ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಆರೋಪಿ ಬಂಧನ
ಒಂದು ತಿಂಗಳ ಹಿಂದೆ ಸೋಮವಾರಪೇಟೆಯ ಐಗೂರಿನಲ್ಲಿ ಆರ್ ಎಸ್ ಎಸ್ ಮುಖಂಡರೊಬ್ಬರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಅದಕ್ಕೂ ಮುನ್ನ ಕುರಾನ್ ಗೆ ಬೆಂಕಿ ಹಚ್ಚಲಾಗಿತ್ತು.ಇದೀಗ ಬಾಂಬ್ ಎಸೆದಿದ್ದ ಆರೋಪಿ ಬಂಧನವಾಗಿದೆ
ಸೋಮವಾರಪೇಟೆ, ಡಿಸೆಂಬರ್ 24: ಐಗೂರು ಗ್ರಾಮದ ಆರ್ ಎಸ್ ಎಸ್ ಮುಖಂಡ ಪದ್ಮನಾಭ್ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಎಸೆದು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸ್ ತನಿಖಾ ತಂಡ, ಇನ್ನೊಬ್ಬ ಪ್ರಮುಖ ಆರೋಪಿ ಪತ್ತೆಗಾಗಿ ಬಲೆ ಬೀಸಿದೆ.
ಕಲ್ಕಂದೂರು ಗ್ರಾಮದ ಮೂಸ ಎಂಬವರ ಪುತ್ರ ಜಮಾಲುದ್ದೀನ್ ಅಲಿಯಾಸ್ ಜಮಾಲ್ (20) ಬಂಧಿತ. ಮತ್ತೊಬ್ಬ ಆರೋಪಿ ಸೋಮವಾರಪೇಟೆಯ ಜನತಾ ಕಾಲೋನಿ ನಿವಾಸಿ ಕರೀಂ ಬೇಗ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಸೀದಿಯಲ್ಲಿದ್ದ ಕುರಾನ್ ಗೆ ಬೆಂಕಿ ಹಚ್ಚಿದ ಪ್ರಕರಣ ಐಗೂರಲ್ಲಿ ನಡೆದಿತ್ತು.[ಕೊಡಗಿನ ಐಗೂರಲ್ಲಿ ಕುರಾನ್ ಸುಟ್ಟಿದ್ದಕ್ಕೆ ಕಾರು ಸುಟ್ಟರೇ?]
ಇದಾದ ಬಳಿಕ ನವೆಂಬರ್ 13ರಂದು ಆರ್ ಎಸ್ ಎಸ್ ಪ್ರಮುಖ ಹಾಗೂ ವಕೀಲ ಕೆ.ಎಸ್. ಪದ್ಮನಾಭ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಎಸೆದು ಧ್ವಂಸಗೊಳಿಸಲಾಗಿತ್ತು. ಕುರಾನ್ ಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಧರಣೇಶ್ ಎಂಬಾತನನ್ನು ಬಂಧಿಸಲಾಗಿದ್ದು, ಆತ ಹಿಂದೂಪರ ಸಂಘಟನೆಯ ಕಾರ್ಯಕರ್ತ ಅಲ್ಲ ಎಂಬುದು ಸ್ಪಷ್ಟವಾಗಿತ್ತು.
ಐಗೂರಲ್ಲಿ ಕುರಾನ್ ಸುಟ್ಟ ಪ್ರಕರಣದ ಬಳಿಕ ಹಲವು ತಿರುವು ಕಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನೆ, ಪ್ರಚೋದನಾಕಾರಿ ಭಾಷಣಗಳಿಂದ ಜನ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲದರ ನಡುವೆ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು.[ಕೊಡಗಿನ ಐಗೂರಲ್ಲಿ ಕುರಾನ್ ಗೆ ಬೆಂಕಿ: ಪೊಲೀಸ್ ಬಂದೋಬಸ್ತ್]
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ, ನಿರ್ಣಯ ಕೈಗೊಂಡಿದ್ದಾರೆ.