ಕ್ರಿಶ್ಚಿಯನ್ ಆಗಿ ಜನನ, ಮುಸ್ಲೀಮನಾಗಿ ಜೀವನ, ಹಿಂದೂವಾಗಿ ಅಂತ್ಯಸಂಸ್ಕಾರ
ಮಡಿಕೇರಿ, ಜುಲೈ 6: ಕ್ರೈಸ್ತ ಧರ್ಮದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಕೊನೆಗೆ ಮರಣ ಹೊಂದಿದಾಗ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಬರದೆ ಗ್ರಾಮಸ್ಥರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಿಂದೂ ವಿಧಿ-ವಿಧಾನಗಳಂತೆ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕು ಗೋಪಾಲಪುರದಲ್ಲಿ ನಡೆದಿದೆ.
ವರ್ಗೀಸ್ (68) ಅವರು ಅನೇಕ ವರ್ಷಗಳಿಂದ ಗೋಪಾಲಪುರದಲ್ಲೇ ಒಬ್ಬಂಟಿಯಾಗಿ ನೆಲೆಸಿದ್ದರು. ಇವರು ಮಂಗಳೂರು ಮೂಲದ ಮುಸ್ಲಿಂ ಮಹಿಳೆಯನ್ನು ಮದುವೆ ಆಗಿ ಇಸ್ಲಾಂಗೆ ಮತಾಂತರಗೊಂಡು ಯೂಸುಫ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಇವರಿಗೆ 22 ಹಾಗೂ 24 ವರ್ಷದ ಗಂಡು ಮಕ್ಕಳಿದ್ದಾರೆ. ಅವರು ತಾಯಿಯ ಜತೆ ಮಂಗಳೂರಿನಲ್ಲಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಅನ್ಯೋನ್ಯವಾಗೇ ಇದ್ದ ವರ್ಗೀಸ್ ಅವರು, ಕಳೆದ ವರ್ಷ ಅನಾರೋಗ್ಯಪೀಡಿತರಾದರು. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಪತ್ನಿ, ಮಕ್ಕಳು ಚಿಕಿತ್ಸೆ ಕೊಡಿಸಿದ್ದರು.
ಕುಟುಂಬಕ್ಕೆ ಮಾಹಿತಿ ನೀಡಿದರೂ ಬರಲಿಲ್ಲ
ಟಿಂಬರ್ ಕೆಲಸ ಮಾಡಿಕೊಂಡಿದ್ದ ಇವರು ಕಳೆದ ಶುಕ್ರವಾರ ಅಸ್ವಸ್ಥರಾದರು. ನಂತರ ಅಕ್ಕ ಪಕ್ಕದವರು ಸಮೀಪದ ಶನಿವಾರಸಂತೆ ಸಮುದಾಯ ಅರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿಂದ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಆದರೆ ಇವರು ತೀವ್ರ ಅಸ್ವಸ್ಥರಾದ ನಂತರ ಮಂಗಳೂರಿನ ಪತ್ನಿ, ಮಕ್ಕಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ ಅವರು ಬರಲಿಲ್ಲ. ಕೊನೆಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಅವರ ಗಮನಕ್ಕೆ ಈ ವಿಷಯ ಬಂದಿತು.
ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ: ಮಾಹಿತಿ ಕಲೆ ಹಾಕಿದ ಕೊಡಗು ಜಿಲ್ಲಾಡಳಿತ
ಕರೆಯನ್ನೂ ಸ್ವೀಕರಿಸದೇ ನಿರಾಕರಿಸಿದರು
ಕೂಡಲೇ ಕರವೇ ಕಾರ್ಯಕರ್ತರು ಅವರನ್ನು ಮಡಿಕೇರಿ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟರು. ಆದರೆ ಇಲ್ಲಿಂದ ಮತ್ತೊಂದು ಸಮಸ್ಯೆ ಎದುರಾಯಿತು. ವರ್ಗೀಸ್ ಸಾವನ್ನಪ್ಪಿದ್ದನ್ನು ತಿಳಿಸಿದರೂ ಪತ್ನಿ, ಮಕ್ಕಳು ಮಂಗಳೂರಿನಿಂದ ಬರಲಿಲ್ಲ. ಅಷ್ಟೇ ಅಲ್ಲ, ಕರೆಯನ್ನೂ ಸ್ವೀಕರಿಸದೇ ನಿರಾಕರಿಸಿ ನಿಮ್ಮಿಷ್ಟದಂತೆ ಮಾಡಿಕೊಳ್ಳಿ ಎಂದು ಸುಮ್ಮನಾದರು. ನಂತರ ಫ್ರಾನ್ಸಿಸ್ ಅವರು ಸ್ಥಳೀಯ ಗೋಪಾಲಪುರ ಚರ್ಚ್ ನ ಧರ್ಮ ಗುರುಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿದರು.
ಎರಡೂ ಕಡೆಯಲ್ಲೂ ಅಂತ್ಯಸಂಸ್ಕಾರಕ್ಕೆ ಅವಕಾಶ ಸಿಗಲಿಲ್ಲ
ಆದರೆ ವರ್ಗೀಸ್ ಇಸ್ಲಾಂಗೆ ಮತಾಂತರಗೊಂಡಿರುವುದರಿಂದ ಕ್ರಿಶ್ಚಿಯನ್ ಸ್ಮಶಾನದಲ್ಲಿ ಹೂಳಲು ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸಲಾಯಿತು. ನಂತರ ಶನಿವಾರಸಂತೆಯ ಮಸೀದಿ ಧರ್ಮ ಗುರುಗಳು ಮತ್ತು ಎಸ್ಡಿಪಿಐ ಸಂಘಟನೆಯ ಮುಖಂಡರಿಗೂ ಮುಸ್ಲಿಂ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಲಾಯಿತು. ಆದರೆ ಅಲ್ಲಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ ಎಂದು ಫ್ರಾನ್ಸಿಸ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಕೊಡಗಿನಲ್ಲಿ ಪರಿಣಾಮಕಾರಿ ಕ್ರಮ : ಡಿಸಿ
ಹಿಂದೂ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ
ಕೊನೆಗೆ ವರ್ಗೀಸ್ ಅವರು ವಾಸವಿದ್ದ ಅಕ್ಕಪಕ್ಕದ ಮನೆಯವರೇ ಅಂತ್ಯಸಂಸ್ಕಾರಕ್ಕೆ ಮುಂದೆ ಬಂದರು. ಸ್ಥಳೀಯ ರುದ್ರಭೂಮಿಯಲ್ಲಿ ಹಿಂದೂ ವಿಧಿ ವಿಧಾನಗಳಂತೆ ಗ್ರಾಮಸ್ಥರು ಮತ್ತು ಕರವೇ ಕಾರ್ಯಕರ್ತರು ಭಾನುವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಿದರು.