ಕೊಡಗಿನಲ್ಲೀಗ ಮಳೆ; ಎಲ್ಲೆಲ್ಲೂ ಭತ್ತ ನಾಟಿಯ ಸುಂದರ ದೃಶ್ಯ
ಮಡಿಕೇರಿ, ಜುಲೈ 21: ಕೊಡಗಿನಲ್ಲಿ ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಉತ್ತಮ ಮಳೆಯಾಗಿರುವ ಕಾರಣ ರೈತರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ನೀರಿನ ಆಶ್ರಯವಿರುವ ಬಹುತೇಕ ಕಡೆ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.
Recommended Video
ಈಗ ಜಿಲ್ಲೆಗೊಂದು ಸುತ್ತು ಬಂದರೆ ವಿಶಾಲ ಭತ್ತದ ಗದ್ದೆಗಳಲ್ಲಿ ಉಳುಮೆ ಮಾಡುವುದರಲ್ಲಿ, ಪೈರು ಕೀಳುವುದರಲ್ಲಿ ನಿರತರಾದ ದೃಶ್ಯಗಳು ಕಂಡು ಬರುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ನಾಟಿ ಕಾರ್ಯ ಸಂಪೂರ್ಣಗೊಳ್ಳಲಿದೆ. ಕಳೆದ ವರ್ಷ ನಾಟಿ ಕಾರ್ಯ ಪೂರ್ಣಗೊಂಡ ಬಳಿಕ ಆಗಸ್ಟ್ ತಿಂಗಳಲ್ಲಿ ಧಾರಾಕಾರವಾಗಿ ಮಳೆ ಸುರಿದು, ಪ್ರವಾಹ ಬಂದಿದ್ದರಿಂದ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಜಲಾವೃತವಾಗಿ ನಾಶವಾಗಿದ್ದವು.
ಕೊಡಗಿನಲ್ಲಿ ಭಾರೀ ಮಳೆ; ಹಾರಂಗಿಯಿಂದ 5,000 ಕ್ಯೂಸೆಕ್ ನೀರು ಬಿಡುಗಡೆ
ಇದೀಗ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದರೆ, ಕಾವೇರಿ ನದಿ ನೀರಿನ ಮಟ್ಟವೂ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ, ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 36.03 ಮಿ.ಮೀ. ಮಳೆ ಸುರಿದಿದೆ. ತಾಲೂಕುವಾರು ಮಳೆಯ ಪ್ರಮಾಣವನ್ನು ನೋಡುವುದಾದರೆ ಮಡಿಕೇರಿ ತಾಲೂಕಿನಲ್ಲಿ 44.08 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 37.33 ಮಿ.ಮೀ. ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 26.67 ಮಿ.ಮೀ. ಮಳೆ ಸುರಿದಿದೆ.
ಇನ್ನು ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಸದ್ಯ 5,056 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿಗೆ 4,104 ಕ್ಯುಸೆಕ್ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗುತ್ತಿದೆ.