ತಲಕಾವೇರಿ: ಬ್ರಹ್ಮಗಿರಿ ಬೆಟ್ಟವನ್ನೇರಲು ನಿರ್ಬಂಧ ಇಲ್ಲ!
ಮಡಿಕೇರಿ, ಸೆಪ್ಟೆಂಬರ್ 30: ಕಾವೇರಿ ತೀರ್ಥೋದ್ಭವದಂದು ತಲಕಾವೇರಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಅವಕಾಶ ಮಾಡಿಕೊಡಬಾರದು ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಬಿಗಿಭದ್ರತೆಯಲ್ಲಿ ಅವಕಾಶ ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದೆ.
ಇಷ್ಟಕ್ಕೂ ಬ್ರಹ್ಮಗಿರಿ ಬೆಟ್ಟಕ್ಕೆ ಏಕೆ ಅವಕಾಶ ಕೊಡಬಾರದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದಲ್ಲವೆ? ಇದಕ್ಕೆ ಕಾರಣವೂ ಇದೆ. ತಲಕಾವೇರಿ ಬ್ರಹ್ಮಕುಂಡಿಕೆಯಿಂದ ಬಲಭಾಗಕ್ಕೆ ಬೆಟ್ಟವಿದ್ದು ಇದನ್ನೇರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲು ಹತ್ತಿ ಬೆಟ್ಟದ ಮೇಲೆ ಹೋದರೆ ಸುಂದರ ರಮಣೀಯ ದೃಶ್ಯವನ್ನು ನೋಡಬಹುದು.[ಮಳೆ ಕಡಿಮೆ ಆಗಿದ್ದಕ್ಕೆ ತಲಕಾವೇರಿಗಾದ ಅಪಚಾರ ಕಾರಣವೇ?]
ಆದರೆ ದೂರದಿಂದ ಬರುವ ಕೆಲವು ಪ್ರವಾಸಿಗರು ಬೆಟ್ಟವನ್ನೇರಿ ಹೋಗಿ ಅಲ್ಲಿನ ವಿಶಾಲ ಸ್ಥಳದಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿ, ನೈತಿಕತೆಯನ್ನು ಮರೆತು ವರ್ತಿಸುತ್ತಾರೆ. ಇದರಿಂದ ಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಹೀಗಾಗಿ ಬ್ರಹ್ಮಗಿರಿ ಬೆಟ್ಟದ ಪ್ರವೇಶಕ್ಕೆ ನಿರ್ಬಂಧ ಹೇರುವ ತೀರ್ಮಾನ ಕೈಗೊಳ್ಳಲಾಗಿತ್ತು.
ಆದರೆ, ಬ್ರಹ್ಮಗಿರಿ ಬೆಟ್ಟವನ್ನು ಏರಲು ಸೂಕ್ತ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲು ಭಾಗಮಂಡಲದಲ್ಲಿ ನಡೆದ ಕಾವೇರಿ ತೀರ್ಥೋದ್ಭವ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನಿರ್ಬಂಧ ವಿಧಿಸಿದಕ್ಕೆ ಸ್ಥಳೀಯ ಮುಖಂಡರಾದ ನಾರಾಯಣಾಚಾರ್, ಹೊಸೂರು ಸತೀಶ್ ಜೋಯಪ್ಪ, ಹೊಸೂರು ರಮೇಶ್ ಜೋಯಪ್ಪ, ಹರೀಶಾಚಾರ್ಯ ಮತ್ತಿತರರು ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.[ಕಾವೇರಿ ಸಮಸ್ಯೆ ಕಾವೇರಿಯಿಂದಲೇ ಪರಿಹಾರ ಕಾಣಬೇಕು]
ಅಲ್ಲದೆ ಬ್ರಹ್ಮಗಿರಿ ಬೆಟ್ಟ ಏರುವುದು ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದ ಕ್ರಮವಾಗಿದ್ದು, ಒಂದು ವೇಳೆ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೇ ಆದಲ್ಲಿ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಆಗುತ್ತದೆ. ಇದುವರೆಗೂ ಅಲ್ಲಿ ಯಾವುದೇ ಅನಾಹುತ ನಡೆದಿಲ್ಲ. ಹೀಗಿರುವಾಗ ಪ್ರವೇಶ ನಿರ್ಬಂಧಿಸುವದು ಸರಿಯಲ್ಲ ಎಂದು ನುಡಿದರು.
ಈ ಬಗ್ಗೆ ಚರ್ಚೆಗಳು ನಡೆದು ಕೊನೆಯಲ್ಲಿ ಪ್ರತಿಕ್ರಿಯಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸುವುದರೊಂದಿಗೆ ಬ್ರಹ್ಮಗಿರಿ ಬೆಟ್ಟ ಏರಲು ಭಕ್ತರಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು. ಬ್ರಹ್ಮಗಿರಿ ಬೆಟ್ಟದಲ್ಲಿ ಯಾವುದೇ ಅನಾಚಾರವಾಗದಂತೆ ದೇವಾಲಯ ಸಮಿತಿಯೊಂದಿಗೆ ಸ್ಥಳೀಯರು ಕೂಡ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದರು.