ಭೂ ಕುಸಿತವಾಗಿದ್ದ ನಾರಾಯಣಾಚಾರ್ ಮನೆ ಬಳಿ ಈಗ ನಿಧಿಗಾಗಿ ಹುಡುಕಾಟ?
ಕೊಡಗು, ನವೆಂಬರ್ 28: ಇದೇ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ಇಲ್ಲಿನ ಪ್ರಸಿದ್ಧ ತೀರ್ಥ ಕ್ಷೇತ್ರ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ಮನೆಯಲ್ಲಿದ್ದ ಐದು ಮಂದಿ ಭೂಸಮಾಧಿಯಾಗಿದ್ದರು. ಇದೀಗ ಆ ಮನೆ ಸುತ್ತಲೂ ಜನರು ನಿಧಿಗಾಗಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.
ದೇವಾಲಯಗಳ ಸಮೀಪ, ರಾಜಮನೆತನಗಳು ಆಳಿದ ಪ್ರದೇಶಗಳಲ್ಲಿ ನಿಧಿಗಾಗಿ ಹುಡುಕಾಡುವುದು ಸಹಜ. ಆದರೆ ಕುಟುಂಬವೊಂದು ಬಾಳಿ ಬದುಕಿದ್ದ ಸ್ಥಳದಲ್ಲಿ ನಿಧಿಗಾಗಿ ಜನರು ಶೋಧಿಸುತ್ತಿದ್ದಾರೆ ಎನ್ನಲಾಗಿದೆ. ನಾರಾಯಣಾಚಾರ್ ಅವರದ್ದು ಶ್ರೀಮಂತ ಕುಟುಂಬವಾಗಿರುವುದೇ ಈ ಅನುಮಾನ ಮೂಡಲು ಕಾರಣವಾಗಿದೆ.
ತಲಕಾವೇರಿ ಅರ್ಚಕ ಪುತ್ರಿಯರ ಮತಾಂತರ; ಎರಡು ತಿಂಗಳಾದರೂ ಸಿಕ್ಕಿಲ್ಲ ಪರಿಹಾರ
ಭೂಕುಸಿತದಲ್ಲಿ ಸಮಾಧಿಯಾಗಿದ್ದ ನಾರಾಯಣಾಚಾರ್ ಅವರ ಕುಟುಂಬ ಶ್ರೀಮಂತ ಕುಟುಂಬ ಎನ್ನುವ ಸಂಗತಿ ಅವರ ಸಾವಿನ ಬಳಿಕವಷ್ಟೇ ಬಹಿರಂಗವಾಗಿತ್ತು. ಹೀಗೊಂದು ಸುದ್ದಿ ಹರಿದಾಡುತ್ತಿದ್ದಂತೆ ಅವರ ಮನೆ ಬಳಿ ನಿಧಿಗಾಗಿ ಶೋಧ ನಡೆಸುತ್ತಿರುವ ಅನುಮಾನ ವ್ಯಕ್ತಗೊಂಡಿದೆ.
ಆಗಸ್ಟ್ ನಲ್ಲಿ ಸಂಭವಿಸಿದ್ದ ಘಟನೆ
ಇದೇ ಆಗಸ್ಟ್ 5ರಂದು ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ತಲಕಾವೇರಿ ದೇಗುಲದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಕುಟುಂಬ ಭೂ ಸಮಾಧಿಯಾಗಿತ್ತು. ಆರು ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದ್ದು, ಮೂವರ ಮೃತದೇಹವನ್ನು ಪತ್ತೆಹಚ್ಚಲಾಗಿತ್ತು. ಆನಂತರ ಸರ್ಕಾರ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮನೆಯಲ್ಲಿ ಬಂಗಾರ, ಹಣವಿದ್ದ ಮಾಹಿತಿ
ನಾರಾಯಣಾಚಾರ್ ಅವರ ಕುಟುಂಬ ಭೂಕುಸಿತದಲ್ಲಿ ಸಮಾಧಿಯಾಗುವ ವೇಳೆ ಸುಮಾರು ಎರಡು ಕೆ.ಜಿ ಯಷ್ಟು ಚಿನ್ನ ಇತ್ತು, ಲಕ್ಷಾಂತರ ರೂಪಾಯಿ ಹಣವಿತ್ತು. ಅಷ್ಟೇ ಅಲ್ಲ ಕ್ವಿಂಟಾಲ್ ಗಟ್ಟಲೆ ಕಪ್ಪು ಚಿನ್ನ ಕರಿಮೆಣಸು ಮತ್ತು ಏಲಕ್ಕಿ ಇತ್ತು ಎನ್ನುವುದು ತಿಳಿದುಬಂದಿತ್ತು. ಆದರೆ ಅವೆಲ್ಲವೂ ನಾರಾಯಣಾಚಾರ್ ಅವರ ಕುಟುಂಬದೊಂದಿಗೆ ಕೊಚ್ಚಿ ಹೋಗಿ ಭೂಸಮಾಧಿಯಾದವು ಎನ್ನಲಾಗಿದೆ.
