ಶಿಕ್ಷಕಿಯನ್ನು ಗುಂಡಿಟ್ಟು ತಾನು ಗುಂಡಿಕ್ಕಿಕೊಂಡು ಸತ್ತ ಹಂತಕ
ಮಡಿಕೇರಿ, ಜೂನ್ 14: ವ್ಯಕ್ತಿಯೊಬ್ಬ ಶಿಕ್ಷಕಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದಲ್ಲದೆ, ಅದೇ ಕೋವಿಯಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊಡಗಿನ ಬಾಳಲೆಯಲ್ಲಿ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಆಶಾ ಗುಂಡೇಟಿಗೆ ಬಲಿಯಾದವರು. ಮೂಲತಃ ಬಲ್ಯಮಂಡೂರು ನಿವಾಸಿಯಾಗಿದ್ದು, ಪೊನ್ನಂಪೇಟೆಯಲ್ಲಿ ವಾಸವಿದ್ದ ಮಾಚಿಮಾಡ ಜಗದೀಶ್ ಹಂತಕನಾಗಿದ್ದಾನೆ. ಘಟನೆ ಬಳಿಕ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗೆಳತಿ ವಂಚಿಸುತ್ತಿದ್ದಾಳೆಂಬ ಗುಮಾನಿಯಲ್ಲಿ ಇರಿದು ಕೊಂದ ಯುವಕ
ಜಗದೀಶ್ ಈ ಹಿಂದೆ ಬಲ್ಯಮಂಡೂರಿನಲ್ಲಿ ಕಾಫಿ ತೋಟ ಹೊಂದಿದ್ದು, ಹೆಂಡತಿ ಸಾವನ್ನಪ್ಪಿದ ಬಳಿಕ ತೋಟವನ್ನು ಮಾರಿ ಪೊನ್ನಂಪೇಟೆಯಲ್ಲಿ ನೆಲೆಸಿದ್ದನು. ತೋಟ ಮಾರಿ ಬಂದ ಹಣವನ್ನು ಬಡ್ಡಿಗೆ ಸಾಲ ನೀಡುತ್ತಿದ್ದನು ಎನ್ನಲಾಗಿದೆ. ಈತನಿಂದ ಶಿಕ್ಷಕಿ ಆಶಾ ಸಾಲ ಪಡೆದುಕೊಂಡಿರುವುದಾಗಿ ತಿಳಿದುಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪವುಂಟಾಗಿತ್ತು.
ವರ್ಷದ ಹಿಂದೆ ಜಗದೀಶ್ ಅತ್ಯಾಚಾರ ಯತ್ನದ ಆರೋಪ ಮೇರೆಗೆ ಜೈಲಿಗೆ ಹೋಗಿ ಬಂದಿದ್ದು, ಈ ಘಟನೆಯಿಂದ ಸ್ಥಿಮಿತ ಕಳೆದುಕೊಂಡಿದ್ದನು ಎನ್ನಲಾಗಿದೆ.
ಆಶಾಳ ಮೇಲೆ ದ್ವೇಷ ಹೊಂದಿದ್ದ ಜಗದೀಶ್, ತನ್ನ ಕೋವಿಯೊಂದಿಗೆ ಬಾಳಲೆಗೆ ಬಂದಿದ್ದು, ಆಶಾ ಮನೆ ಪಕ್ಕದ ತೋಟದಲ್ಲಿ ಕೋವಿಯೊಂದಿಗೆ ಕಾದು ಕುಳಿತಿದ್ದಾನೆ. ಅಲ್ಲಿಯೇ ಬಸ್ ನಿಲ್ದಾಣ ಇದ್ದಿದ್ದರಿಂದ ಆಶಾ ಶಾಲೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದು, ಬಸ್ಗಾಗಿ ಕಾಯುತ್ತಿರುವಾಗಲೇ ಆಕೆ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಕೀಲರ ಸಂಘದ ಅಧ್ಯಕ್ಷೆಗೆ ಗುಂಡು ಹಾರಿಸಿ ಹತ್ಯೆ, ಹಂತಕನಿಂದ ಆತ್ಮಹತ್ಯೆ ಯತ್ನ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಮಗ್ರ ತನಿಖೆಯಿಂದಷ್ಟೆ ನೈಜಾಂಶ ಬೆಳಕಿಗೆ ಬರಬೇಕಿದೆ.