ಮಡಿಕೇರಿ; ಪತ್ರಗಳನ್ನು ಬಟವಾಡೆ ಮಾಡದೆ ಪೋಸ್ಟ್ ಮ್ಯಾನ್ ಮಾಡಿದ್ದು ಈ ಕೆಲಸ...
ಮಡಿಕೇರಿ, ಏಪ್ರಿಲ್ 25: ಈ ಆಧುನಿಕ ಯುಗದಲ್ಲಿ ತ್ವರಿತ ಸಂಪರ್ಕಕ್ಕಾಗಿ, ಸುದ್ದಿ, ಮಾಹಿತಿ ಪಡೆಯುವುದಕ್ಕೆ ನಮಗೆ ಟಿ.ವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿವೆ. ಜನರೂ ಇವುಗಳ ಮೇಲೇ ಅವಲಂಬಿತರಾಗಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ನಮಗೆ ಕಾಗದ ಪತ್ರಗಳು ತಲುಪಬೇಕಾದರೆ ಅಂಚೆ ಇಲಾಖೆಯೇ ಸಂಪರ್ಕ ಸೇತು ಆಗಿದೆ.
ದೇಶದಲ್ಲಿ ಅಂಚೆ ಇಲಾಖೆ ಇಂದಿಗೂ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ. ಇಲಾಖೆಯಿಂದ ಆದಾಯ ಇಲ್ಲದಿದ್ದರೂ ಸರ್ಕಾರ ಅಂಚೆ ಸೇವೆಯನ್ನು ನಿಲ್ಲಿಸಿಲ್ಲ. ಹಳ್ಳಿಗಳಲ್ಲಿ ಪೋಸ್ಟ್ ಮ್ಯಾನ್ ಗಳು ಸೈಕಲ್ ಮೂಲಕ ಮಧ್ಯಾಹ್ನದ ಒಳಗೆ ಅಂಚೆ ಬಟವಾಡೆ ಮಾಡುವುದು ಸಾಮಾನ್ಯ ದೃಶ್ಯ. ಅಂಚೆ ತಲುಪುವುದು ಒಂದೆರಡು ದಿನ ತಡವಾದರೂ ಖಂಡಿತಾ ತಲುಪುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಘಟನೆಯೊಂದು ಬೆಳಕಿಗೆ ಬಂದಿದೆ.
ಬೆಂಗಳೂರಲ್ಲಿ ಅಂಚೆ ಕಚೇರಿಯಲ್ಲಿ ಸಿಗಲಿದೆ ಮಾವಿನ ಹಣ್ಣು!
ಎಲ್ಲಾ ಪತ್ರ, ದಾಖಲೆಗಳನ್ನು ಚೀಲದಲ್ಲಿ ಎಸೆದ ಪೋಸ್ಟ್ ಮ್ಯಾನ್
ಕೊಡಗಿನ ಕುಗ್ರಾಮ ಸೂರ್ಲಬ್ಬಿ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಒಬ್ಬರು ಆಧಾರ್ ಕಾರ್ಡ್, ಬ್ಯಾಂಕ್ ಚೆಕ್ ಪುಸ್ತಕ, ಸ್ಕಾಲರ್ ಶಿಪ್ ಪತ್ರಗಳು, ಶಾಲಾ ದಾಖಲಾತಿಗಳು, ಯೋಧರ ದಾಖಲಾತಿಗಳು, ಎಲ್ಐಸಿ ದಾಖಲೆಗಳನ್ನು ಗ್ರಾಮದ ಹೊರವಲಯದಲ್ಲಿ ಚೀಲವೊಂದರಲ್ಲಿ ಕಟ್ಟಿ ಎಸೆದಿರುವುದು ಪತ್ತೆ ಆಗಿದೆ. ಇದರಿಂದ ಜನರು ಆಘಾತಕ್ಕೀಡಾಗಿದ್ದಾರೆ.
ಪತ್ರಗಳೇ ಬರುತ್ತಿರಲಿಲ್ಲ
ಗ್ರಾಮದ ಅನೇಕ ಜನರಿಗೆ , ಸ್ಥಳೀಯ ಶಾಲೆಗಳಿಗೆ ಸರ್ಕಾರದಿಂದ ಬರಬೇಕಾದ ಅಂಚೆಗಳು ಬರುತ್ತಲೇ ಇರಲಿಲ್ಲ. ಪೋಸ್ಟ್ ಮ್ಯಾನ್ ಎ.ಯು. ಮಹೇಶ್ ಎಂಬಾತನನ್ನು ಪ್ರಶ್ನಿಸಿದರೆ, ಬಂದರೆ ತಾನು ತಂದು ಕೊಡುವುದಿಲ್ಲವೇ? ನಿಮಗೆ ಬಂದೇ ಇಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದ. ಈತ ಕಳೆದ ಜನವರಿಯಲ್ಲಷ್ಟೆ ನಾಪೋಕ್ಲು ಸಮೀಪದ ಚೆಯ್ಯಂಡಾಣೆ ಅಂಚೆ ಕಚೇರಿಗೆ ವರ್ಗವಾಗಿ ಹೋಗಿದ್ದ.
2017ರಿಂದಲೂ ಪತ್ರ ಬಂದಿಲ್ಲ
2017ರಿಂದಲೂ ಹೀಗೇ ಆಗುತ್ತಿತ್ತು. ಜನರು ಹಿಡಿಶಾಪ ಹಾಕಿಕೊಂಡು ಸುಮ್ಮನಾಗುತ್ತಿದ್ದರು. ಆದರೆ ಮೊನ್ನೆ ಬೆಳಿಗ್ಗೆ ಬಟವಾಡೆ ಆಗದ ನೂರಾರು ಕಾಗದ ಪತ್ರಗಳು, ಎಟಿಎಂ ಕಾರ್ಡ್ ಗಳು, ದಾಖಲಾತಿಗಳು ಇಲ್ಲಿನ ರಸ್ತೆಯ ಪಕ್ಕದಲ್ಲೇ ಚೀಲದಲ್ಲಿ ಪತ್ತೆ ಆಗಿವೆ. ಈ ವಿಷಯ ಗಮನಕ್ಕೆ ಬಂದ ಕೂಡಲೇ ಕೊಡಗು ಸೇವಾ ಕೇಂದ್ರ ಸೋಮವಾರಪೇಟೆ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಪೋಸ್ಟ್ ಮ್ಯಾನ್ ಬಂಧಿಸಿದ ಪೊಲೀಸರು
ಈ ಒಂದು ಸಂಗತಿ ಗಮನಕ್ಕೆ ಬರುತ್ತಿದ್ದಂತೆ ಇಂದು ಪೋಸ್ಟ್ ಮ್ಯಾನ್ ಮಹೇಶನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಗ್ರಾಮಸ್ಥರು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.