ಕೊಡಗಿನ ಜನ ಈ ವರ್ಷ ನೆಮ್ಮದಿಯುಸಿರು ಬಿಟ್ಟಿದ್ದೇಕೆ?
ಮಡಿಕೇರಿ, ಆಗಸ್ಟ್ 16: ಕೊಡಗಿನ ಜನ ಈ ಬಾರಿಯ ಮಳೆಗಾಲದಲ್ಲಿ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆ ಸಣ್ಣಪುಟ್ಟ ಅನಾಹುತಗಳನ್ನು ಸೃಷ್ಟಿಸಿದ್ದರೂ, ಕಳೆದ ಮೂರು ವರ್ಷಗಳಿಂದ ನಡೆದ ಮಾನವ ಬಲಿ ಪಡೆಯುವ ಗುಡ್ಡ ಕುಸಿತ ಇದುವರೆಗೆ ಸಂಭವಿಸದೆ ಇರುವುದು ಖುಷಿಯ ವಿಚಾರವಾಗಿದೆ.
2018ರಿಂದ 2020ರವರೆಗೆ ಪ್ರತಿ ಮಳೆಗಾಲದಲ್ಲಿ ಅದರಲ್ಲೂ, ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿದು ಬೆಟ್ಟ- ಗುಡ್ಡಗಳು ಕುಸಿದು ಮಾನವರ ಬಲಿ ಪಡೆದಿತ್ತು. ಹೀಗಾಗಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಜನ ಮಳೆಗಾಲವೆಂದರೆ ಆತಂಕ ಪಡುತ್ತಿದ್ದರು. ಅಷ್ಟೇ ಅಲ್ಲ ಆಗಸ್ಟ್ ತಿಂಗಳೆಂದರೆ ಭೀತಿಗೊಳಗಾಗುತ್ತಿದ್ದರು. ಪ್ರತಿ ಮಳೆಗಾಲದಲ್ಲಿಯೂ ಕಾವೇರಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ಜನ ಜೀವನ ಅಸ್ತವ್ಯಸ್ತವಾಗುವುದುರ ಜೊತೆಗೆ ಬೇರೆ ಬೇರೆ ಕಾರಣಗಳಿಂದ ಕೋಟ್ಯಂತರ ರೂ. ನಷ್ಟವಾಗುತ್ತಿತ್ತು. ಈ ಬಾರಿಯೂ ಮಳೆಯಿಂದ ಕಷ್ಟ- ನಷ್ಟಗಳು ಸಂಭವಿಸಿದೆಯಾದರೂ ಗುಡ್ಡ ಕುಸಿತದಂತಹ ದುರಂತ ಸಂಭವಿಸಿಲ್ಲ (ಮುಂದೆಯೂ ಸಂಭವಿಸದಿರಲಿ) ಎನ್ನುವುದು ಎಲ್ಲರಲ್ಲೂ ನೆಮ್ಮದಿ ತಂದಿದೆ.
ಕಳೆದ ವರ್ಷಕ್ಕಿಂತ 53 ಮಿ.ಮೀ. ಅಧಿಕ ಮಳೆ
ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳು ನಡು ಮಳೆಗಾಲದ ಅವಧಿಯಾಗಿದ್ದು, ಈ ಸಮಯದಲ್ಲಿ ಅದರಲ್ಲೂ ಆಗಸ್ಟ್ 15ರ ಒಳಗೆ ಮಳೆ ಜಾಸ್ತಿ ಜತೆಗೆ ಹಾನಿಗಳು ಕೂಡ ಅಧಿಕ. ಕಳೆದ ಮೂರು ವರ್ಷಗಳ ಮಳೆಗಾಲದ ದುರಂತಗಳನ್ನು ಮೆಲುಕು ಹಾಕಿ ನೋಡಿದರೆ ಎಲ್ಲವೂ ಇದೇ ಅವಧಿಯಲ್ಲಿಯೇ ಸಂಭವಿಸಿರುವುದು ತಿಳಿಯುತ್ತದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಸುಮಾರು 53 ಮಿ.ಮೀ. ಮಳೆ ಹೆಚ್ಚು ಸುರಿದಿದೆ. ಮುಂದಿನ ದಿನಗಳಲ್ಲಿ ಅಂದರೆ ಅಕ್ಟೋಬರ್ ತನಕವೂ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಯ ಕೊರತೆ ಜಿಲ್ಲೆಗೆ ಆಗದಿದ್ದರೂ ಕೆಆರ್ಎಸ್ ಜಲಾಶಯ ಭರ್ತಿಯಾಗಲು ಇನ್ನಷ್ಟು ಸಮಯ ಬೇಕಾಗಬಹುದೇನೋ?
