ಮಡಿಕೇರಿಯಲ್ಲಿ ತಾಯಿ ಮಗನ ಪುನರ್ಮಿಲನದ ಹೃದಯಸ್ಪರ್ಶಿ ಕ್ಷಣ
ಮಡಿಕೇರಿ, ಫೆಬ್ರವರಿ 19: ಎಂಟು ತಿಂಗಳ ಬಳಿಕ ತಾಯಿ ಹಾಗೂ ಮಗ ಮತ್ತೆ ಒಂದಾದ ಹೃದಯಸ್ಪರ್ಶಿ ಘಟನೆ ಬುಧವಾರ ನಡೆದಿದೆ. ಮುಕ್ಕು(62) ಎಂಬ ವೃದ್ಧೆ ಉತ್ತರ ಪ್ರದೇಶದ ತಮ್ಮ ಮನೆಯಿಂದ ಅಕಸ್ಮಾತ್ತಾಗಿ ರೈಲು ಹತ್ತಿ ಮೈಸೂರಿಗೆ ಬಂದಿಳಿದಿದ್ದರು.
ಅಲ್ಲಿಂದ ಹೇಗೋ ಮಡಿಕೇರಿಗೆ ಬಂದು ಸೇರಿ ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷಾಟನೆಯಲ್ಲಿ ತೊಡಗಿದ್ದರು. ಸದ್ಯ ಕೊನೆಗೂ ತಮ್ಮ ಕುಟುಂಬವನ್ನು ಸೇರಿಕೊಳ್ಳುವುದರಲ್ಲಿ ಸಫಲರಾಗಿದ್ದಾರೆ.
ಕೊಡಗಿನಲ್ಲಿ ಆದಿವಾಸಿಗಳ ಗುಡಿಸಲು ಕಿತ್ತು ಹಾಕಿದ ಅಧಿಕಾರಿಗಳು: ಪ್ರಶ್ನಿಸಿದ ಯುವಕನಿಗೆ ಥಳಿತ
ಎಂಟು ತಿಂಗಳ ಹಿಂದೆ ಉತ್ತರ ಪ್ರದೇಶದ ತಮ್ಮ ಮನೆಯಿಂದ 60 ಕಿಲೋಮೀಟರ್ ದೂರದಲ್ಲಿರುವ ಊರಿಗೆ ಜಾತ್ರೆಗೆ ಹೋಗಲೆಂದು ಕುಟುಂಬ ತೆರಳುತ್ತಿತ್ತು. ಆ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಬೇರೆ ರೈಲಿನಲ್ಲಿ ವೃದ್ಧೆ ಮುಕ್ಕು ಹತ್ತಿಬಿಟ್ಟಿದ್ದರು. ಆದರೆ ಆ ರೈಲು ಬಂದದ್ದು ನೇರವಾಗಿ ಮೈಸೂರಿಗೆ ಅತ್ತ ವೃದ್ಧೆ ಮುಕ್ಕುವನ್ನು ಮನೆಯವರೆಲ್ಲ ಹುಡುಕಿ ಬೇಸತ್ತಿದ್ದರು. ಈ ಕುರಿತು ಪೊಲೀಸ್ ದೂರು ಕೂಡ ದಾಖಲಾಗಿತ್ತು.
ಇತ್ತ ಮುಕ್ಕು ಹೇಗೋ ಮಡಿಕೇರಿಗೆ ಬಂದು ತಲುಪಿದ್ದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯನ್ನು ಕಂಡ ಇಲ್ಲಿನ ತನಲ್ ಎಂಬ ವೃದ್ಧಾಶ್ರಮದ ಮುಖ್ಯಸ್ಥ ಮೊಹಮ್ಮದ್ ಮತ್ತು ಎಫ್ಎಂಸಿ ಕಾಲೇಜಿನ ಪ್ರೊಫೆಸರ್ ರಂಗಪ್ಪ ಇಬ್ಬರು ಈಕೆಯ ಕುರಿತು ಹೆಚ್ಚಿನ ಆಸ್ಥೆ ವಹಿಸಿದರು.
