ಕೊಡಗಿನಲ್ಲಿ ತುರ್ತು ಆಸ್ಪತ್ರೆಗೆ ಸಂಸದ ಪ್ರತಾಪ್ ಸಿಂಹ ಮನವಿ
ಕೊಡಗು, ಜುಲೈ 12: ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಅಭಿಯಾನ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿತ್ತು. ಕೊಡಗು ಜಿಲ್ಲೆಯಲ್ಲಿ ಬಹು ಸುಸಜ್ಜಿತ ಆಸ್ಪತ್ರೆಯ ಅಗತ್ಯ ಅತಿ ಹೆಚ್ಚಿದೆ ಎಂದು ನೆಟ್ಟಿಗರು ಈ ಆನ್ ಲೈನ್ ಅಭಿಯಾನವನ್ನು ಕೈಗೊಂಡಿದ್ದರು. ಆ ಅಭಿಯಾನಕ್ಕೆ ಸ್ಪಂದಿಸಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಇದೇ ವಿಚಾರವಾಗಿ ಆಸ್ಪತ್ರೆ ತೆರೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
'ಕೊಡಗಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಭಿಯಾನಕ್ಕೆ ಯಾವುದೇ ಅರ್ಥವಿಲ್ಲ'
ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಡಿಕೇರಿಯಲ್ಲಿ ತುರ್ತು ಆಸ್ಪತ್ರೆ ತೆರೆಯುವಂತೆ ಕೊಡಗಿನ ಅನೇಕರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಇಂದು ಸಚಿವರಾದ ಸದಾನಂದ ಗೌಡ, ಪಿಯುಷ್ ಘೋಯಲ್, ಶಾಸಕ ಅಪ್ಪಚ್ಚುರಂಜನ್ ಹಾಗೂ ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ನಿಯೋಗ ಇಂದು ಕೇಂದ್ರ ಆರೋಗ್ಯ ಖಾತೆ ಸಚಿವ ಡಾ.ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಕೊಡಗು ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಪ್ರತಿದಿನ ಹತ್ತಾರು ಅಪಘಾತಗಳು ಸಂಭವಿಸುತ್ತಿವೆ. ಗಾಯಾಳುಗಳ ಜೀವ ಉಳಿಸಲು ದೂರದ ಜಿಲ್ಲೆಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ದುಸ್ಥಿತಿ ಇದೆ. ಜಿಲ್ಲೆಯಲ್ಲಿ ಕಾರ್ಮಿಕ ವರ್ಗದ ಸಂಖ್ಯೆ ಹೆಚ್ಚಿದ್ದು, ವನ್ಯಜೀವಿ ದಾಳಿ ಸೇರಿದಂತೆ ಇನ್ನಿತರ ಅವಘಡಗಳಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಪರದಾಡುವವರನ್ನು ಉಳಿಸಿಕೊಳ್ಳಲು ಅಕ್ಕಪಕ್ಕದ ಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂದು ಸಿನಿಮಾ ನಟ ನಟಿಯರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರು, ಕ್ರಿಕೆಟಿಗರು ಸರ್ಕಾರಕ್ಕೆ ಮನವಿ ಮಾಡಿದ್ದರು.
ಕೊಡಗಿನಲ್ಲೂ ಆಸ್ಪತ್ರೆಗೆ ಅಭಿಯಾನ - ಸ್ಯಾಂಡಲ್ ವುಡ್ ಬೆಂಬಲ
ಸಂಸದ ಪ್ರತಾಪ್ ಸಿಂಹ ಸಹ ಈ ಬೇಡಿಕೆಗೆ ಸ್ಪಂದಿಸಿದ್ದು, ಮುಂದಿನ ನಡೆಯ ಕುರಿತು ಕಾದು ನೋಡಬೇಕಿದೆ.