ಕಾಫಿ ತೋಟದ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ಅತಿಥಿ
ಮಡಿಕೇರಿ, ಡಿಸೆಂಬರ್ 18: ಕೊಡಗಿನಲ್ಲಿ ಗಾಂಜಾ ಮಾರಾಟ ಪ್ರಕರಣಗಳು ಕೇಳಿ ಬರುತ್ತಿದ್ದವು. ಆದರೆ ಇದೀಗ ಗಾಂಜಾ ಕೃಷಿಯ ಪ್ರಕರಣವೂ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಎರಡು ದಶಕಗಳ ಹಿಂದೆ ಕೇರಳದಿಂದ ಶುಂಠಿ ಕೃಷಿ ಮಾಡುವ ಸಲುವಾಗಿ ಬಂದ ಕೇರಳದ ಕೃಷಿಕರು ಹತ್ತಾರು ಎಕರೆ ಜಾಗದಲ್ಲಿ ಶುಂಠಿ ನಡುವೆ ಗಾಂಜಾ ಬೆಳೆಯುತ್ತಿದ್ದ ಪ್ರಕರಣವನ್ನು ಪೊಲೀಸರು ಮೇಲಿಂದ ಮೇಲೆ ಪತ್ತೆ ಹಚ್ಚತೊಡಗಿದ್ದರು. ಅಂದಿನ ದಿನಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ಪೊಲೀಸರು ನಾಶಪಡಿಸಿದ್ದರು. ಅದಾದ ನಂತರ ಕಟ್ಟುನಿಟ್ಟಿನ ಕ್ರಮದಿಂದಾಗಿ ಸಂಪೂರ್ಣವಾಗಿ ಗಾಂಜಾ ಪ್ರಕರಣಗಳು ನಿಂತು ಹೋಗಿದ್ದವು.
ಬೆಂಗಳೂರು: ಹೈಟೆಕ್ ಗಾಂಜಾ 'ಕೃಷಿಕ' ಪೊಲೀಸರ ಬಲೆಗೆ
ಕೆಲವರು ಬೇರೆ ಕಡೆಗಳಿಂದ ತಂದು ಇಲ್ಲಿ ಮಾರಾಟ ಮಾಡುವಾಗ ಸಿಕ್ಕಿಬೀಳುತ್ತಿದ್ದರಷ್ಟೆ. ಆದರೆ ಇದೀಗ ಗಾಂಜಾ ಬೆಳೆದರೆ ಹೆಚ್ಚಿನ ಹಣ ಸಂಪಾದಿಸಬಹುದೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕಾಫಿ ತೋಟದ ನಡುವೆ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದಾನೆ. ಸೋಮವಾರಪೇಟೆ ತಾಲೂಕು ಗರದಂದೂರು ಗ್ರಾಮದ ಶಂಕರಪ್ಪ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಉಣ್ಣಿಕೃಷ್ಣ ಎಂಬಾತ ಮಾಲು ಸಹಿತ ಸಿಕ್ಕಿ ಬಿದ್ದ ಆರೋಪಿ. ಈತ ಕಾಫಿ ತೋಟದ ನಡುವೆ ಯಾರಿಗೂ ತಿಳಿಯದಂತೆ ಗಾಂಜಾ ಗಿಡಗಳನ್ನು ಬೆಳೆದಿದ್ದನು. ಅದು ಹುಲುಸಾಗಿ ಬೆಳೆದಿತ್ತು. ಇದನ್ನು ಗೌಪ್ಯವಾಗಿ ಬೆಳೆದಿದ್ದನಾದರೂ ಅದು ಹೇಗೋ ಪೊಲೀಸರಿಗೆ ಮಾಹಿತಿ ಹೋಗಿತ್ತು.
ಕಾಫಿ ತೋಟದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಬರುತ್ತಿದ್ದಂತೆಯೇ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವುದಲ್ಲದೆ, ಉಣ್ಣಿಕೃಷ್ಣನನ್ನು ಬಂಧಿಸಿದ್ದಾರೆ. ತೋಟದ ಮಾಲೀಕ ಶಂಕರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.