ಪ್ಲಾಸ್ಟಿಕ್ ಮಯವಾದ ಮಡಿಕೇರಿ ರಸ್ತೆಗಳು, ಎಲ್ಲಿ ನೋಡಿದರೂ ಕಸ...
ಮೈಸೂರು, ಆಗಸ್ಟ್. 29 : ಕರ್ನಾಟಕದ ಕಾಶ್ಮೀರ ಕೊಡಗಿನ ಹಲವು ಭಾಗಗಳಲ್ಲಿ ಜಲಪ್ರವಾಹಕ್ಕೆ ಪ್ರಮುಖ ಕಾರಣವೇ ಮಾನವನ ಅತೀ ಆಸೆ. ಇದೀಗ ಕೊಡಗು ಮುಂದೊಂದು ದಿನವೂ ಮತ್ತಷ್ಟು ಸಂಕಟಗಳಿಗೆ ತುತ್ತಾಗುವ ಲಕ್ಷಣ ಕಾಣತೊಡಗಿದೆ.
ಹೌದು, ಇದಕ್ಕೆ ಸಾಕ್ಷಿಯಾಗಿರುವುದು ಶುಂಟಿಕೊಪ್ಪ - ಮಡಿಕೇರಿಯಲ್ಲಿ ಸಾಗುವ ರಸ್ತೆಯ ಇಕ್ಕೆಲಗಳು. ಹಳೆ ಬಟ್ಟೆಗಳು, ಬಾಟೆಲ್ ಗಳ ರಾಶಿ ರಾಶಿಯೇ ಅಲ್ಲಿ ಬಿದ್ದಿದೆ. ಸಾಲದೆಂಬಂತೆ ಮಕ್ಕಳ ಡೈಪರ್ ಗಳು ಸಹ ರಸ್ತೆಯ ಇಕ್ಕೆಲಗಳಲ್ಲಿ ಬಿಸಾಡಲಾಗಿದೆ.
ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಫಿಗೆ ಬಂತು ಕೊಳೆರೋಗ ಭೀತಿ
ಪ್ರವಾಸಿಗರ ಸ್ವರ್ಗವೆಂದೇ ಹೆಸರಾದ ಮಡಿಕೇರಿಯಲ್ಲಿ ಈ ತೆರನಾದ ದೃಶ್ಯ ಸಾಮಾನ್ಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಂಭವವೂ ಕೂಡ ದಟ್ಟವಾಗಿದೆ.
ಇನ್ನು ಪ್ರಕೃತಿ ಸೌಂದರ್ಯ ಸವಿಯುವ ನಿಟ್ಟಿನಲ್ಲಿ ಬರುವ ಪ್ರವಾಸಿಗರು ಹಾಗೂ ಪ್ರವಾಸೋದ್ಯಮದ ಹೆಸರಿನಲ್ಲಿ ವ್ಯಾಪಾರ ವಹಿವಾಟು ನಡೆಸುವ ವರ್ತಕರು ಎಲ್ಲೆಂದರಲ್ಲಿ ಬಿಸಾಡುವ ಅದರಲ್ಲಿಯೂ ಹರಿಯುವ ನೀರಿಗೆ ಹಾಕುವ ಪ್ಲಾಸ್ಟಿಕ್ ತ್ಯಾಜ್ಯಗಳು ಪ್ರಕೃತಿಯ ಅಂದವನ್ನು ಹಾಳುಗೆಡುವುತ್ತಿವೆ.
ಕಳೆದೆರೆಡು ತಿಂಗಳಿನಿಂದ ಜಲಪ್ರಳಯಕ್ಕೆ ತುತ್ತಾಗಿ ತುಂಬಿ ಹರಿಯುತ್ತಿದ್ದ ಹೊಳೆ ಪ್ರಸ್ತುತ ಇಳಿಮುಖವಾಗಿದೆ. ಹೊಳೆಯ ನೀರಿನಲ್ಲಿ ತೇಲಿ ಬಂದ ಮಾನವ ನಿರ್ಮಿತ ಕಸದ ರಾಶಿ ಅದರಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚು ಸಂಗ್ರಹವಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲಚರಗಳಿಗೆ ವಿಪರೀತ ಹಾನಿ ಉಂಟಾಗುತ್ತಿದ್ದು, ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಅಲ್ಲದೇ ಸುಲಲಿತವಾಗಿ ನೀರಿನಲ್ಲಿ ಸಂಚರಿಸುವ ಆಮೆ ದೊಡ್ಡಗಾತ್ರದ ಮೀನುಗಳು ಸಹ ಮೃತಪಟ್ಟಿದೆ. ಆಹಾರದೊಂದಿಗೆ ಪ್ಲಾಸ್ಟಿಕ್ ಗಳು ಸಹ ಜಲಚರಗಳ ಹೊಟ್ಟೆ ಸೇರುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.