Exclusive; ಸರ್ಕಾರಿ ದಾಖಲೆಗಳಿಲ್ಲದ ಮಹಾತ್ಮ ಗಾಂಧಿ ಬೇಳೂರಿನ ಭೇಟಿ
ಮಡಿಕೇರಿ, ಮಾರ್ಚ್ 26; ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು 1934ರಲ್ಲಿ ಕೊಡಗಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿಯ ಮಂಜುನಾಥಯ್ಯ ಮನೆಯಲ್ಲಿ ತಂಗಿದ್ದರು ಎಂಬುದಕ್ಕೆ ಸರ್ಕಾರದ ದಾಖಲೆಗಳೂ ಇವೆ. ಆದರೆ, ಅಲ್ಲಿ ತಂಗುವುದಕ್ಕೂ ಮೊದಲು ಬೇಳೂರು ಬಾಣೆಯ ಪಕ್ಕದಲ್ಲೇ ಇರುವ ಬಿ. ಬಿ. ಗುರಪ್ಪ ಮನೆಗೂ ಭೇಟಿ ನೀಡಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಅಷ್ಟೇ ಅಲ್ಲ ಜಿಲ್ಲೆಯ ಯಾವುದೇ ದಾಖಲೆಗಳಲ್ಲೂ ಇಲ್ಲ.
ಗಾಂಧೀಜಿ ಗುರಪ್ಪ ಮನೆಗೆ ಭೇಟಿ ನೀಡುವುದಕ್ಕೂ ಒಂದು ಬಲವಾದ ಕಾರಣವಿದೆ. ಇದು ಅಕಾಸ್ಮಾತ್ ಒಲಿದು ಬಂದ ಅದೃಷ್ಟ ಆಗಿದೆ. ಗುರಪ್ಪ ಸಕಲೇಶಪುರದ ಶಾಸಕರಾಗಿದ್ದ ಬಿ. ಬಿ. ಶಿವಪ್ಪ ಸಹೋದರ. ವಾಸ್ತವವಾಗಿ ಸೋಮವಾರಪೇಟೆಗೆ ಅಂದು ಗಾಂಧೀಜಿ ಭೇಟಿ ನೀಡುವ ಕಾರ್ಯಕ್ರಮ ಆಯೋಜನೆ ಮಾಡುವ ಸಂದರ್ಭದಲ್ಲಿ ಡಿ. ವಿನೋದ್ ಶಿವಪ್ಪ ಅಜ್ಜಿ ಬಸವೇಶ್ವರ ರಸ್ತೆಯಲ್ಲಿರುವ ಶ್ರೀಮತಿ ದೊಡ್ಡಮನೆ ಸಾಕಮ್ಮ ಮನೆಯಲ್ಲಿ ತಂಗುವುದೆಂದು ಯೋಜಿಸಲಾಗಿತ್ತು.
ದಾವಣಗೆರೆಯಲ್ಲಿ ನಿರ್ಮಾಣವಾಗುತ್ತಿದೆ 3 ಕೋಟಿ ವೆಚ್ಚದ 'ಗಾಂಧಿ ಭವನ'
ಆ ಸಮಯದಲ್ಲೇ ಅವರು ಕೊಡಗಿನ ಮೊಟ್ಟ ಮೊದಲ ಮಹಿಳಾ ಉದ್ಯಮಿ ಮತ್ತು ಕಾಫಿ ರಫ್ತುದಾರೆ ಎಂದೂ ಗುರುತಿಸಿಕೊಂಡಿದ್ದರು. ಸಾವಿರಾರು ಎಕರೆ ಕಾಫಿ ತೋಟ ಹೊಂದಿದ್ದ ಅವರು ಆಗ ಕಾಫಿಯನ್ನು ಇಂಗ್ಲೆಂಡ್ಗೆ ರಫ್ತು ಮಾಡುತಿದ್ದರಲ್ಲದೆ ಬೆಂಗಳೂರಿಗೂ ಕಾಫಿಯನ್ನು ಪರಿಚಯಿಸಿದ ಖ್ಯಾತಿ ಹೊಂದಿದ್ದರು.
