ವಿಶೇಷ ವರದಿ: ಲಾಕ್ಡೌನ್ನಿಂದಾಗಿ ಬೇಡಿಕೆ ಕಳೆದುಕೊಂಡ ಕೊಡಗಿನ ಕಿತ್ತಳೆ
ಮಡಿಕೇರಿ, ಜೂನ್ 18: ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಎಂದರೆ ಇಡೀ ರಾಜ್ಯದಲ್ಲೇ ತುಂಬಾ ಪ್ರಸಿದ್ಧಿ ಆಗಿತ್ತು. ಆದರೆ ಎರಡು ದಶಕಗಳಿಂದ ಕೊಡಗಿನ ಕಾಫಿ ತೋಟಗಳಲ್ಲಿ ಕಿತ್ತಳೆಗೆ ಕಾಯಿಲೆ ಬಂದು ಇಡೀ ಜಿಲ್ಲೆಯಲ್ಲೇ ಸಂಪೂರ್ಣ ಬೆಳೆ ನಾಶದ ಜತೆಗೆ ಕಿತ್ತಳೆ ಗಿಡಗಳೇ ನಾಶವಾದವು. ಬೆಳೆಗಾರರು ಕಿತ್ತಳೆಯನ್ನು ತಿನ್ನಲೂ ಕೂಡ ಸಿಗದಷ್ಟು ಗಿಡಗಳು ನಾಶವಾದವು.
ಆದರೆ, ಕಳೆದೊಂದು ದಶಕದಿಂದ ಕೊಡಗಿನಲ್ಲಿ ಕಿತ್ತಳೆ ಫಸಲು ಚೆನ್ನಾಗಿ ಬರುತ್ತಿದೆ. ಆದರೆ, ಕೋವಿಡ್ ಲಾಕ್ಡೌನ್ ಪರಿಣಾಮ ಕಳೆದ ಎರಡು ವರ್ಷಗಳಿಂದ ಬೇಡಿಕೆ ಕುಸಿದಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಫಸಲು ಬಂದಿದ್ದರೂ ಲಾಭ ಗಳಿಸಲಾಗದ ಪರಿಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ.
ಬಾಯಲ್ಲಿ ನೀರೂರಿಸುವ ಕೊಡಗಿನ ಕಿತ್ತಳೆ
ಹುಳಿ- ಸಿಹಿ ಮಿಶ್ರಣ ರುಚಿಯ, ಬಾಯಲ್ಲಿ ನೀರೂರಿಸುವ ಕೊಡಗಿನ ಕಿತ್ತಳೆಗೆ ಈಗ ಫಸಲಿನ ಸಮಯ. ದೇಶ ವಿದೇಶಗಳ ಮಂದಿ "ಕೂರ್ಗ್ ಆರೆಂಜ್" ಎಂದಾಕ್ಷಣ ಬಾಯಲ್ಲಿ ನೀರು ಸುರಿಸುತ್ತಾರೆ. ಕೊಡಗಿನ ಮಣ್ಣಿನ ಗುಣಕ್ಕೆ ಹೊಂದಿಕೊಂಡಿರುವ ಕಿತ್ತಳೆ ಬ್ರಿಟಿಷರ ಕಾಲದಿಂದಲೂ ಹೆಸರುವಾಸಿ ಹಣ್ಣು. ಆಗಿನಿಂದಲೂ ಕೊಡಗಿನ ಕಿತ್ತಳೆ ಎಂದರೆ ಹೆಚ್ಚು ಬೇಡಿಕೆ. ಜಿಲ್ಲೆಯಲ್ಲಿ ಮೂರನೇ ಮುಖ್ಯ ಲಾಭದಾಯಕ ಬೆಳೆ ಎಂದು ಇದನ್ನು ಗುರುತಿಸಲಾಗಿದೆ.
ಅನ್ಲಾಕ್ ಆದರೂ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲು ಒತ್ತಾಯ
ಕೆಜಿ ಕಿತ್ತಳೆಗೆ 20 ರಿಂದ 25 ರೂ.ಗಳನ್ನಷ್ಟೇ ನೀಡುತ್ತಾರೆ
ಜಿಲ್ಲೆಯ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 30 ಸಾವಿರ ಮೆಟ್ರಿಕ್ ಟನ್ ಕಿತ್ತಳೆ ಬೆಳೆಯಲಾಗುತ್ತಿದೆ. ವ್ಯಾಪಾರಿಗಳು ಬೆಳೆಗಾರರಿಂದ ಒಂದು ಕೆಜಿ ಕಿತ್ತಳೆಗೆ 20 ರಿಂದ 25 ರೂ.ಗಳನ್ನಷ್ಟೇ ನೀಡಿ ಖರೀದಿಸುತ್ತಾರೆ. ವ್ಯಾಪಾರಿಗಳು ಒಂದು ಕೆಜಿ ಹಣ್ಣಿಗೆ ಗ್ರಾಹಕರಿಂದ 80 ರಿಂದ 120 ರೂ.ವರೆಗೆ ಪಡೆಯುತ್ತಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಫಸಲು ಬಿಟ್ಟಿದೆ. ಆದರೆ ಕೊಳ್ಳುವವರಿಲ್ಲದೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿದ್ದಾರೆ. ಇದರಿಂದ ಕೊಡಗಿನ ಬೆಳೆಗಾರರು ಲಕ್ಷಾಂತರ ರೂ.ನಷ್ಟ ಅನುಭವಿಸುತ್ತಿದ್ದಾರೆ.
