ಕುಶಾಲನಗರದ ಈ ಫೋಟೋಗ್ರಾಫರ್ ಈಗ ಕೊರೊನಾ ವಾರಿಯರ್
ಮಡಿಕೇರಿ, ಏಪ್ರಿಲ್ 21; ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹಬ್ಬುತಿದ್ದರೂ ಕೂಡ ಜನರು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಮಹಾನಗರಗಳ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಸಹ ಉದ್ದನೆ ಕ್ಯೂ ಇದೆ. ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಕುಶಾಲನಗರದ ಫೋಟೋಗ್ರಾಫರ್ ಒಬ್ಬರು ತಮ್ಮ ಸ್ಟುಡಿಯೋದಲ್ಲಿ ಪಾಸ್ ಪೋರ್ಟ್ ಅಳತೆಯ 16 ಭಾವಚಿತ್ರ ತೆಗೆಸಿಕೊಂಡವರಿಗೆ ಉಚಿತವಾಗಿ ಒಂದು ಎನ್ 95 ಮಾಸ್ಕ್ ಅನ್ನು ವಿತರಣೆ ಮಾಡುತ್ತಿದ್ದಾರೆ. ಆ ಮೂಲಕ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಾಸ್ಕ್ ಧರಿಸುವ ಅಗತ್ಯತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ದಾಖಲೆ ಬರೆದ ಕೋವಿಡ್ ಪ್ರಕರಣಗಳ ಸಂಖ್ಯೆ
ಕುಶಾಲನಗರದ ಒಡಿಸ್ಸಿ ಸ್ಟುಡಿಯೋ ಮಾಲೀಕ ನಾಗೇಶ್ ಇಂತಹ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸ್ಟುಡಿಯೋದಲ್ಲಿ ಫೋಟೋ ತೆಗೆಸಿಕೊಳ್ಳಲು ಬರುವ ಪ್ರತಿಯೊಬ್ಬರಿಗೂ 125 ರೂಪಾಯಿ ಮೌಲ್ಯದ ಎನ್ 95 ಮಾಸ್ಕ್ ಅನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಪಾಸ್ ಪೋರ್ಟ್ ಅಳತೆಯ 16 ಫೋಟೋಗೆ 150 ರೂಪಾಯಿ ದರ ವಿಧಿಸುವ ಇವರು ಫೋಟೋ ಜೊತೆಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.
ಕೊಡಗು ಪ್ರವಾಸಿ ತಾಣಗಳಿಗೆ ನಿರ್ಬಂಧ; ವಿವರ ನೀಡಿದ ಜಿಲ್ಲಾಡಳಿತ
ಈ ಕುರಿತು ಮಾತನಾಡಿರುವ ಅವರು, "ನನಗೆ ಹಣದ ವೆಚ್ಚಕ್ಕಿಂತ ಸಾಮಾಜಿಕ ಜವಾಬ್ದಾರಿ ಮುಖ್ಯ. ನಾನು ಹಣಕ್ಕಾಗಿ ಮಾಸ್ಕ್ ವಿತರಿಸುತ್ತಿಲ್ಲ. ಬದಲಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಡುವುದು, ಆ ಮೂಲಕ ಕೋವಿಡ್ ಒಬ್ಬರಿಗೆ ಹರಡುವುದನ್ನು ತಪ್ಪಿಸುವುದು ನನ್ನ ಜವಾಬ್ದಾರಿ" ಎಂದು ಹೇಳುತ್ತಾರೆ.
ಹೊಸಪೇಟೆ; ಒಂದೇ ಗ್ರಾಮದ 57 ಜನರಿಗೆ ಕೋವಿಡ್ ಸೋಂಕು
ಈ ಮಾಸ್ಕ್ ವಿತರಿಸಬೇಕೆಂಬ ಆಲೋಚನೆ ಕುರಿತು ಅವರು ವಿವರಣೆ ನೀಡಿದ್ದಾರೆ."ನಾನು ಸಂಸ್ಥೆಯೊಂದರ ಸಭೆಯಲ್ಲಿ ಭಾಗವಹಿಸಿದ್ದೆ. ಆ ಸಭೆ ಆಯೋಜಿಸಿದ್ದವರು, ಮಾಸ್ಕ್ ಅನ್ನು ಕೊಡುಗೆಯಾಗಿ ನೀಡುವಂತೆ ನನ್ನನ್ನು ಕೇಳಿದ್ದರು. ಆ ವೇಳೆ ಸಂಸ್ಥೆಗೆ ಮಾಸ್ಕ್ ಅನ್ನು ಕೊಡುಗೆಯಾಗಿ ನೀಡುವುದಕ್ಕಿಂತ ನಾನೇ ಯಾಕೆ ಮಾಸ್ಕ್ ವಿತರಣೆ ಮಾಡಬಾರದು ಎಂದು ಯೋಚಿಸಿದೆ" ಎಂದರು.
"ಸಾಮಾನ್ಯ ಮಾಸ್ಕ್ ವಿತರಣೆ ಮಾಡಿದರೆ, ಅದನ್ನು ಜನರು ಒಮ್ಮೆ ಬಳಸಿ ಬಿಸಾಡಿ ಬಿಡುತ್ತಾರೆ. ಇದು ಭೂಮಿಗೆ ಒಂದಷ್ಟು ಕಸವಾಗಿ ಮಾರ್ಪಡುತ್ತದೆ. ಹೀಗಾಗಿ ಮರುಬಳಕೆ ಮಾಡಬಹುದಾದ ಮಾಸ್ಕ್ ವಿತರಣೆ ಮಾಡಿದರೆ, ಜನರು ಪುನರ್ ಬಳಕೆ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಎನ್ 95 ಮಾಸ್ಕ್ ಅನ್ನೇ ವಿತರಣೆ ಮಾಡುತ್ತಿದ್ದೇನೆ" ಎನ್ನುತ್ತಾರೆ ನಾಗೇಶ್.
ನಾಗೇಶ್ ಅವರ ಕಾರ್ಯಕ್ಕೆ ಕುಶಾಲನಗರದಲ್ಲಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಾಸ್ಕ್ ನಿಂದಲೇ ಶೇಕಡ 95 ರಷ್ಟು ಸೋಂಕು ಹರಡದಂತೆ ತಡೆಯಬಹುದಾಗಿದ್ದು ನಾಗೇಶ್ ಅವರ ಕಾರ್ಯಕ್ಕೆ ಶುಭವಾಗಲಿ.