ಕೊಡಗಿನಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಆ.30ರವರೆಗೆ ವಿಸ್ತರಣೆ
ಮಡಿಕೇರಿ, ಆಗಸ್ಟ್ 20: ಗಡಿ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಕೊಡಗು ಜಿಲ್ಲೆಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ರಾತ್ರಿ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 9ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ.
"ಈ ಆದೇಶವು ಆ.30ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದು, ರಾತ್ರಿ ಕರ್ಫ್ಯೂ ಅವಧಿಯಲ್ಲಿ ತುರ್ತು, ಅತ್ಯವಶ್ಯಕ, ವೈದ್ಯಕೀಯ ಮತ್ತು ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಈ ಕೆಳಕಂಡ ತುರ್ತು,ಅತ್ಯವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರುತ್ತದೆ," ಎಂದು ಹೇಳಿದ್ದಾರೆ.
ಹಾರಂಗಿ ಜಲಾಶಯದಿಂದ ಮತ್ತೆ ನದಿಗೆ ನೀರು ಬಿಡುಗಡೆ
ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಕಾರ್ಪೋರೇಷನ್ ಇತ್ಯಾದಿಗಳು, ತುರ್ತು ಮತ್ತು ಅತ್ಯವಶ್ಯಕ ಸೇವೆಗಳು ಹಾಗೂ ಕೋವಿಡ್- 19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಇಲಾಖೆ, ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ನಿಮಿತ್ತ ಓಡಾಟಕ್ಕೆ ಅಡ್ಡಿ ಇರುವುದಿಲ್ಲ.
ತುರ್ತು ಸಂದರ್ಭ ಮತ್ತು ಅತ್ಯವಶ್ಯಕ ಸೇವೆಗಳನ್ನು ನೀಡುವ ಎಲ್ಲಾ ಕೈಗಾರಿಕೆ, ಕಂಪೆನಿಗಳು, ಸಂಸ್ಥೆಗಳ ಕಾರ್ಯಾಚರಣೆ ಹಾಗೂ ಅದರ ಸಿಬ್ಬಂದಿಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ. ಆದರೆ ಸಂಬಂಧಪಟ್ಟ ಸಂಸ್ಥೆ ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದಾಗಿದೆ.
"ವೈದ್ಯಕೀಯ ಸೇವೆಯ ಸಂಬಂಧ ರೋಗಿಯೊಂದಿಗೆ ಉಪಚಾರಕರ ಓಡಾಟಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುತ್ತಾ, ಆಹಾರ, ದಿನಸಿ, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್ಗಳು, ಪಶು ಆಹಾರ ಮಳಿಗೆಗಳು, ಬೀದಿ ಬದಿ ವ್ಯಾಪಾರಿಗಳಿಗೆ, ಪಡಿತರ ನ್ಯಾಯಬೆಲೆ ಮಳಿಗೆ, ಮದ್ಯ ಮಾರಾಟ ಮಳಿಗೆ ( ಪಾರ್ಸೆಲ್ ರೂಪದಲ್ಲಿ) ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯಾಚರಿಸಲು ಅವಕಾಶ ಇರುತ್ತದೆ. ಆದರೆ ಹೋಂ ಡೆಲಿವರಿ ಪದ್ಧತಿಗೆ ಉತ್ತೇಜನ ನೀಡುವಂತೆ," ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ರೆಸ್ಟೋರೆಂಟ್ ಮತ್ತು ಉಪಾಹಾರ ಮಳಿಗೆಗಳಿಂದ ಪಾರ್ಸೆಲ್ ರೂಪದಲ್ಲಿ ಪಡೆಯಲು ಹಾಗೂ ಹೋಂ ಡೆಲಿವರಿಗೆ ಅವಕಾಶ ಇರುತ್ತದೆ.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆದೊಯ್ಯಲು ಸಾರ್ವಜನಿಕ ಸಾರಿಗೆ, ಖಾಸಗಿ ಸಾರಿಗೆ ಮತ್ತು ಟ್ಯಾಕ್ಸಿಗಳಿಗೆ ಅನುಮತಿಸಿದೆ. ಆದಾಗ್ಯೂ ಪ್ರಯಾಣಿಕರು ಅಧಿಕೃತ ಟಿಕೆಟ್ ಹೊಂದಿರತಕ್ಕದ್ದು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು.
"ಕೊಡಗು ಜಿಲ್ಲೆಯಲ್ಲಿ ಆ.22ರ ಭಾನುವಾರದಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ- 2021 ಹಾಗೂ ದಿನಾಂಕ 28 ಮತ್ತು 29 ರಂದು ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ- 2021 ಗಳು ನಡೆಯಲಿದ್ದು, ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಸಂಚಾರದ ವೇಳೆ ಪರೀಕ್ಷೆಯ ಪ್ರವೇಶ ಪತ್ರವನ್ನು ಹೊಂದಿದ್ದು, ತಪಾಸಣೆ ಸಮಯದಲ್ಲಿ ಹಾಜರುಪಡಿಸಬೇಕು," ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸಮೀಪದ ಹೋಟೆಲ್, ರೆಸ್ಟೋರೆಂಟ್, ಉಪಾಹಾರ ಗೃಹಗಳನ್ನು ಕೋವಿಡ್ ಮಾರ್ಗಸೂಚನೆಗಳನ್ನು ಪಾಲಿಸುತ್ತಾ ಪರೀಕ್ಷೆ ಮುಕ್ತಾಯದ ಸಮಯದವರೆಗೆ ತೆರೆದು, ಆಹಾರವನ್ನು ಕೇವಲ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಲು ಅನುಮತಿಸಿದೆ. ಅಲ್ಲದೆ, ಈ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರದ ಮುಖ್ಯದ್ವಾರದವರೆಗೆ ಆಟೋ ರಿಕ್ಷಾಗಳ ಸಂಚಾರಕ್ಕೆ ಅನುಮತಿಸಿದೆ.
ಕೇರಳ ರಾಜ್ಯದಿಂದ ಆಗಮಿಸುವವರು ಕೋವಿಡ್ ಲಸಿಕೆ ಪಡೆದಿದ್ದರೂ (2 ಡೋಸ್ ಆಗಿದ್ದರೂ) ಕಡ್ಡಾಯವಾಗಿ 72 ಗಂಟೆಗಳ ಒಳಗಾಗಿ ಪಡೆದಿರುವ ಆರ್ಟಿ- ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
Recommended Video
"ಕೋವಿಡ್- 19 ನಿರ್ವಹಣೆಯ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಈ ಕಚೇರಿಯಿಂದ ನೀಡುವ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗಳು ವಿಪತ್ತು ನಿರ್ವಹಣಾ ಕಾಯ್ದೆ ಕಲಂ 51 ರಿಂದ 60ರ ಉಪಬಂಧಗಳು ಮತ್ತು ಭಾರತೀಯ ದಂಡಸಂಹಿತೆ ಕಲಂ 188 ಹಾಗೂ ದಿ ಕರ್ನಾಟಕ ಮಹಾಮಾರಿ ರೋಗ ಆಕ್ಟ್-2020ರ ಕಲಂ 9ರ ಅಡಿಯಲ್ಲಿನ ಕಾನೂನು ಕ್ರಮಗಳು ಮತ್ತು ಕಾಲಕಾಲಕ್ಕೆ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ದಂಡನೆಗೆ ಒಳಗಾಗುವರು," ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಎಚ್ಚರಿಸಿದ್ದಾರೆ.