ಮಡಿಕೇರಿಯಲ್ಲಿ ಮೆಡಿಕಲ್ ಎಮರ್ಜೆನ್ಸಿ ಪಾಸ್ ಪಡೆದು ಗಾಂಜಾ ಮಾರಾಟ; 12 ಮಂದಿ ಬಂಧನ
ಮಡಿಕೇರಿ, ಮೇ 21: ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳವು, ಈ ಸಂಬಂಧ 12 ಮಂದಿಯನ್ನು ವಿರಾಜಪೇಟೆಯಲ್ಲಿ ಬಂಧಿಸಿ, 9 ಕೆ.ಜಿ.ಗೂ ಹೆಚ್ಚಿನ ಗಾಂಜಾವನ್ನು ವಶಪಡಿಸಿಕೊಂಡಿದೆ.
ವಿರಾಜಪೇಟೆ ನಗರದ ಸುಂಕದಕಟ್ಟೆಯ ನಿಸಾರ್ ಅಹಮ್ಮದ್, ಬಂಗಾಳ ಬೀದಿಯ ಎ.ಎಸ್. ಸಾದಿಕ್, ಮಡಿಕೇರಿ ಜಿಲ್ಲಾ ಕ್ರೀಡಾಂಗಣ ಬಳಿಯ ನಿವಾಸಿಗಳಾದ ಬೌತೇಶ್ ಡಿಸೋಜ, ಎಂ.ಎಚ್. ರಫೀಕ್, ಹಾಕತ್ತೂರು ತೊಂಬತ್ತುಮಯ ಕರಣ್ ಕುಮಾರ್, ಮಡಿಕೇರಿ ತ್ಯಾಗರಾಜ ಕಾಲೋನಿಯ ಆರೀಸ್, ವಿರಾಜಪೇಟೆ ಸುಣ್ಣದ ಬೀದಿ ನಿವಾಸಿ ಸಾಯಿ ಲಾಲ್, ರಿಜ್ವಾನ್, ಮಡಿಕೇರಿ ಆಜಾದ್ ನಗರದ ಮೊಹಮ್ಮದ್ ಹ್ಯಾರಿಸ್, ಮಡಿಕೇರಿ ಉಕ್ಕುಡ ಕರ್ಣಂಗೇರಿಯ ಸಿ.ಟಿ. ದಿನೇಶ್, ಮಡಿಕೇರಿ ಎಫ್ಎಂಕೆಎಂಸಿಯ ಕಾಲೇಜು ಬಳಿಯ ನಿವಾಸಿ ಎನ್. ಪಿ. ಅಯ್ಯಪ್ಪ ಮತ್ತು ಮಡಿಕೇರಿ ಚೈನ್ ಗೇಟ್ ಬಳಿಯ ನಿವಾಸಿ ಮಿಲನ್ ಎಂ.ಜಿ. ಎಂಬುವರೇ ಬಂಧಿತರು.
ಲಕ್ಷ ಮೌಲ್ಯದ 9.322 ಕೆ.ಜಿ. ಗಾಂಜಾ ವಶ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಬಂಧಿತ ಆರೋಪಿಗಳಿಂದ ಅಂದಾಜು 3 ಲಕ್ಷ ಮೌಲ್ಯದ 9.322 ಕೆ.ಜಿ. ಗಾಂಜಾ, 1,99,670 ರೂ. ನಗದು, 11 ಮೊಬೈಲ್, ಅಂದಾಜು 26 ಲಕ್ಷ ರೂ. ಮೌಲ್ಯದ 5 ನಾಲ್ಕು ಚಕ್ರದ ವಾಹನಗಳು, ಒಂದು ಆಟೋ ರಿಕ್ಷಾ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ಆನ್ಲೈನ್ ಮೂಲಕ ಮಾದಕ ವಸ್ತು ಮಾರಾಟ
ಗಾಂಜಾ ಹಂಚುವಾಗ ಸಿಕ್ಕಿಬಿದ್ದರು
ವಿರಾಜಪೇಟೆಯ ಸುಂಕದಕಟ್ಟೆ ಮೈದಾನದಲ್ಲಿ ಮಂಗಳವಾರ ಗಾಂಜಾ ಮಾರಾಟ ಜಾಲದ ಪ್ರಮುಖ ವ್ಯಕ್ತಿ ನಿಸಾರ್ ಅಹಮ್ಮದ್ ಮತ್ತು ಸಾದಿಕ್ ಅವರು ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುವ 10 ಮಂದಿಗೆ ಗಾಂಜಾ ಹಂಚುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಡಿಸಿಐಬಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ನಿಲ್ದಾಣಗಳಲ್ಲೂ ಗಾಂಜಾ ಮಾರಾಟ
ವಿರಾಜಪೇಟೆಯ ನಿಸಾರ್, ಸಾಧಿಕ್ ಹಾಗೂ ಇತರರು ಅಕ್ರಮ ಗಾಂಜಾ ಮಾರಾಟ ಚಟುವಟಿಕೆಗಳಲ್ಲಿ ಒಂದು ಗುಂಪಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು ನಿಸಾರ್ ಹಾಗೂ ಸಾಧಿಕ್ ರವರು ಈ ಗುಂಪಿಗೆ ಮುಖ್ಯವಾಗಿ ಗಾಂಜಾವನ್ನು ತರಿಸಿ ತಮ್ಮ ಗುಂಪಿನ ಮುಖಾಂತರ ಹಂಚಿಕೆ ಮಾಡಿ ವಿರಾಜಪೇಟೆ ಹಾಗೂ ಮಡಿಕೇರಿಯ ಕೆಲವು ಕಡೆಗಳಲ್ಲಿ ಗಾಂಜಾ ಮಾರಾಟವನ್ನು ಮಾಡುತ್ತಿದ್ದರು. ವಿರಾಜಪೇಟೆಯ ಸುಂಕದ ಕಟ್ಟೆ, ಮೊಗರ ಗಲ್ಲಿ ಬಸ್ ನಿಲ್ದಾಣ, ಮಡಿಕೇರಿಯ ಬಸ್ ನಿಲ್ದಾಣ, ಮಾರುಕಟ್ಟೆ, ಚೈನ್ ಗೇಟ್ ಮತ್ತು ಆಟೋರಿಕ್ಷಾ ನಿಲ್ದಾಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.
ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಬೆಲೆಯ ಕೊಕೇನ್
ಮೆಡಿಕಲ್ ಎಮರ್ಜೆನ್ಸಿ ಪಾಸ್ ಪಡೆದು ದಂಧೆ
ಕೊರೊನಾ ಲಾಕ್ ಡೌನ್ ನಡುವೆ ಮೆಡಿಕಲ್ ಎಮರ್ಜೆನ್ಸಿ ಪಾಸ್ ಅನ್ನು ಆನ್ ಲೈನ್ ಮೂಲಕ ಪಡೆದು ಜಿಲ್ಲೆಗೆ ಗಾಂಜಾ ತಂದು ಮಾರಾಟ ಮಾಡುವ ದಂಧೆಯಲ್ಲಿ ಈ ತಂಡ ತೊಡಗಿತ್ತು. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಗಾಂಜಾ ಮಾರಾಟ ಜಾಲವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಸುಮನ್ ಡಿ ಪನ್ನೇಕರ್ ತಿಳಿಸಿದರು.