ತಲಕಾವೇರಿ ಭೂಕುಸಿತ ಪ್ರಕರಣ; ಪರಿಹಾರ ಪಡೆಯಲು ಮತಾಂತರ ಅಡ್ಡಿ
ಮಡಿಕೇರಿ, ಆಗಸ್ಟ್ 26: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಈಚೆಗೆ ಭಾರೀ ಮಳೆಯಿಂದ ಭೂ ಕುಸಿತ ಸಂಭವಿಸಿ ತಲಕಾವೇರಿ ದೇಗುಲದ ಪ್ರಧಾನ ಅರ್ಚಕ ನಾರಾಯಣ್ ಆಚಾರ್ ಕುಟುಂಬದ ಐವರು ನಾಪತ್ತೆಯಾಗಿದ್ದರು. ಆನಂತರ ನಾರಾಯಣ್ ಆಚಾರ್ ಅವರೂ ಸೇರಿದಂತೆ ಮೂವರ ಮೃತದೇಹ ಪತ್ತೆಯಾಯಿತು. ಹೀಗಾಗಿ ಸರ್ಕಾರ ಪ್ರಕೃತಿ ವಿಕೋಪದ ಸಂದರ್ಭ ನೀಡುವ ಪರಿಹಾರದಂತೆ, ವಿದೇಶದಿಂದ ಬಂದಿದ್ದ ಆಚಾರ್ ಅವರ ಪುತ್ರಿಯರಿಬ್ಬರಿಗೂ ತಲಾ 2.50 ಲಕ್ಷದ ಚೆಕ್ ನೀಡಿತು.
Recommended Video
ಆದರೆ ಇಬ್ಬರು ಪುತ್ರಿಯರೂ ಬೇರೆ ಧರ್ಮಕ್ಕೆ ಮತಾಂತರಗೊಂಡು ಹೆಸರು ಬದಲಾವಣೆ ಮಾಡಿಕೊಂಡಿರುವುದೇ ಸರ್ಕಾರ ನೀಡಿರುವ ಪರಿಹಾರದ ಹಣ ಪಡೆಯಲು ಅಡ್ಡಿಯಾಗಿದೆ. ಅವರ ಮೂಲ ಹೆಸರಿನಲ್ಲಿ ಚೆಕ್ ಇದ್ದು, ಈ ಚೆಕ್ ಪಡೆದುಕೊಂಡಿರುವ ಪುತ್ರಿಯರು ಸದ್ಯ ಭಾಗಮಂಡಲ ನಾಡ ಕಚೇರಿಗೆ ತೆರಳಿ ತಮ್ಮ ಈಗಿನ ಹೆಸರಿಗೆ ಚೆಕ್ ಬರೆದುಕೊಡುವಂತೆ ಕೋರಿ ಚೆಕ್ ಹಿಂತಿರುಗಿಸಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ...
ಕೊಡಗು: ಆನಂದತೀರ್ಥ ಪರಿಹಾರ ಚೆಕ್ ಯಾರಿಗೆ ಕೊಡಬೇಕು ಗೊಂದಲ, ನಾರಾಯಣಾಚಾರ್ ಪುತ್ರಿಯರಿಂದ ಆಕ್ಷೇಪ
ಸಮಸ್ಯೆ ತಂದೊಡ್ಡಿದ ಪರಿಹಾರದ ಚೆಕ್
ಘಟನೆಯಲ್ಲಿ ಮೃತಪಟ್ಟ ಅರ್ಚಕ ನಾರಾಯಣಾಚಾರ್ ಅವರ ಪುತ್ರಿಯರಿಗೆ ಪರಿಹಾರದ ಚೆಕ್ ಸಮಸ್ಯೆಯಾಗಿ ಪರಿಣಮಿಸಿದೆ. ಆಚಾರ್ ಪುತ್ರಿಯರಾದ ಶಾರದ ಮತ್ತು ನಮಿತಾ ಹೆಸರಿಗೆ ಚೆಕ್ ಬರೆಯಲಾಗಿದ್ದು, ಅದನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ವಿತರಿಸಿದ್ದಾರೆ. ಆದರೆ ಪುತ್ರಿಯರು ಮತಾಂತರವಾಗಿ ಹೆಸರು ಬದಲಾಯಿಸಿಕೊಂಡಿರುವುದು ಪರಿಹಾರ ಹಣ ಪಡೆಯುವುದಕ್ಕೆ ಅಡ್ಡಿಯಾಗಿದೆ.