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
ಆಗ ಸ್ವಾತಂತ್ರ್ಯ ಹೋರಾಟ ದಿನೇ ದಿನೇ ಕಾವು ಪಡೆಯುತಿತ್ತು. ಗಾಂಧೀಜಿಯವರು ಹೋದಲ್ಲೆಲ್ಲ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಚಳವಳಿಗೆ ತಡೆ ಒಡ್ಡುವುದೇ ಬ್ರಿಟಿಷರ ಕೆಲಸವಾಗಿತ್ತು. ಸಾಕಮ್ಮ ಮನೆಗೆ ಗಾಂಧಿ ಭೇಟಿ ಕೊಡುವ ವಿಷಯ ತಿಳಿದಿದ್ದೇ ತಡ ಬ್ರಿಟಿಷರು ಸಾಕಮ್ಮ ಗಾಂಧಿಜಿಗೆ ಆಶ್ರಯ ನೀಡಿದರೆ ನಿಮ್ಮೊಂದಿಗಿನ ಕಾಫಿ ವ್ಯಾಪಾರವನ್ನು ಕಡಿದುಕೊಳ್ಳುವುದಾಗಿ ಬೆದರಿಕೆ ಒಡ್ಡಿದರು. ಬೆದರಿಕೆಗೆ ಮಣಿದ ಸಾಕಮ್ಮ ಆತಿಥ್ಯಕ್ಕೆ ಹಿಂದೇಟು ಹಾಕಿದರು ಎಂಬ ಮಾಹಿತಿ ಇದೆ.
ಆ ಸಮಯದಲ್ಲಿ ಆಯೋಜಕರು ಬೇಳೂರು ಬಾಣೆ ಪಕ್ಕದ ಬಿ. ಬಿ. ಗುರಪ್ಪ ಮನೆಯಲ್ಲಿ ಆತಿಥ್ಯಕ್ಕೆ ಏರ್ಪಾಡು ಮಾಡಿದರು. ಆದರೆ, ಗಾಂಧೀಜಿ ಭೇಟಿಯ ಅಭೂತಪೂರ್ವ ಕ್ಷಣಗಳಿಗೆ ಏಕೈಕ ಸಾಕ್ಷಿ ಆಗಿದ್ದ ಗುರಪ್ಪ ಪತ್ನಿ ಗಂಗಮ್ಮ (101) ಶತಾಯುಷಿಗಳಾಗಿ 2015ರಂದು ಅದೇ ಮನೆಯಲ್ಲಿ ನಿಧನರಾದರು. ಗಂಗಮ್ಮ ಸಕಲೇಶಪುರದ ಐಗೂರಿನವರಾಗಿದ್ದು 3ನೇ ತರಗತಿವರೆಗೂ ಓದಿದ್ದರು. ಗಾಂಧೀಜಿ ಬಂದಾಗ ಅವರಿಗೆ 19 ವರ್ಷ ವಯಸ್ಸು. 16ನೇ ವಯಸ್ಸಿಗೆ ಮದುವೆ ಆದ ಅವರಿಗೆ ಆಗಲೇ ಒಬ್ಬ ಮಗನಿದ್ದ.
ಮಹಾತ್ಮ ಗಾಂಧೀಜಿ ಮರಿಮೊಮ್ಮಗ ಸತೀಶ್ ಧುಪಾಲಿಯಾ ವಿಧಿವಶ
ತಮ್ಮ ತಾಯಿ ಹೇಳುತಿದ್ದ ಆ ಅಪರೂಪದ ಕ್ಷಣಗಳನ್ನು ಗಂಗಮ್ಮ ಕೊನೆ ಮಗ ಬಿ. ಜಿ. ಗುರುಮಲ್ಲೇಶ (75) ಹಂಚಿಕೊಂಡಿದ್ದಾರೆ. ಗಾಂಧಿಜಿ ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ನಮ್ಮ ಮನೆಯ ಉಪ್ಪರಿಗೆ ಕೋಣೆಯಲ್ಲಿದ್ದರು. ಆಗಲೂ ಅವರು ಚರಕದಿಂದ ನೂಲುತಿದ್ದರು. ಮಧ್ಯೆ ಕೆಳಗಿಳಿದು ಬಂದು ವರಾಂಡದಲ್ಲಿ ಕುಳಿತು ಜನರಿಂದ ವಂತಿಗೆ ಸ್ವೀಕರಿಸುತಿದ್ದರು. ಜನರ ಅಹವಾಲು ಕೇಳುತಿದ್ದ ಅವರು ಹೇಳುತ್ತಿದ್ದುದನ್ನು ಅವರ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿ ನೋಟ್ ಮಾಡಿಕೊಳ್ಳುತ್ತಿದ್ದರು.