ಕೋವಿಡ್ ಸಂದಿಗ್ಧತೆಯಲ್ಲಿ ಕಿತ್ತಳೆಯನ್ನು ಕೇಳುವವರಿಲ್ಲ
ಪ್ರತಿವರ್ಷ ಕೊಡಗು ಜಿಲ್ಲೆಗೆ ಬರುತ್ತಿದ್ದ ಲಕ್ಷಾಂತರ ಪ್ರವಾಸಿಗರು ಕಿತ್ತಳೆಯನ್ನು ಖರೀದಿಸಿ ಆಸ್ವಾದಿಸುತ್ತಿದ್ದರು. ವಿದೇಶಗಳಲ್ಲೂ ಎಲ್ಲಿಲ್ಲದ ಬೇಡಿಕೆ ಇದೆಯಾದರೂ ಕಳೆದ ಎರಡು ವರ್ಷಗಳ ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ಕಿತ್ತಳೆಯನ್ನು ಕೇಳುವವರಿಲ್ಲ ಎನ್ನುವಂತಾಗಿದೆ. ಎಲ್ಲವೂ ಸುಗಮವಾಗಿದಿದ್ದರೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಲೋಡ್ಗಟ್ಟಲೆ ಕೊಡಗಿನ ಕಿತ್ತಳೆ ಈಗ ಸರಬರಾಜಾಗಬೇಕಾಗಿತ್ತು.
Recommended Video
ಪ್ರವಾಸಿಗರು ಬಂದರಷ್ಟೇ ಉತ್ತಮ ವ್ಯಾಪಾರ
ಜೂನ್ ತಿಂಗಳ ಆರಂಭದಿಂದಲೇ ಕೊಡಗಿನ ಕಿತ್ತಳೆ ಕೊಯ್ಲಿಗೆ ಬಂದಿದ್ದು, ಕಾರ್ಮಿಕರ ಕೊರತೆಯೂ ಎದುರಾಗಿರುವುದರಿಂದ ಹಣ್ಣುಗಳು ಮರಗಳಲ್ಲೇ ಇವೆ. ಕೊಡಗಿನವರಿಗೆ "ಕೂರ್ಗ್ ಆರೆಂಜ್" ಎಂಬ ಹೆಮ್ಮೆ ಇದೆ. ಆದರೆ ಕೊಡಗಿನಲ್ಲಿ ಈ ಹಣ್ಣಿಗೆ ಬೇಡಿಕೆ ಕಡಿಮೆ. ಪ್ರವಾಸಿಗರು ಬಂದರಷ್ಟೇ ಉತ್ತಮ ವ್ಯಾಪಾರವಾಗುತ್ತದೆ. ಇಲ್ಲದಿದ್ದರೆ ಕೇರಳ ಮತ್ತಿತರ ರಾಜ್ಯಗಳ ಪಾಲಾಗುತ್ತದೆ. ಕೊಡಗಿನಲ್ಲಿ ಕಿತ್ತಳೆ ಸಹಕಾರ ಸಂಘವಿದ್ದು, ಕಿತ್ತಳೆಯನ್ನು ಖರೀದಿಸಿ ಹಲವು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯನ್ನು ಸೃಷ್ಟಿಸಿದೆಯಾದರೂ ನಿರೀಕ್ಷಿತ ಬೇಡಿಕೆ ಬಂದಿಲ್ಲ. ಹಾಪ್ಕಾಮ್ಸ್ ಕೂಡ ಗ್ರಾಹಕರ ಬೇಡಿಕೆಗನುಗುಣವಾಗಿ ಮಾತ್ರ ಕಿತ್ತಳೆಯನ್ನು ಖರೀದಿಸುತ್ತಿದೆ. ಜಿಲ್ಲೆಯಲ್ಲಿ ಕಿತ್ತಳೆಗೆ ನಿರ್ದಿಷ್ಟ ಮಾರುಕಟ್ಟೆ ಇಲ್ಲ ಎನ್ನುವ ಬೇಸರ ಬೆಳೆಗಾರರಿಗೂ ಇದೆ. ಲಾಕ್ಡೌನ್ ಕಳೆದ ಬಳಿಕವಾದರೂ ಬೆಳೆಗಾರರಿಗೆ ಉತ್ತಮ ಬೆಲೆ ಬರುವುದೋ ಕಾದು ನೋಡಬೇಕಷ್ಟೆ.