ಮಳೆಗಾಗಿ ಪೇಜಾವರ ಶ್ರೀಗಳಿಂದ ತಲಕಾವೇರಿಯಲ್ಲಿ ಪೂಜೆ
ಮಡಿಕೇರಿ, ಜುಲೈ 23: ಕಾವೇರಿ ನದಿ ಉಗಮಸ್ಥಾನ ಕೊಡಗಿನ ತಲಕಾವೇರಿಗೆ ಮಂಗಳವಾರ ಭೇಟಿ ನೀಡಿದ ಉಡುಪಿಯ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಉತ್ತಮ ಮಳೆಯಾಗುವಂತೆ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೊಡಗಿನಲ್ಲಿ ಈಗಷ್ಟೆ ಮುಂಗಾರು ಚೇತರಿಸಿಕೊಂಡಿದ್ದು, ಸುರಿಯುವ ಮಳೆಯ ಪ್ರಮಾಣವು ಹೆಚ್ಚಾಗಿದೆ. ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಕೆಆರ್ ಎಸ್ ಜಲಾಶಯದ ನೀರಿನ ಒಳ ಹರಿವು ಹೆಚ್ಚಾಗಿದೆ.
ಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆ
ಕೊಡಗು ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾದರೆ ಮಾತ್ರ ಕೆಆರ್ ಎಸ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿ ಜಲಾಶಯ ಭರ್ತಿಯಾಗಲು ಸಾಧ್ಯವಿದೆ. ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ 1561 ಮಿ.ಮೀ.ನಷ್ಟು ಕಡಿಮೆ ಮಳೆಯಾಗಿದೆ.
ಹೀಗಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸುವ ಸಲುವಾಗಿ ಉಡುಪಿಯ ಪೇಜಾವರದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ತಲಕಾವೇರಿಯ ಉಗಮ ಸ್ಥಾನಕ್ಕೆ ಮಂಗಳವಾರ ಆಗಮಿಸಿದ್ದರು.
ಉಡುಪಿಯಲ್ಲಿ ಅತಿ ಹೆಚ್ಚು ಮಳೆ: ಇನ್ನೆರಡು ದಿನ ಭಾರಿ ಮಳೆ ಎಚ್ಚರಿಕೆ
ಮೊದಲಿಗೆ ಭಾಗಮಂಡಲಕ್ಕೆ ಆಗಮಿಸಿ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಸ್ವತಃ ವಿಶೇಷ ಪೂಜೆ ಸಲ್ಲಿಸಿದರು. ಆ ನಂತರ ಮಳೆಯ ನಡುವೆಯೇ ಅಲ್ಲಿಂದ ಎಂಟು ಕಿ.ಮೀ.ದೂರದಲ್ಲಿರುವ ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಬ್ರಹ್ಮಕುಂಡಿಕೆಯಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ನಾಡು ಸುಭೀಕ್ಷೆ ಹೊಂದಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮಡಿಕೇರಿಯಲ್ಲಿ ಭಾರೀ ಮಳೆ; ನಾಪೋಕ್ಲು-ಭಾಗಮಂಡಲ ರಸ್ತೆ ಮೇಲೆ ನೀರು
ಕಳೆದೊಂದು ದಿನದಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಭಾಗಮಂಡಲದಲ್ಲಿ 103.20 ಮಿ.ಮೀ. ಮಳೆ ಸುರಿದಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ 72.25 ಮಿ.ಮೀ ಮಳೆಯಾಗಿದ್ದು, ಈ ವ್ಯಾಪ್ತಿಯ ತೊರೆ, ಹೊಳೆಯಲ್ಲಿ ನೀರು ಹರಿಯುವಿಕೆ ಜಾಸ್ತಿಯಾಗಿದ್ದು, ಇವುಗಳೆಲ್ಲ ಕಾವೇರಿ ನದಿಗೆ ಸೇರುತ್ತಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭಾಗಮಂಡಲದಿಂದ ಹರಿಯುವ ನದಿ, ಜಿಲ್ಲೆಯ ಹಲವು ಪ್ರದೇಶಗಳನ್ನು ಕ್ರಮಿಸಿ ಕುಶಾಲನಗರದಿಂದ ಮುಂದಕ್ಕೆ ಹರಿಯುತ್ತಿದ್ದಂತೆಯೇ ಉಪನದಿಗಳು ಸೇರುವುದರಿಂದ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಮಂಗಳವಾರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿರುವುದು ಕಂಡು ಬರುತ್ತಿದೆ.
ಗರಿಷ್ಠ ಮಟ್ಟ 2859 ಅಡಿಯಿರುವ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಮಂಗಳವಾರ 2830.04 ಅಡಿಗೇರಿದೆ. ಒಳಹರಿವು ಹೆಚ್ಚಾಗಿದ್ದು ಸದ್ಯ 2335 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಒಟ್ಟಾರೆಯಾಗಿ ಕೊಡಗಿನಲ್ಲಿ ಮುಂಗಾರು ಚೇತರಿಕೆಗೊಂಡಿರುವುದು ಜನ ನೆಮ್ಮದಿಯುಸಿರು ಬಿಡುವಂತೆ ಮಾಡಿದೆ.