ಕೊಡಗಿನಲ್ಲಿ ಆದಿವಾಸಿಗಳ ಗುಡಿಸಲು ಕಿತ್ತು ಹಾಕಿದ ಅಧಿಕಾರಿಗಳು: ಪ್ರಶ್ನಿಸಿದ ಯುವಕನಿಗೆ ಥಳಿತ
ಮಡಿಕೇರಿ, ಫೆಬ್ರವರಿ 05: ಕೊಡಗಿನ ವಿರಾಜಪೇಟೆ ತಾಲೂಕಿನಲ್ಲಿ ಲೈನ್ ಮನೆಗಳಲ್ಲಿ ವಾಸವಿದ್ದ ಆದಿವಾಸಿ ಮತ್ತು ದಲಿತ ವಸತಿ ರಹಿತ ಗುಡಿಸಲುಗಳನ್ನು ಕಿತ್ತುಹಾಕಿ, ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.
ವಿರಾಜಪೇಟೆ ತಾಲೂಕಿನ ಬಾಳಗೋಡು ಗ್ರಾಮದ ಸರ್ವೆ ನಂ.337/1ರ ಸರ್ಕಾರಿ ಜಾಗದಲ್ಲಿ ಆದಿವಾಸಿಗಳು ಸುಮಾರು 45 ದಿನಗಳಿಂದ ಗುಡಿಸಲುಗಳನ್ನು ಕಟ್ಟಿಕೊಂಡು ಹಕ್ಕುಪತ್ರಕ್ಕಾಗಿ ಆಗ್ರಹಿಸಿ ನಿರಂತರ ಸತ್ಯಾಗ್ರಹ ನಡೆಸುತ್ತ ಬಂದಿದ್ದರು. ಸುಮಾರು 57 ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮುದಾಯದ ಕುಟುಂಬಗಳು ಹೋರಾಟ ನಡೆಸುತ್ತಿದ್ದವು. ಬಾಳುಗೋಡಿನ ಸರ್ವೇನಂಬರ್ 337/1 ರಲ್ಲಿರುವ 30 ಎಕರೆ ಸರ್ಕಾರಿ ಪೈಸಾರಿ ಜಾಗದ ಪೈಕಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದರು. ಇಂದು ಮಧ್ಯಾಹ್ನ ಅವರ ಮನೆಗಳ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ.
ಹೋರಾಟ ಸಮಿತಿ ಕಾರ್ಯಕರ್ತ ಹೇಮಂತ್ ಮೇಲೆ ಹಲ್ಲೆ
ತಾಲೂಕಿನ ವಿವಿಧ ಠಾಣೆಗಳ ಪೊಲೀಸರು ಮತ್ತು ಕೆಲವು ಗೂಂಡಾಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದ ತಾಲೂಕು ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕ ಸ್ಥಳೀಯ ನಿವಾಸಿಗಳಿಗೆ ಅವಕಾಶವನ್ನೇ ಕೊಡದಂತೆ ಏಕಾಏಕಿ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ. ಇದಕ್ಕೆ ಪ್ರತಿರೋಧಿಸಿದ ಭೂಮಿ-ವಸತಿ ಹೋರಾಟ ಸಮಿತಿ ಕಾರ್ಯಕರ್ತ ಹೇಮಂತ್ ಅವರ ಮೇಲೂ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಚಿಕ್ಕಮಗಳೂರು: ರಾತ್ರೋರಾತ್ರಿ ಪ್ರತ್ಯಕ್ಷವಾದ ಅಂಬೇಡ್ಕರ್ ಪ್ರತಿಮೆ ತೆರವು
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಆದೇಶ?
