ಕೊಡಗಿನ ಪ್ರಕೃತಿ ವಿಕೋಪ ಎದುರಿಸಲು ಪೊಲೀಸ್ ಪಡೆ ಸನ್ನದ್ಧ!
ಮಡಿಕೇರಿ, ಮೇ.10:ಕೊಡಗಿನಲ್ಲಿ ಮಳೆಗಾಲ ಎಂದರೆ ಎಡೆಬಿಡದೆ ಸುರಿಯುತ್ತದೆ.ನಡು ಮಳೆಗಾಲದಲ್ಲಿ ನದಿ, ತೊರೆಗಳಲ್ಲಿ ಪ್ರವಾಹ ಬಂದು ಒಂದಷ್ಟು ತೊಂದರೆಗಳಾಗುತ್ತದೆ ಎಂಬುದಷ್ಟೇ ಇಲ್ಲಿನ ಜನಕ್ಕೆ ಗೊತ್ತಿತ್ತು. ಹೀಗಾಗಿ ಅದನ್ನು ಎದುರಿಸಿ ಬದುಕೋದನ್ನು ಇಲ್ಲಿನವರು ಕಲಿತುಕೊಂಡಿದ್ದರು.
ಆದರೆ ಕಳೆದ ಮಳೆಗಾಲ ಎಲ್ಲ ಮಳೆಗಾಲದಂತೆ ಇರಲಿಲ್ಲ. ಜನ ಯೋಚಿಸದಂತಹ ಅನಾಹುತವೊಂದು ನಡೆದು ಹೋಯಿತು. ಬೇರೆ ಕಡೆಗಳಲ್ಲಷ್ಟೆ ನಡೆಯುತ್ತಿದ್ದ ಜಲಪ್ರಳಯ ಕೊಡಗಿನಲ್ಲಿ ನಡೆದು ಹಲವರು ಆಸ್ತಿಪಾಸ್ತಿ ಕಳೆದುಕೊಂಡರಲ್ಲದೆ, ಜೀವ ಹಾನಿಯೂ ಸಂಭವಿಸಿತು. ಇದೀಗ ಮತ್ತೆ ಮಳೆಗಾಲ ಸಮೀಪಿಸುತ್ತಿರುವುದರಿಂದ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪವನ್ನು ಎದುರಿಸಲು ಎಲ್ಲ ರೀತಿಯಲ್ಲೂ ಸನ್ನದ್ಧವಾಗಿರಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಈ ಯೋಜನೆ ಕಾರ್ಯಗತವಾದರೆ ಮಡಿಕೇರಿ-ಬೆಂಗಳೂರು ಸಂಚಾರ ಸುಲಭ!
ಈ ನಡುವೆ ಪೊಲೀಸ್ ಇಲಾಖೆಯಿಂದಲೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಪತ್ತನ್ನು ಎದುರಿಸುವ ಸಂಬಂಧ ಕಾರ್ಯಾಗಾರ ನಡೆಸಲಾಗುತ್ತಿದ್ದು, ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ಥರನ್ನು ಸ್ಥಳಾಂತರ ಮಾಡುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಒಂದು ವಾರಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅನಿರೀಕ್ಷಿತವಾಗಿ ಬರುವ ವಿಪತ್ತನ್ನು ಸಮಯ ಪ್ರಜ್ಞೆಯಿಂದ ಎದುರಿಸಬೇಕು. ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ದುರಂತವನ್ನು ಅರಿತುಕೊಂಡು ಈ ವರ್ಷ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ 15 ಮಂದಿ ಪೊಲೀಸ್ ಸಿಬ್ಬಂದಿಗಳ ಮೂರು ತಂಡವನ್ನು ರಚಿಸಲಾಗಿದೆ. ಹಾಗೆಯೇ ಡಿಎಆರ್ನ ಒಂದು ತಂಡ ಸೇರಿದಂತೆ ಒಟ್ಟು 60 ಜನ ಸಿಬ್ಬಂದಿಗಳ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಅತಿವೃಷ್ಠಿ ಅನಾಹುತ ಎದುರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ !
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಉಪಸ್ಥಿತರಿದ್ದು, ಜಾಯ್ ಬೆಂಗಳೂರಿನ ಟೀಂ ಸೃಷ್ಠಿ ಅಡ್ವೆಂಚರ್ಸ್ ಸಂಸ್ಥೆಯ ತಜ್ಞರಾದ ಸಂತೋಷ್, ಅಕ್ಷಿತಾ ಮತ್ತು ಅನಘಾ ಹಾಗೂ ಪೂನಾದ ಆರ್.ಟಿ.ಜಿಯೋ ಮತ್ತು ಪರಿಸರ ಸಮನ್ವಯ ಸಂಸ್ಥೆಯ ಭೂವಿಜ್ಞಾನಿ ರೆನಿ ಥಾಮಸ್ ಅವರ ತಜ್ಞರ ತಂಡ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ.