಸುವ ಮೂಲಕ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಿ ಎಂಬುದೇ ಜನತೆಯ ಆಶಯವಾಗಿದೆ.