ತಲಕಾವೇರಿಯಲ್ಲಿ ಶುಕ್ರವಾರದಿಂದ ಪೂಜೆ ಆರಂಭ
ಮಡಿಕೇರಿ, ಆಗಸ್ಟ್ 13 : ತಲಕಾವೇರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಶುಕ್ರವಾರದಿಂದ ದೇವಾಲಯದಲ್ಲಿ ಪೂಜೆ ಆರಂಭವಾಗಲಿದೆ ಎಂದು ಕೊಡಗು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಗುರುವಾರ ಸಂಜೆ ತಲಕಾವೇರಿ ದೇವಾಲಯದ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 5ರಂದು ಸಂಭವಿಸಿದ ಭೂಕುಸಿತದಿಂದಾಗಿ ತಲಕಾವೇರಿ ದೇವಾಲಯಕ್ಕೆ ತೆರಳುವ ರಸ್ತೆ ಬಂದ್ ಆಗಿತ್ತು. ಆದ್ದರಿಂದ ಪೂಜೆಯೂ ಸ್ಥಗಿತವಾಗಿತ್ತು. ದೇವಾಲಯದ ಆವರಣವನ್ನು ಶುಚಿಗೊಳಿಸಲಾಗಿದ್ದು, ಶುಕ್ರವಾರದಿಂದ ದಿನನಿತ್ಯದ ಪೂಜೆ ನಡೆಯಲಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಇತರ ಸಿಬ್ಬಂದಿಗಳು ಗುರುವಾರ ಸಂಜೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಶುಕ್ರವಾರದಿಂದ ಪೂಜೆ ಆರಂಭಿಸಬಹುದೇ ಎಂದು ಪರಿಶೀಲನೆ ನಡೆಸಿದರು.
ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಭಾರಿ ಮಳೆಯ ಕಾರಣ ಕುಸಿದು ಬಿದ್ದಿತ್ತು. ದೇವಾಲಯದ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಮನೆ ಸೇರಿ 2 ಮನೆಗಳ ಮೇಲೆ ಗುಡ್ಡದ ಮಣ್ಣು ಬಿದ್ದಿತ್ತು. ಮನೆಯಲ್ಲಿದ್ದ ಐವರು ಮಣ್ಣಿನಡಿ ಸಿಲುಕಿದ್ದರು. ಬುಧವಾರ ನಾರಾಯಣಾಚಾರ್ ಮೃತದೇಹ ಪತ್ತೆಯಾಗಿತ್ತು.