"ಕೊಡಗು-ಕೇರಳ ರಾಷ್ಟೀಯ ಹೆದ್ದಾರಿ ಬಂದ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ"
ಮಡಿಕೇರಿ, ಏಪ್ರಿಲ್ 02: ಕೇರಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನ ವಕೀಲರ ಸಂಘ ಸಲ್ಲಿಸಿದ್ದ ದೂರಿನ ವಿಚಾರಣೆ ಕೈಗೊಂಡ ಕೇರಳ ಹೈಕೋರ್ಟ್, ಮಧ್ಯಂತರ ಆದೇಶ ನೀಡಿದೆ.
ರಾಷ್ಟ್ರೀಯ ಹೆದ್ದಾರಿಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ. ಹೀಗಾಗಿ ಕೇರಳ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಕೇರಳ ಹೈಕೋರ್ಟ್, ಕೇಂದ್ರ ಸರ್ಕಾರ ತಡಮಾಡದೇ ರಾಷ್ಟ್ರೀಯ ಹೆದ್ದಾರಿ ಬಂದ್ ಅನ್ನು ಕೂಡಲೇ ತೆರವುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕೊಡಗು ಜಿಲ್ಲಾಡಳಿತದಿಂದ ಹೊರ ಹೋಗಲು, ಬರಲು ಪಾಸ್ ವಿತರಣೆ
ಕರ್ನಾಟಕದ ಎಲ್ಲಾ ಗಡಿ ಬಂದ್ ಮಾಡಿರುವುದರಿಂದಾಗಿ ಕೇರಳಿಗರಿಗೆ ಸಮಸ್ಯೆಯಾಗಿದೆ ಎಂದು ಕೇರಳ ಹೈಕೋರ್ಟ್ ವಕೀಲರ ಸಂಘ ಅರ್ಜಿಯಲ್ಲಿ ಆಕ್ಷೇಪಿಸಿತ್ತು. ಕೇರಳದ ಸರ್ಕಾರಿ ಬಸ್, ಆಂಬುಲೆನ್ಸ್, ಸರಕು ಸಾಗಣೆ ಲಾರಿಗಳನ್ನು ಗಡಿ ಮೂಲಕ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಸಾಂವಿಧಾನಿಕವಾಗಿ ಗಡಿ ಬಂದ್ ನಿರ್ಧಾರ ಸರಿಯಲ್ಲ. ಜನರ ಮೂಲ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಲಾಗಿತ್ತು.
ಕೇರಳ ಹೈಕೋರ್ಟ್ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಕೆ.ಜೈಶಂಕರ್ ನಂಬಿಯಾರ್ ಮತ್ತು ಪಿ.ಚಾರ್ಲಿ ಅವರು ಆನ್ ಲೈನ್ ಮೂಲಕ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಮೂರು ವಾರಗಳ ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಆದರೆ ಇದು ಕೊಡಗಿಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ. ಕಳೆದ 5 ದಿನಗಳಿಂದ ಕೊಡಗಿನ ಮಾಕುಟ್ಟ, ಕುಟ್ಟ, ಕರಿಕೆ ಸೇರಿದಂತೆ ಮಂಗಳೂರು ಸಂಪರ್ಕದ ಕಾಸರಗೋಡು ಹೆದ್ದಾರಿ ಗಡಿ ಬಂದ್ ಮಾಡಲಾಗಿದೆ. "ಕೊಡಗಿನ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೊಡಗು - ಕೇರಳ ಗಡಿ ಬಂದ್ ಮಾಡಬೇಕಾಯಿತು. ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದಾಗಿ ಕೊಡಗಿಗೆ ಪಕ್ಕದ ರಾಜ್ಯವಾದ ಕೇರಳದಿಂದ ಸೋಂಕು ವ್ಯಾಪಿಸದಂತೆ ಈ ಕ್ರಮ ಅನಿವಾಯ೯ವಾಗಿದೆ" ಎಂದು ಬೋಪಯ್ಯ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಕೊಡಗು- ಕೇರಳ ಗಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಇಲ್ಲಿ ಬಂದ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಲಿರುವುದಾಗಿ ತಿಳಿದುಬಂದಿದೆ.