ಮತಾಂತರಗೊಂಡಿದ್ದ ಪುತ್ರಿಯರು
ಹಿರಿಯ ಪುತ್ರಿ ಶಾರದಾ ಅವರು ಕ್ರಿಶ್ಚಿಯನ್ ಧರ್ಮದ ಫರ್ನಾಂಡಿಸ್ ಅವರನ್ನು ಮದುವೆಯಾಗಿ ಶನೋನ್ ಫರ್ನಾಂಡಿಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಅವರ ಎಲ್ಲ ವ್ಯವಹಾರಗಳು ಶನೋನ್ ಫರ್ನಾಂಡಿಸ್ ಹೆಸರಿನಲ್ಲಿಯೇ ನಡೆಯುತ್ತಿದೆ. ಇನ್ನೊಬ್ಬ ಮಗಳ ಹೆಸರು ನಮಿತಾ ಆಗಿದ್ದು, ಆಕೆ ಇಸ್ಲಾಂ ಧರ್ಮದ ನಜೇರತ್ ಅವರನ್ನು ಮದುವೆ ಮಾಡಿಕೊಂಡು ನಮಿತಾ ನಜೇರತ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಸರ್ಕಾರ ಕೊಟ್ಟಿರುವ ಚೆಕ್ ಅವರ ಮೂಲ ಹೆಸರಿನಲ್ಲಿದ್ದು, ಚೆಕ್ ಅವರಿಗೆ ಸೇರಲು ಅಡ್ಡಿಯಾಗಿದೆ. ಸದ್ಯ ಭಾಗಮಂಡಲ ನಾಡ ಕಚೇರಿಗೆ ತೆರಳಿ ತಮ್ಮ ಈಗಿನ ಹೆಸರಿಗೆ ಚೆಕ್ ಬರೆದುಕೊಡುವಂತೆ ಕೋರಿ ಚೆಕ್ ಹಿಂತಿರುಗಿಸಿದ್ದಾರೆ.
ಬ್ರಹ್ಮಗಿರಿ ಬೆಟ್ಟದಲ್ಲಿ ನಡೆಯುತ್ತಿದ್ದ ಶೋಧ ಕಾರ್ಯ ಸ್ಥಗಿತ
ಆಗಸ್ಟ್ 5ರಂದು ಸಂಭವಿಸಿದ್ದ ದುರಂತ
ತಲಕಾವೇರಿಯಲ್ಲಿ ಕಳೆದ ಐದಾರು ದಶಕಗಳಿಂದಲೂ ನಾರಾಯಣ ಆಚಾರ್ ಅವರು ಮುಖ್ಯ ಅರ್ಚಕರಾಗಿ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾ ಬಂದಿದ್ದರೂ ಅವರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಆದರೆ ಆಗಸ್ಟ್ 5ರಂದು ಗುಡ್ಡ ಕುಸಿದು ಇಡೀ ಕುಟುಂಬ ಮಣ್ಣಿನಡಿಗೆ ಸಿಲುಕಿದೆ ಎಂಬ ವಿಷಯ ಹೊರ ಬರುತ್ತಿದ್ದಂತೆಯೇ ಅವರ ಬಗ್ಗೆ ಮಾತುಗಳೂ ಹರಡಿದವು.