ಹುಡುಗಿ ನಿಂದಿಸಿದಳೆಂದು ಆತ್ಮಹತ್ಯೆ ಮಾಡಿಕೊಂಡ ವಿರಾಜಪೇಟೆ ಯುವಕ
ಈಕೆಯ ಬಳಿ ಇದ್ದ ಏಕೈಕ ಬ್ಯಾಗ್ ನ್ನು ತಡಕಾಡಿದಾಗ ಅದರಲ್ಲಿ ಹಳೆಯ ಆಧಾರ್ ಕಾರ್ಡ್ ಹಿಂಬದಿಯಲ್ಲಿ ಫೋನ್ ನಂಬರ್ ಇತ್ತು. ಅದಕ್ಕೆ ಕರೆ ಮಾಡಿದಾಗ ಸ್ವೀಕರಿಸಿದ ಉತ್ತರ ಪ್ರದೇಶ ರಾಜ್ಯದ ಬಾಂದಾ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಅಧಿಕಾರಿಯೊಬ್ಬರು ತಮಗೆ ತಿಳಿಯದು ಎಂದು ಹೇಳಿದರು.
ಕೊನೆಗೆ ಆಧಾರ್ ಕಾರ್ಡಿನಲ್ಲಿದ ವಿಳಾಸವನ್ನು ವಾಟ್ಸಪ್ ಮಾಡಿ ವಿನಂತಿಸಿದಾಗ ಇದು ದಾನಿನ್ ಪುರ ಗ್ರಾಮದ್ದು ಎಂದು ಹೇಳಿ ಅಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿ ರಾಮು ಎಂಬುವವರ ನಂಬರ್ ನೀಡಿದರು. ಪಂಚಾಯಿತಿ ಅಧಿಕಾರಿಗೆ ಮುಕ್ಕುವಿನ ವಿಡಿಯೋ ಕಳಿಸಿ ವಿನಂತಿಸಿದಾಗ ಮಗ ಗಂಗಾ ಪ್ರಸಾದನ ತಾಯಿ ಎಂದು ಪತ್ತೆ ಆಯಿತು.
ನಂತರ ಮಗನ ಸಂಪರ್ಕ ಸಿಕ್ಕು ಮಗನು ಮೂರು ಸಾವಿರ ಕಿಲೋಮೀಟರ್ ಪ್ರಯಾಣಿಸಿ ನಿನ್ನೆ ಬೆಂಗಳೂರಿಗೆ ಬಂದು ಇಂದು ಬೆಳಿಗ್ಗೆ ಮಡಿಕೇರಿಗೆ ಅಗಮಿಸಿದ.
ಇಂದು ಬೆಳಿಗ್ಗೆ ತನಲ್ ಸಂಸ್ಥೆಯ ಆವರಣ ಹೃದಯ ಸ್ಪರ್ಶಿ ದೃಶ್ಯಕ್ಕೆ ಸಾಕ್ಷಿಯಾಯಿತು. ಕಳೆದ 8 ತಿಂಗಳಿನಿಂದ ದೂರವಿದ್ದ ಮಗ ಹಾಗೂ ತಾಯಿ ಒಂದಾದ ಕ್ಷಣ ಇಬ್ಬರ ಕಣ್ಣಿಂದಲೂ ಆನಂದ ಭಾಷ್ಪ ಸುರಿಯಿತು. ಮಗ ಕಣ್ಣೀರು ಹಾಕುತ್ತಿದ್ದನ್ನು ನೋಡಿ ತಾಯಿಯೂ ಕೂಡ ಕಣ್ಣೀರು ಹಾಕಿ, ಮಗನ ಕಣ್ಣೀರು ಒರೆಸಿದರು, ಮಗನ ತಲೆಯನ್ನು ನೇವರಿಸಿ ಅಪ್ಪಿಕೊಂಡರು.
ಒನ್ ಇಂಡಿಯಾದೊಂದಿಗೆ ಮಾತನಾಡಿದ ತನಲ್ ಸಂಸ್ಥೆಯ ಮುಖ್ಯಸ್ಥ ಮೊಹಮದ್ ಅವರು ವೃದ್ಧೆಯು ಇಲ್ಲಿಗೆ ಬಂದಾಗ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು. ತಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿ ನಾನು ಹೊರಗೆ ಹೋಗಬೇಕು ಎಂದು ಗಲಾಟೆ ಮಾಡುತ್ತಿದ್ದರು. ಆದರೆ ಮಗನನ್ನು ಕಂಡ ಕ್ಷಣ ಸಹಜ ಸ್ಥಿತಿಗೇ ಮರಳಿ ಸಂತೋಷಗೊಂಡರು ಎಂದು ಹೇಳಿದರು.