ಪೆಟ್ರೋಲ್ ಬಂಕನ್ನೇ ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರು ಅರೆಸ್ಟ್!
ಮಡಿಕೇರಿ, ಜುಲೈ 2: ನಡುರಾತ್ರಿಯಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸುವ ನೆಪದಲ್ಲಿ ಪೆಟ್ರೋಲ್ ಬಂಕ್ ಗೆ ನುಗ್ಗಿ ಅಲ್ಲಿದ್ದ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿ ಹಣ ದೋಚುತ್ತಿದ್ದ ನಾಲ್ವರು ದರೋಡೆಕೋರರನ್ನು ಕೊಡಗು ಪೊಲೀಸರು ಬಂಧಿಸಿದ್ದು, ಈ ಖದೀಮರು ಬೆಂಗಳೂರಿನಿಂದ ಕೊಡಗಿನವರೆಗೆ ಹಲವು ದರೋಡೆ, ಸುಲಿಗೆ, ಕಳ್ಳತನಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಕೇವಲ 3 ತಾಸಿನಲ್ಲಿ ಬೆಂಗಳೂರಿನ 13 ಅಂಗಡಿಗಳಿಗೆ ಕನ್ನ
ಚನ್ನಪಟ್ಟಣ ತಾಲ್ಲೂಕಿನ ಜಗದಾಪುರ ಗ್ರಾಮದ ನಿವಾಸಿ, ಮೆಕ್ಯಾನಿಕ್ ಪ್ರವೀಣ್ ಅಲಿಯಾಸ್ ಚುಕ್ಕಿ, ಹಾಸನದ ಕೊಣನೂರು ಕೋಟೆ ಬೀದಿಯ ಕೂಲಿ ಕಾರ್ಮಿಕ ಬಿ.ಗಣೇಶ್, ಹುಣಸೂರು ಹೌಸಿಂಗ್ ಬೋರ್ಡ್ನ ನಿವಾಸಿ ಚಾಲಕ ಕುಮಾರ, ಮೈಸೂರಿನ ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ಕೂಲಿ ಕಾರ್ಮಿಕ ಅಭಿಷೇಕ್ ಅಲಿಯಾಸ್ ಅಭಿ ಎಂಬುವರೇ ಬಂಧಿತ ದರೋಡೆಕೋರರು.
ನಡುರಾತ್ರಿಯಲ್ಲಿ ಬಂಕ್ ಗೆ ಕನ್ನ
ಇವರು ರಾತ್ರಿ ವೇಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದರಲ್ಲದೆ, ಯಾರೂ ಇಲ್ಲದ ಕಡೆಗಳಲ್ಲಿ ಪೆಟ್ರೋಲ್ ಬಂಕ್ ಗೆ ಕನ್ನ ಹಾಕುತ್ತಿದ್ದರು. ಅಷ್ಟೇ ಅಲ್ಲದೆ ಮನೆಗಳಿಗೂ ಕನ್ನ ಹಾಕಿ ಹಣ, ಚಿನ್ನಾಭರಣ ದೋಚುತ್ತಿದ್ದರು. ವಾಹನಗಳನ್ನೂ ಎಗರಿಸುತ್ತಿದ್ದರು ಎನ್ನಲಾಗಿದೆ.
ಜೂನ್ 17ರಂದು ರಾತ್ರಿಯೂ ಕೊಡಗಿನ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದಲ್ಲಿರುವ ಎ.ಆರ್. ಸರ್ವಿಸ್ ಸ್ಟೇಷನ್ಗೆ ಎರಡು ಮೋಟಾರ್ ಬೈಕ್ ನಲ್ಲಿ ಬಂದ ಈ ನಾಲ್ವರು ದರೋಡೆಕೋರರು ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂದು, ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಮೊಬೈಲ್ ದರೋಡೆ ದೋಚಿಕೊಂಡು ಪರಾರಿಯಾಗಿದ್ದರು.
ತನಿಖೆಗೆ ಪ್ರತ್ಯೇಕ ತಂಡ ರಚನೆ
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ಅವರು ತನಿಖೆಗಾಗಿ ಮುರುಳಿಧರ, ಡಿ.ವೈ.ಎಸ್.ಪಿ., ಸೋಮವಾರಪೇಟೆ ಉಪವಿಭಾಗ ಮತ್ತು ತನಿಖಾಧಿಕಾರಿ ದಿನೇಶ್ ಕುಮಾರ್ ಸಿ.ಪಿ.ಐ., ಕುಶಾಲನಗರ ಠಾಣೆ ಇವರ ನೇತೃತ್ವದಲ್ಲಿ ನಂದೀಶ್ ಕುಮಾರ್, ಪಿ.ಎಸ್.ಐ., ಕುಶಾಲನರ ಗ್ರಾಮಾಂತರ ಠಾಣೆ, ಕುಶಾಲನಗರ ಸದಾಶಿವ, ಪಿ.ಎಸ್.ಐ. ಕುಶಾಲನಗರ ಟೌನ್ (ಅಪರಾಧ) ಪ್ರೊ. ಪಿ.ಎಸ್.ಐ. ಅರ್ಚನ ಎಂ.ವಿ., ವಿಶೇಷ ಅಪರಾಧ ಪತ್ತೆ ತಂಡದ ಸಜಿ, ಸುಧೀರ್ ಕುಮಾರ್, ದಯಾನಂದ, ಸಂದೇಶ್, ಜೋಸೆಫ್, ಮಂಜುನಾಥ, ರಮೇಶ್, ನಾಗರಾಜ್, ವೈ.ಯಸ್. ಪ್ರಕಾಶ್, ಸಂಪತ್ ರೈ, ಸುಧೀಶ್ ಕುಮಾರ್, ಡಿ.ಆರ್. ಅಭಿಷೇಕ್, ಮಣಿಕಂಠ, ಚಂದ್ರು, ವಿವೇಕ, ಚಾಲಕರಾದ ರಾಜು, ಸಿ.ಡಿ.ಆರ್. ವಿಭಾಗದ ರಾಜೇಶ್, ಗಿರೀಶ್, ಬೆರಳಚ್ಚು ವಿಭಾಗ ಜಯಕುಮಾರ್ ಹಾಗೂ ಜಿಲ್ಲಾ ಕಂಟ್ರೋಲ್ ರೋಸ್, ಧನಂಜಯ, ಜೋಷಿ, ಜಯಣ್ಣ ಮೊದಲಾದವರನ್ನೊಳಗೊಂಡ ವಿಶೇಷ ಕಾರ್ಯಾಚರಣೆ ತಂಡ ರಚಿಸಿ ಪತ್ತೆ ಕಾರ್ಯ ಆರಂಭಿಸಿದ್ದರು.