ನಾರಾಯಣಾಚಾರ್ ಅವರಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು (ಶಾರದ ಹಾಗೂ ನಮಿತಾ) ಮತ್ತು ಒಬ್ಬ ಮಗ ಇದ್ದರು. ಪುತ್ರಿಯರಿಬ್ಬರು ಉತ್ತಮ ಉದ್ಯೋಗದಲ್ಲಿದ್ದು, ತಮಗಿಷ್ಟವಾದವರನ್ನು ಮದುವೆಯಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ನಲ್ಲಿ ಹೊರ ದೇಶದಲ್ಲಿ ನೆಲೆಸಿದ್ದಾರೆ. ಕ್ರೀಡಾಪಟುವಾಗಿದ್ದ ಮಗ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಗುಡ್ಡ ಕುಸಿತದ ಘಟನೆಯಲ್ಲಿ ನಾರಾಯಣ ಆಚಾರ್, ಪತ್ನಿ ಶಾಂತಾ ಆಚಾರ್, ಸಹೋದರ ಆನಂದ ತೀರ್ಥ ಸೇರಿದಂತೆ ಇಬ್ಬರು ಸಹಾಯಕ ಅರ್ಚಕರು ಸಾವನ್ನಪ್ಪಿದ್ದರು. ಜಿಲ್ಲಾಡಳಿತ, ಎನ್ ಡಿ ಆರ್ ಎಫ್ ತಂಡ ಸತತ ಐದು ದಿನಗಳ ಪ್ರಯತ್ನದ ನಂತರ ನಾರಾಯಣ ಆಚಾರ್, ಆನಂದ ತೀರ್ಥ ಹಾಗೂ ಓರ್ವ ಸಹಾಯಕ ಅರ್ಚಕರ ಶವ ಪತ್ತೆಯಾಗಿತ್ತು. ಪತ್ನಿ ಶಾಂತಾ ಹಾಗೂ ಇನ್ನೋರ್ವ ಸಹಾಯಕ ಅರ್ಚಕರ ಶವ ಇನ್ನೂ ಪತ್ತೆ ಆಗಿಲ್ಲ. ಜಿಲ್ಲಾಡಳಿತ ಶವ ಪತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.ವಿದೇಶದಿಂದ ಮಡಿಕೇರಿಗೆ ಬಂದಿದ್ದ ಪುತ್ರಿಯರು
ಭೂಕುಸಿತವಾದ ವಿಷಯ ತಿಳಿದು ಹೆಣ್ಣು ಮಕ್ಕಳಿಬ್ಬರೂ ವಿದೇಶದಿಂದ ಕೊಡಗಿಗೆ ಬಂದಿದ್ದರು. ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಡಿಸಿ ಅವರ ಜೊತೆಯೂ ಮಾತು ಕತೆ ನಡೆಸಿದರು. ದುರ್ಘಟನೆ ಬಗ್ಗೆ ಕಣ್ಣೀರಿಟ್ಟಿದ್ದರು. ಕಾರ್ಯಾಚರಣೆಯಲ್ಲಿ ಮೊದಲಿಗೆ ಅರ್ಚಕರ ಅಣ್ಣ ಆನಂದ ತೀರ್ಥ ಅವರ ಶವ ದೊರೆತಿತ್ತು. ನಂತರ ನಾರಾಯಣ ಆಚಾರ್ ಹಾಗೂ ಸಹಾಯಕ ಅರ್ಚಕ ರವಿಕಿರಣ್ ಅವರ ಮೃತ ದೇಹಗಳು ಲಭಿಸಿತ್ತು. ಈ ಘಟನೆಗಳು ಮುಗಿದ ನಂತರ ಪುತ್ರಿಯರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ. ಇದೀಗ ಚೆಕ್ ಪಡೆಯಲೂ ಅಡ್ಡಿಯಾಗಿದೆ.
ಇದರ ಬಗ್ಗೆ ಮಾಹಿತಿ ಪಡೆದಿರುವ ತಹಶೀಲ್ದಾರ್ ಪಿ.ಎಸ್.ಮಹೇಶ್, ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಚೆಕ್ ತಿದ್ದುಪಡಿ ಮಾಡಿ ಈಗಿನ ಹೆಸರಿಗೆ ನೀಡುವುದಾಗಿ ಹೇಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಇದೇ ವಿಚಾರ ಚರ್ಚೆಯಲ್ಲಿದೆ...