ಗಾಂಧೀಜಿ ಬಂದಿದ್ದಾಗ ಅವರನ್ನು ನೋಡಲು ವಾಹನಗಳು ರಸ್ತೆಯ ಒಂದು ಕಿಲೋಮೀಟರ್ ದೂರದವರೆಗೂ ಸಾಲುಗಟ್ಟಿ ನಿಂತಿದ್ದವು. ಅವರ ಜತೆ 40 ಅನುಯಾಯಿಗಳ ತಂಡವೇ ಬಂದಿತ್ತು. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಮತ್ತು ಸಂಜೆಯ ಕಾಫಿಯನ್ನೂ ಅವರೇ ತಯಾರಿಸಿಕೊಂಡರು. ಅವರಿಗೆ ಹಾಲಿಗಾಗಿ ಆಡುಗಳನ್ನೂ ತರಿಸಿ ಮನೆ ಮುಂದೆಯೇ ಕಟ್ಟಿ ಹಾಕಲಾಗಿತ್ತು. ಸಂಜೆ 5 ಘಂಟೆಗೆ ಗಾಂಧೀಜಿ ಮನೆಯಿಂದ ತೆರಳಿ ಗುಂಡುಗುಟ್ಟಿ ಕಡೆಗೆ ಪ್ರಯಾಣ ಬೆಳೆಸಿದರು. ಗಾಂಧೀಜಿ ಅವರಿಗೆ ಆತಿಥ್ಯ ನೀಡಿದ್ದ ಗುರಪ್ಪ (40) ಅವರು ಅನಾರೋಗ್ಯದಿಂದ 1945 ರಲ್ಲೇ ದೈವಾಧೀನರಾದರು. ಆತಿಥ್ಯ ನೀಡಿದ್ದ ಮನೆ 1920ರಲ್ಲಿ ನಿರ್ಮಾಣವಾಗಿದೆ.
ಗಾಂಧೀಜಿ ಬಂದು ಹೋದ ನೆನಪಿಗಾಗಿ ಗುರುಮಲ್ಲೇಶ ಮನೆ ಪಕ್ಕದ ತೋಟದಲ್ಲಿರುವ ಆನೆ ಗಾತ್ರದ ಕಲ್ಲು ಬಂಡೆಯು ಗಾಂಧಿ ಕಲ್ಲು ಎಂದೇ ಹೆಸರುವಾಸಿ ಆಗಿದೆ. ಆದರೆ, ಈ ಊರಿನ ಬಹುತೇಕ ಗ್ರಾಮಸ್ಥರಿಗೆ ಗಾಂಧಿ ಇಲ್ಲಿಗೆ ಬಂದಿದ್ದು ಈಗಲೂ ಗೊತ್ತಿಲ್ಲ. ಗಾಂಧಿ ಕಲ್ಲಿನಿಂದ ದೂರದ ಪ್ರಕೃತಿಯ ವಿಹಂಗಮ ನೋಟದಲ್ಲಿ ಹಾರಂಗಿ ಹಿನ್ನೀರು , ಕಬ್ಬಿಣ ಸೇತುವೆ ಸಮೀಪದ ಮನೆಗಳೂ ಕಾಣುತ್ತವೆ.
Recommended Video
ಬೇಳೂರು ಬಾಣೆಗೆ ನಿತ್ಯ ಬರುವ ಪ್ರವಾಸಿಗರು ತೋಟದಲ್ಲಿರುವ ಗಾಂಧಿ ಕಲ್ಲಿಗೆ ಭೇಟಿ ನೀಡಿ ಪ್ರಕೃತಿಯ ರಮಣೀಯ ದೃಶ್ಯ ವೀಕ್ಷಿಸಲು ಅನುವು ಮಾಡಿಕೊಡುವುದಾಗಿ ಗುರುಮಲ್ಲೇಶ ತಿಳಿಸಿದ್ದಾರೆ. ಬೇಳೂರು ಬಾಣೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಈಗ ಮತ್ತೊಂದು ಪ್ರವಾಸಿ ತಾಣ ದೊರೆತಂತೆ ಆಗಿದೆ.