ತಲಕಾವೇರಿ ಭೂಕುಸಿತ ಪ್ರಕರಣ; ಪರಿಹಾರ ಪಡೆಯಲು ಮತಾಂತರ ಅಡ್ಡಿ
ನಾರಾಯಣಾಚಾರ್ ಮನೆ ಸಮೀಪ ಹುಡುಕಾಟ?
ಹೀಗೆ ಮುಚ್ಚಿ ಹೋಗಿದ್ದ ಚಿನ್ನ, ನಗದು, ಕ್ವಿಂಟಾಲ್ ಗಟ್ಟಲೆ ಕರಿಮೆಣಸು, ಏಲಕ್ಕಿಗಾಗಿ ಇದುವರೆಗೆ ಸುಮ್ಮನಿದ್ದ ಕೆಲವರು ರಾತ್ರಿ ಹುಡುಕಾಟ ಆರಂಭಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ತಲಕಾವೇರಿಯಲ್ಲಿ ಸಂಜೆ ಆರು ಗಂಟೆಯಾಗುತ್ತಿದ್ದಂತೆ ಅಲ್ಲಿಂದ ಎಲ್ಲರೂ ಜಾಗ ಖಾಲಿ ಮಾಡುತ್ತಾರೆ. ಕೆಲವರು ರಾತ್ರಿಯಾಗುತ್ತಲೇ ಟಾರ್ಚ್ ಗಳನ್ನು ಹಾಕಿಕೊಂಡು ಹುಡುಕಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Recommended Video
"ಇಲ್ಲಿ ಯಾವುದೇ ಕುರುಹು ಇಲ್ಲ"
ಅತ್ಯಂತ ದುರ್ಗಮವಾದ ಸ್ಥಳದಲ್ಲಿ ಹೀಗೆ ಹುಡುಕಾಡುವುದು ಆತಂಕದ ವಿಷಯ ಹೌದು. ನಾರಾಯಣಾಚಾರ್ ಅವರು ಬಳಸುತ್ತಿದ್ದ ಬಟ್ಟೆ ಬರೆ ಸೇರಿದಂತೆ ವಿವಿಧ ವಸ್ತುಗಳು ಅಲ್ಲಿಯೇ ಬಿದ್ದಿವೆ. ಈ ನಡುವೆ ಜನರು ನಿಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನುತ್ತಾರೆ ಕೆಲವರು. ಆದರೆ, ಇಲ್ಲಿಯವರೆಗೂ ನಮಗೆ ಯಾರೂ ಕಾಣಿಸಿಲ್ಲ. ಇಲ್ಲಿ ಹುಡುಕಾಡಲೂ ಸಾಧ್ಯವಿಲ್ಲ ಎನ್ನುತ್ತಾರೆ ಈಗಿನ ತಲಕಾವೇರಿ ದೇವಾಲಯದ ಅರ್ಚಕ ಗುರುರಾಜ್ ಆಚಾರ್. ನಿಧಿ ಶೋಧನೆ ಮಾಡಿರುವುದಕ್ಕೆ ಇಲ್ಲಿ ಯಾವುದೇ ಕುರುಹು ಇಲ್ಲಎನ್ನುತ್ತಾರೆ ಸ್ಥಳೀಯರು.