ಮೈಸೂರು ದಸರಾ ಬಹಿಷ್ಕಾರಕ್ಕೆ ಮುಂದಾದ ಮಾವುತರು... ಸಂಕಷ್ಟದಲ್ಲಿ ಸರಕಾರ...!
ಮಡಿಕೇರಿ, ಆಗಸ್ಟ್ 1: ಈ ಬಾರಿ ಐತಿಹಾಸಿಕ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರಕಾರ ಸರ್ವ ರೀತಿಯಲ್ಲಿ ಸಿದ್ಧತೆ ನಡೆಸುತ್ತಿರುವಾಗಲೇ ವಿವಿಧ ಸಾಕಾನೆ ಶಿಬಿರಗಳ ಮಾವುತರು ಮತ್ತು ಕಾವಾಡಿಗಳು ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಲ್ಲಿ ಸಮಾವೇಶಗೊಂಡು ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಡುತ್ತಿದ್ದು, ದಸರಾ ಸೇರಿದಂತೆ ಎಲ್ಲ ಕಾರ್ಯಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ದಸರಾ ಬರುತ್ತಿದ್ದಂತೆಯೇ ಮಾವುತರು ಮತ್ತು ಕಾವಾಡಿಗಳು ತಮ್ಮ ಸಮಸ್ಯೆಗಳನ್ನು ಸರಕಾರದ ಮುಂದಿಟ್ಟು ಪ್ರತಿಭಟನೆ ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ. ಈ ವೇಳೆ ಭರವಸೆಗಳನ್ನು ನೀಡುವ ಸರಕಾರ ದಸರಾ ಕಳೆಯುತ್ತಿದ್ದಂತೆಯೇ ಅದನ್ನು ಮರೆತು ಬಿಡುತ್ತದೆ. ನಂತರ ಮಾವುತರು ಮತ್ತು ಕಾವಾಡಿಗಳು ಕೂಡ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಾರೆ. ಹೀಗಾಗಿ ಅವರ ಬೇಡಿಕೆಗಳು ಈಡೇರದೆ ಪ್ರತಿಭಟನೆ ಅನಿವಾರ್ಯವಾಗುತ್ತಿದೆ.
ಅದ್ದೂರಿ ಮೈಸೂರು ದಸರಾ ಆಚರಣೆಯತ್ತ ಎಲ್ಲರ ಚಿತ್ತ!
ಈ ಬಾರಿ ಸರ್ಕಾರ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದು, ಈ ಸಂಬಂಧ ಆಗಸ್ಟ್ 7 ರಂದು ವೀರನಹೊಸಳ್ಳಿಯಿಂದ ಗಜಪಯಣ ಆರಂಭಿಸುವುದರೊಂದಿಗೆ ದಸರಾಕ್ಕೆ ಮುನ್ನುಡಿ ಬರೆಯಲು ತಯಾರಿ ಶುರುವಾಗಿದೆ. ಮೈಸೂರು ದಸರಾ ಅಂದರೆ ಆನೆಗಳು ಇರಬೇಕು. ಆನೆಗಳು ಇರಬೇಕೆಂದರೆ ಅವುಗಳ ಜತೆ ಮಾವುತರು ಮತ್ತು ಕಾವಾಡಿಗರು ಜೊತೆಗಿರಲೇ ಬೇಕಾಗುತ್ತದೆ. ಆನೆಗಳು ಮತ್ತು ಮಾವುತರು, ಕಾವಾಡಿಗರು ಇಲ್ಲದೆ ದಸರಾವನ್ನು ಊಹಿಸುವುದೇ ಕಷ್ಟ. ಹಾಗಾಗಿ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದೇ ಕುತೂಹಲದ ವಿಚಾರವಾಗಿದೆ.
ಇಂದಿಗೂ ಗುಡಿಸಲಲ್ಲೇ ವಾಸ
ಸಾಕಾನೆ ಶಿಬಿರಗಳಿಗೆ ತೆರಳಿದರೆ ಕಾವಾಡಿ ಮತ್ತು ಮಾವುತರ ಬದುಕು ಸುಧಾರಿಸಿದಂತೆ ಕಾಣುವುದಿಲ್ಲ. ಇಂದಿಗೂ ಅವರು ಗುಡಿಸಲಲ್ಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ದಸರಾ ಸಂದರ್ಭದಲ್ಲಿ ಅರಮನೆಗೆ ಸಾಕಾನೆಗಳೊಂದಿಗೆ ಆಗಮಿಸುವ ಕುಟುಂಬಗಳಿಗೆ ಆತಿಥ್ಯ ಬಹು ಜೋರಾಗಿಯೇ ನಡೆಯುತ್ತದೆ. ಆದರೆ ದಸರಾ ಮುಗಿಯುತ್ತಿದ್ದಂತೆಯೇ ಮತ್ತೆ ಎಂದಿನ ಅದೇ ಬದುಕು ಮುಂದುವರೆಯುತ್ತದೆ.