ಈ ದೌರ್ಜನ್ಯ ವಿರಾಜಪೇಟೆಯ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಅವರ ನೇರ ಆದೇಶದಿಂದ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ ಸ್ಥಳೀಯರು. ಈ ದೇಶದ ಮೂಲ ನಿವಾಸಿಗಳಿಗೆ ಬದುಕಲು, ನೆಲೆಸಲು ಒಂದು ಜಾಗವನ್ನೂ ಕೊಡದೇ, ಪರ್ಯಾಯ ಜಗವನ್ನೂ ನೀಡದೇ ಸ್ಥಳೀಯ ಶಾಸಕರು ಗುಡಿಸಲು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಬಡ ಭೂರಹಿತರಿಗೆ ನೆಲೆ ಒದಗಿಸದೆ, ಅವರೇ ಸರಕಾರಿ ಜಾಗ ಹುಡುಕಿ ಗುಡಿಸಲು ಹಾಕಿಕೊಂಡಾಗ ಅದನ್ನೆಲ್ಲ ಧ್ವಂಸ ಮಾಡಿಸಿದ್ದರು. ಸಮೀಪದ ಹಳ್ಳಿಗಟ್ಟುವಿನಲ್ಲೂ ಇದೇ ರೀತಿ ಮಾಡಿದ್ದರು ಎಂದು ದೂರಿದ್ದಾರೆ.
ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವ ಯೋಜನೆ
ಇದೇ ರೀತಿ ನಾಲ್ಕು ವರ್ಷಗಳ ಹಿಂದೆ 2016 ರಲ್ಲಿ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರು ಸ್ವಂತ ಸೂರಿಗಾಗಿ ಆಹೋರಾತ್ರಿ ಮತ್ತು ಬೆತ್ತಲೆ ಹೋರಾಟ ಮಾಡಿ ಇಡೀ ದೇಶದ ಗಮನಸೆಳೆದಿದ್ದರು. ಇದೀಗ ಅದೇ ಮಾದರಿಯ ಮತ್ತೊಂದು ಹೋರಾಟ ಆರಂಭಗೊಂಡಿದ್ದು, ಬುಡಕಟ್ಟು ಮತ್ತು ದಲಿತ ಸಮುದಾಯದ ಸುಮಾರು 200 ಮಂದಿ ಹೋರಾಟ ನಡೆಸುತ್ತಿದ್ದಾರೆ. ಈ ಬಡ ಜನರ ಗುಡಿಸಲುಗಳನ್ನು ತೆರವುಗೊಳಿಸಿ ಇದೇ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡಬೇಕೆಂದು ಜಿಲ್ಲಾಡಳಿತದ ಯೋಜನೆಯಾಗಿದೆ. ಅದಕ್ಕಾಗಿ ಇಂದು ತೆರವು ಕಾರ್ಯಚರಣೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ಜಾಗದಲ್ಲಿ ಸದ್ಯಕ್ಕೆ ವಾಸವಿದ್ದ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ 57 ಕುಟುಂಬಗಳ ಸುಮಾರು 200ಕ್ಕೂ ಹೆಚ್ಚು ಜನ ನೆಲೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ತಮ್ಮ ಮೇಲಾದ ಏಕಾಏಕಿ ದಾಳಿಯಿಂದ ದಿಕ್ಕುತೋಚದೆ ಜನ ಕಂಗಾಲಾಗಿದ್ದಾರೆ.
ಅನುದಾನ ನಂಬಿ ಹಳೆ ಮನೆ ಕೆಡವಿದರು, ದನದ ಕೊಟ್ಟಿಗೆಯಲ್ಲೇ ಉಳಿದರು
ಕ್ರಮಕ್ಕೆ ವಸತಿ ರಹಿತರ ಆಗ್ರಹ
ಈ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದ ದಲಿತ, ಆದಿವಾಸಿ ಕುಟುಂಬಗಳು ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿರಲಿಲ್ಲ. ಈಗ ಏಕಾಏಕಿ ಪೋಲೀಸರನ್ನು ಕರೆದುಕೊಂಡು ಬಂದು ಬಡವರನ್ನು ಬೆದರಿಸಿ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲ್ಲೆ, ದೌರ್ಜನ್ಯ ನಡೆಸಿದವರ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕು ಮತ್ತು ವಸತಿ ರಹಿತರಿಗೆ ಅದೇ ಸರಕಾರಿ ಜಾಗದಲ್ಲಿ ಜಾಗ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.