ನಾಲ್ಕನೇ ಬಾರಿ ಕನ್ನ; ನಾಲ್ಕು ಲಕ್ಷವಿದ್ದ ಹುಂಡಿ ಕಳವು
ಬೆಳಕಿಗೆ ಬಂತು ಸಾಲು ಸಾಲು ಪ್ರಕರಣ
ತನಿಖಾ ತಂಡ ದರೋಡೆಕೋರರ ಜಾಡು ಹಿಡಿದು ತನಿಖೆ ಆರಂಭಿಸಿತ್ತು. ತಮಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಪತ್ತೆ ಕಾರ್ಯ ಮುಂದುವರೆಸಿದ ತಂಡ, ಕೊನೆಗೂ ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಆರೋಪಿಗಳಿಂದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳ ಪೈಕಿ ಪ್ರವೀಣ್ ಅಲಿಯಾಸ್ ಚುಕ್ಕಿ ಮತ್ತು ಗಣೇಶ್ ಎಂಬುವರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಇವರು ತಾವು ಮಾಡಿರುವ ದರೋಡೆ, ಕಳ್ಳತನ, ಸುಲಿಗೆ ಪ್ರಕರಣಗಳ ಬಗ್ಗೆ ಬಾಯಿಬಿಟ್ಟಿದ್ದಾರೆ. ಅದರಂತೆ ಹುಣಸೂರು ಪಟ್ಟಣದಲ್ಲಿ ಪಲ್ಸರ್ ಬೈಕ್ ಕಳ್ಳತನ, ಹುಣಸೂರಿನ ಗಾವಡಗೆರೆಯ ಪೆಟ್ರೋಲ್ ಬಂಕ್ ನಲ್ಲಿ ಸುಲಿಗೆ, ಕೆ.ಆರ್. ನಗರದ ಹಂಪಾಪುರದ ಪೆಟ್ರೋಲ್ ಬಂಕ್ ನಲ್ಲಿ ಸುಲಿಗೆ, ಕೆ.ಆರ್. ಪೇಟೆಯ ಸೋಮೇನಹಳ್ಳಿ ಪೆಟ್ರೋಲ್ ಬಂಕ್ ನಲ್ಲಿ ಸುಲಿಗೆ, ಕೆ.ಆರ್.ಎಸ್ನ ಕಟ್ಟೇರಿ ಹೊಸಳ್ಳಿ ಗ್ರಾಮದ ಮನೆಯಲ್ಲಿ ಸುಲಿಗೆ ಪ್ರಕರಣ, ಬೆಳಕವಾಡಿ ಗ್ರಾಮದ ಒಂಟಿ ಮನೆಯಲ್ಲಿ ಕಳ್ಳತನ ಪ್ರಕರಣ, ನಾಗಮಂಗಲದ ಚೀಣ್ಯದ ಬಳಿ ಕುರಿಗಳ ಕಳ್ಳತನ, ಪಿರಿಯಾಪಟ್ಟಣ ಪಂಚವಳ್ಳಿ ಪೆಟ್ರೋಲ್ ಬಂಕ್ ನಲ್ಲಿ ಸುಲಿಗೆ, ಬೆಂಗಳೂರು ನಗರದಲ್ಲಿ ಮೋಟಾರ್ ಬೈಕ್ ಕಳವು ನಡೆಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪ್ರವೀಣ
ಇನ್ನು ಈ ತಂಡ ಪ್ರಮುಖ ಆರೋಪಿ ಪ್ರವೀಣ (ಚುಕ್ಕಿ) ಎಂಬಾತನ ವಿರುದ್ಧ ಈ ಹಿಂದೆ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಚನ್ನಪಟ್ಟಣದ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಒಂದು ಡಕಾಯಿತಿ ಪ್ರಕರಣ ಮತ್ತು ರಾಮನಗರ ಗ್ರಾಮಾಂತರ ಪೊಲೀಸರ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರರನ್ನು ಬಂಧಿಸಿರುವುದಕ್ಕೆ ಸಾರ್ವಜನಿಕರ ವಲಯದಲ್ಲಿ ಪೊಲೀಸರಿಗೆ ಪ್ರಶಂಸೆ ವ್ಯಕ್ತವಾಗಿದೆ.