ಬೇಡಿಕೆ ಇಡೇರಿಸಿಕೊಳ್ಳಲು ಇದೇ ಸಮಯ
ದಸರಾದಲ್ಲಿ ಮಾವುತರು ಮತ್ತು ಕಾವಾಡಿಗರು ಇಲ್ಲದೆ ದಸರಾ ನಡೆಸುವುದು ಕಷ್ಟವಾಗಿದೆ. ಇದನ್ನು ಮನಗಂಡ ಮಾವುತರು ಮತ್ತು ಕಾವಾಡಿಗರು ಇದೀಗ ತಮ್ಮ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆಗಿಳಿದಿದ್ದಾರೆ. ಈ ಬಾರಿ ದುಬಾರೆ ಹೋರಾಟದ ಕೇಂದ್ರವಾಗಿದ್ದು, ಇಲ್ಲಿಗೆ ದುಬಾರೆ, ಮತ್ತಿಗೋಡು, ಸಕ್ರೆಬೈಲು, ಕೆ.ಗುಡಿ, ರಾಂಪುರಗಳಲ್ಲಿರುವ ಮಾವುತರು, ಕಾವಾಡಿಗರು ಆಗಮಿಸಿ ತಮ್ಮ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.
ದುಬಾರೆಯ ಪ್ರವಾಸಿ ಮಂದಿರದಲ್ಲಿ ಸಾಕಾನೆ ಮಾವುತ, ಕಾವಡಿಗರ ಸಂಘದ ಸಂಘದ ರಾಜ್ಯ ಅಧ್ಯಕ್ಷ ಗೌಸ್ ಖಾನ್, ಉಪಾಧ್ಯಕ್ಷ ಜೆ.ಕೆ ಡೋಬಿ, ಪ್ರಧಾನ ಕಾರ್ಯದರ್ಶಿ ಪರ್ವೀನ್ ಪಾಷಾ, ಸೇರಿದಂತೆ ಮತ್ತಿಗೋಡಿನ ಜೆ.ಕೆ.ವಸಂತ, ರಾಂಪುರದ ನಾಗೇಶ್, ಜೈವಾಲ್ ಹಾಗೂ ಮಾವುತರು, ಕಾವಾಡಿಗರು ಸೇರಿ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ವರ್ಷದ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯವನ್ನು ಬಹಿಷ್ಕರಿಸಿ ಪ್ರತಿಭಟಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸಿಎಂ ಲಿಖಿತ ಭರವಸೆ ನೀಡಲಿ
ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ಅವರು ಮಾತನಾಡಿ, "ತಮಗೆ ನೀಡುತ್ತಿರುವ ವೇತನದಲ್ಲಿ ಸರಕಾರ ತಾರತಮ್ಯವನ್ನು ಮಾಡುತ್ತಿದ್ದು ಇದನ್ನು ಸರಿಪಡಿಸಬೇಕು. ಇದಲ್ಲದೆ, ಇನ್ನು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದರೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ," ಎಂದು ಆರೋಪಿಸಿದ್ದಾರೆ.
ಇನ್ನು ಸಂಘದ ಪ್ರಮುಖರಾದ ಮೇಘರಾಜ್ ಮಾತನಾಡಿ, " ಬೇಡಿಕೆ ಈಡೇರಿಕೆಗಾಗಿ ಆಯಾ ಶಿಬಿರಗಳಲ್ಲಿ ಆನೆಗಳ ನಿರ್ವಹಣೆ ಹೊರತುಪಡಿಸಿ, ಹುಲಿ ಹಿಡಿಯುವುದು, ಕಾಡಾನೆ ಹಿಡಿಯುವುದು ಸೇರಿದಂತೆ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯವನ್ನು ನಾವು ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಖಿತ ರೂಪದಲ್ಲಿ ಭರವಸೆ ನೀಡಬೇಕೆಂದು," ಅವರು ಒತ್ತಾಯಿಸಿದ್ದಾರೆ.
ಸರಕಾರಕ್ಕೆ ಬಿಸಿ ತುಪ್ಪವಾದ ಪ್ರತಿಭಟನೆ
ಒಟ್ಟಾರೆಯಾಗಿ ಹೇಳಬೇಕೆಂದರೆ ಅದ್ಧೂರಿ ದಸರಾಕ್ಕೆ ಸಿದ್ಧತೆ ಆರಂಭಿಸುತ್ತಿರುವಾಗಲೇ ಮಾವುತರು ಮತ್ತು ಕಾವಾಡಿಗಳು ದಸರಾ ಸೇರಿದಂತೆ ಎಲ್ಲ ಕಾರ್ಯಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿರುವುದು ಸರಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸರ್ಕಾರ ಈ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.