2017ರಲ್ಲಿ ಹಿಂಗಾರು ಮಳೆ ಅಬ್ಬರಿಸಿತ್ತು
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಉತ್ತಮವಾಗಿ ಮಳೆಯಾಗಿರುವ ಕಾರಣ ಭತ್ತದ ನಾಟಿ ಬಹುತೇಕ ಪೂರ್ಣಗೊಂಡಿದೆ. ಇನ್ನು ಮಳೆಯ ಕಾರಣ ಕಾಫಿ ಮತ್ತು ಕರಿಮೆಣಸಿಗೆ ಹಾನಿಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಜನ ಮಳೆ ಒಂದಷ್ಟು ಬಿಡುವು ನೀಡಲೆಂದು ಕಾಯುತ್ತಿದ್ದಾರೆ. ಮಳೆ ಕಡಿಮೆ ಪ್ರಮಾಣದಲ್ಲಿ ಸುರಿದರೆ ತೊಂದರೆಯಿಲ್ಲ. ಆದರೆ 2017ರಲ್ಲಿ ಮುಂಗಾರಿಗಿಂತ ಹಿಂಗಾರಿನಲ್ಲಿಯೇ ಹೆಚ್ಚು ಮಳೆ ಸುರಿದು ಕೆರೆ- ಕಟ್ಟೆಗಳು ತುಂಬಿದ್ದವು. ಅದೇನಾದರೂ ಪುನರಾವರ್ತನೆಯಾದರೆ ಜಿಲ್ಲೆಯ ಜನ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.
ಜಿಲ್ಲೆಯಲ್ಲಿ ಸುರಿದ ಮಳೆಯ ವಿವರಗಳು
ಸದ್ಯದ ಮಳೆಯ ಪ್ರಮಾಣವನ್ನು ನೋಡುವುದಾದರೆ ಕೊಡಗು ಜಿಲ್ಲೆಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 9.64 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 17.93 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1931.55 ಮಿ.ಮೀ. ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1878.21 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಈ ಬಾರಿ 2693.15 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2607.67 ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಇಲ್ಲಿಯವರೆಗೆ 1532.64 ಮಿ.ಮೀ. ಮಳೆ ಸುರಿದಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1778.54 ಮಿ.ಮೀ. ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಲ್ಲಿಯವರೆಗಿನ ಮಳೆ 1568.85 ಮಿ.ಮೀ. ಮಳೆಯಾಗಿದ್ದರೆ ಕಳೆದ ವರ್ಷ 1248.41 ಮಿ.ಮೀ. ಮಳೆ ಸುರಿದಿರುವುದನ್ನು ಗಮನಿಸಬಹುದು.
Recommended Video
ಹಾರಂಗಿಗೆ 5387 ಕ್ಯುಸೆಕ್ ಒಳಹರಿವು
ಗರಿಷ್ಠ 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ ಸದ್ಯ 2857.81 ಅಡಿಗಳಷ್ಟು ನೀರಿನ ಪ್ರಮಾಣವಿದ್ದು, 5387 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ 1850 ಕ್ಯುಸೆಕ್ ನದಿಗೆ ಹಾಗೂ 250 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ.