ಹೊಸ ಕಾನೂನು ಜಾರಿಗೆ: ಕೊಡಗಿನಲ್ಲಿ ಕಲ್ಲುಕ್ವಾರಿ, ಸಾಗಾಟ ಸ್ಥಗಿತ
ಮಡಿಕೇರಿ, ಮಾರ್ಚ್ 13: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಕಲ್ಲುಕ್ವಾರಿ ಸ್ಪೋಟ ಘಟನೆಗಳ ಬಳಿಕ ಪ್ರಾಯೋಗಿಕವಾಗಿ ಕಾನೂನುಗಳನ್ನು ಸರಕಾರ ಜಾರಿಗೆ ತಂದಿದ್ದು, ಇದನ್ನು ವಿರೋಧಿಸಿ ಕೊಡಗು ಜಿಲ್ಲೆಯಾದ್ಯಂತ ಜಲ್ಲಿಕಲ್ಲು ಹಾಗೂ ಇತರ ಕಟ್ಟಡ ಸಾಮಗ್ರಿ ಉತ್ಪನ್ನಗಳನ್ನು ಸರಬರಾಜು ಮಾಡದೆ ಇರಲು ಕೊಡಗು ಕ್ರಷರ್ ಮಾಲೀಕರ ಸಂಘ ತೀರ್ಮಾನಿಸಿದೆ.
ಈಗಿರುವ ಕಾನೂನಿನಂತೆ ಕ್ರಷರ್ ಗಳಲ್ಲಿ ಲೈಸೆನ್ಸ್ ಹೊಂದಿರುವ ಪರಿಣಿತರನ್ನು ಕರೆಯಿಸಿ ಬಂಡೆಗಳನ್ನು ಸ್ಪೋಟಿಸಲಾಗುತ್ತಿದೆ. ಆದರೆ, ಇದೀಗ ಸರಕಾರ ಹೊಸ ನಿಯಮಾವಳಿ ಜಾರಿಗೊಳಿಸಿದೆ. ಆ ಪ್ರಕಾರ ಕ್ವಾರಿ ಮಾಲೀಕರೇ ಸ್ಪೋಟ ಲೈಸೆನ್ಸ್ ಪಡೆದು, ಡಿಪ್ಲೋಮಾ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಂಡು ಸ್ಪೋಟ ಮಾಡಬೇಕಾಗಿದೆ.
ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ: ಫೆ.7ರಂದೇ ದಾಖಲಾಗಿತ್ತು ಎಫ್ಐಆರ್!
ಆದರೆ, ಇದೀಗ ಸರಕಾರ ಹೊಸ ಸ್ಪೋಟ ಲೈಸೆನ್ಸ್ ಪಡೆಯುವ ನಿಯಮಾವಳಿಗಳನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಇದರಿಂದಾಗಿ ಕ್ರಷರ್ ವ್ಯವಹಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಒಂದೋ ಈ ಹಿಂದೆ ಇದ್ದಂತಹ ಆದೇಶ ಮುಂದುವರಿಸಲಿ, ಇಲ್ಲವಾದಲ್ಲಿ ಸರಕಾರವೇ ಲೈಸೆನ್ಸ್ ನೀಡುವಂತಾಗಬೇಕು. ಅದುವರೆಗೆ ಜಿಲ್ಲೆಯಲ್ಲಿ ಕ್ವಾರಿಗಳನ್ನು ಬಂದ್ ಮಾಡಿ ಕಟ್ಟಡ ಸಾಮಗ್ರಿಗಳ ಸರಬರಾಜನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗುವದು ಎಂದು ತಿಳಿಸಿದ್ದಾರೆ.
ಈಗಾಗಲೇ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರಕಾರದ ಗಮನಕ್ಕೆ ತರಲಾಗುವದೆಂದು ಸಂಘದ ಅಧ್ಯಕ್ಷ ವಿ.ಎಂ.ವಿಜಯ ಹೇಳಿದ್ದು, ಕೊಡಗು ಜಿಲ್ಲೆಯಲ್ಲಿ ಸಾಮಗ್ರಿಗಳ ಸ್ಥಗಿತ ಬಳಿಕ ಹೊರ ಜಿಲ್ಲೆಯಿಂದ ಜಲ್ಲಿಕಲ್ಲನ್ನು ಜಿಲ್ಲೆಯೊಳಗೆ ಸಾಗಿಸಿದರೆ ಆ ಲಾರಿಗಳನ್ನು ತಡೆಯುವುದಾಗಿಯೂ ಅಧ್ಯಕ್ಷ ವಿಜಯ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಲಾರಿ ಮಾಲೀಕರ ಕಾರ್ಮಿಕರ ಸಂಘದ ಮಾಜಿ ಕಾರ್ಯದರ್ಶಿ ಮಶೂದ್ ಅವರು, ಕಲ್ಲು ಕ್ವಾರಿ ಸ್ಥಗಿತದಿಂದ ಜಿಲ್ಲೆಯ ಲಾರಿ ಮಾಲೀಕರುಗಳಲ್ಲದೆ, ಸಾವಿರಾರು ಮಂದಿ ಕಾರ್ಮಿಕರ ಬದುಕು ಡೋಲಾಯಮಾನವಾಗಲಿದ್ದು, ಈ ಬಗ್ಗೆ ಸರಕಾರ ಸ್ಪಂದಿಸಿ ಪರಿಹಾರ ಒದಗಿಸಬೇಕಿದೆ ಎಂದು ಕೋರಿದ್ದಾರೆ.