ಇನ್ಮುಂದೆ ಅಬ್ಬಿಫಾಲ್ಸ್ ಗೆ ಲಘು ವಾಹನಗಳಲ್ಲಿ ತೆರಳಬಹುದು
Recommended Video
ಮಡಿಕೇರಿ, ಅಕ್ಟೋಬರ್.01: ಆಗಸ್ಟ್ ನಲ್ಲಿ ಸಂಭವಿಸಿದ ಜಲಪ್ರಳಯದಿಂದಾಗಿ ಎಲ್ಲೆಂದರಲ್ಲಿ ರಸ್ತೆಗಳು ಕುಸಿದು ಸಂಚಾರ ಬಂದ್ ಗೊಂಡ ಕಾರಣ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಜೊತೆಗೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿತ್ತು.
ಇದೀಗ ಕೊಡಗಿನಲ್ಲಿ ರಸ್ತೆ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿರುವ ಪರಿಣಾಮ ಮತ್ತು ಕೆಲವೆಡೆಗಳಲ್ಲಿ ಲಘು ವಾಹನಗಳು ತೆರಳುವಷ್ಟರ ಮಟ್ಟಿಗೆ ರಸ್ತೆಯನ್ನು ದುರಸ್ತಿಪಡಿಸಲಾಗಿರುವುದರಿಂದ ಕೆಲವು ಪ್ರವಾಸಿ ತಾಣಗಳಿಗೆ ಲಘು ವಾಹನಗಳಲ್ಲಿ ತೆರಳಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.
ಪ್ರವಾಸಿಗರು ಅಬ್ಬಿ ಫಾಲ್ಸ್ಗೆ ಭೇಟಿ ನೀಡಲು ಇದ್ದ ನಿಷೇಧ ತೆರವು
ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಭೂಕುಸಿತಕ್ಕೊಳಗಾಗಿ ಮೂಲ ಸ್ಥಿತಿಯನ್ನೇ ಕಳೆದುಕೊಂಡಿವೆ. ಇಲ್ಲಿಗೆ ರಸ್ತೆ ಸೌಲಭ್ಯ ಕಲ್ಪಿಸುವುದು ಅಷ್ಟು ಸುಲಭವಲ್ಲ. ಆದರೂ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ.
ಮಡಿಕೇರಿ ಬಳಿಯ ಅಬ್ಬಿಫಾಲ್ಸ್ ಜಲಪಾತ ವೀಕ್ಷಿಸಲು ಹೆಚ್ಚಿನ ಜನ ಮುಗಿ ಬೀಳುತ್ತಾರೆ. ಈ ಜಲಪಾತವನ್ನು ನೋಡಲೆಂದೇ ಜನ ಬರುತ್ತಿದ್ದರು. ಆದರೆ ಇಲ್ಲಿಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಪ್ರವಾಸಿಗರ ಹಿತದೃಷ್ಠಿಯಿಂದ ಅಬ್ಬಿ ಜಲಪಾತ ಹಾಗೂ ಮಾಂದಲ್ ಪಟ್ಟಿಗೆ ತೆರಳದಂತೆ ನಿರ್ಬಂಧ ಹೇರಲಾಗಿತ್ತು.
ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ!
ಆದರೆ ಈಗ ಪ್ರವಾಸಿಗರಿಗೆ ಆ ನಿರ್ಬಂಧ ಇಲ್ಲ. ಅದರೂ ಕೆಲವು ಕಡೆ ಎಚ್ಚರವಹಿಸಬೇಕಿದೆ. ಈ ಕುರಿತ ಸಂಕ್ಷಿಪ್ತ ಲೇಖನ ಇಲ್ಲಿದೆ...
ಲಘು ವಾಹನಗಳ ಮೂಲಕ ತೆರಳಿ
ಸಂಪರ್ಕ ರಸ್ತೆಯ ತುರ್ತು ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಮಾಡಿ ಮುಗಿಸಿದ್ದು, ಲಘು ವಾಹನ ಸಂಚಾರಯೋಗ್ಯ ರಸ್ತೆ ನಿರ್ಮಾಣವಾಗಿದೆ. ಹೀಗಾಗಿ ಇನ್ನು ಮುಂದೆ ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಲಘು ವಾಹನಗಳ ಮೂಲಕ ತೆರಳಬಹುದಾಗಿದೆ.
ಬರುತ್ತಿದ್ದಾರೆ ಪ್ರವಾಸಿಗರು
ಇನ್ನು ಅಕ್ಟೋಬರ್ ತಿಂಗಳಲ್ಲಿ ರಜೆ ಬರುವುದರಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆಯಿದೆ. ಜತೆಗೆ ಕಾವೇರಿ ತೀರ್ಥೋದ್ಭವ, ದಸರಾ ಹೀಗೆ ಜಾತ್ರೆಗಳು ನಡೆಯುವುದರಿಂದ ಸದಾ ಕೊಡಗಿನತ್ತ ಜನರ ದೌಡು ಹೆಚ್ಚಾಗಿಯೇ ಇರಲಿದೆ.
ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ
ಮನವಿ ಮಾಡಿದ ಜಿಲ್ಲಾಧಿಕಾರಿ
ಈಗಾಗಲೇ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಕಾರ್ಯವನ್ನು ಜಿಲ್ಲಾಡಳಿತ ತ್ವರಿತಗತಿಯಲ್ಲಿ ನಡೆಸುತ್ತಿದ್ದು, ಇದಕ್ಕೆ ತೊಂದರೆಯಾಗದಂತೆ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸುವಂತೆಯೂ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮನವಿ ಮಾಡಿದ್ದಾರೆ.
ಎಚ್ಚರಿಕೆ ವಹಿಸಿ
ನಗರ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರವಾಸಿತಾಣಗಳಿಗೆ ತೆರಳುವ ಪ್ರವಾಸಿಗರು ಮೊದಲೇ ಮಾಹಿತಿ ಪಡೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಮಳೆಯ ಕಾರಣ ಬಹುತೇಕ ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.